Mysore
25
overcast clouds

Social Media

ಸೋಮವಾರ, 03 ಆಗಸ್ಟ್ 2026
Light
Dark

ಕೊಡಗು ವಿವಿ ಮುಚ್ಚುವ ನಿರ್ಧಾರಕ್ಕೆ ಆಮ್ ಆದ್ಮಿ ಪಾರ್ಟಿ ವಿರೋಧ

ಮಡಿಕೇರಿ: ಜಿಲ್ಲೆಯ ಬಡ ವಿದ್ಯಾರ್ಥಿಗಳ ಮಹತ್ವಾಕಾಂಕ್ಷೆಯ ಕೊಡಗು ವಿಶ್ವ ವಿದ್ಯಾಲಯ ಮುಚ್ಚುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿಯಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು ವಿವಿ ಸೇರಿದಂತೆ ರಾಜ್ಯದ ೯ ವಿವಿಗಳನ್ನು ಮುಚ್ಚುವ ನಿರ್ಧಾರ ಖಂಡನೀಯ. ಹೆಚ್ಚಿನ ಶಿಕ್ಷಣಕ್ಕೆ ಬೇರೆ ಜಿಲ್ಲೆಗಳಿಗೆ ಹೋಗದೆ ಜಿಲ್ಲೆಯಲ್ಲೆ ವಿದ್ಯಾಭ್ಯಾಸ ಮಾಡುವ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳ ಕನಸು ನುಚ್ಚುನೂರಾಗಿದೆ. ಅನೇಕ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದ್ದಾರೆ.

ರಾಜ್ಯ ಸರ್ಕಾರ ದುಂದುವೆಚ್ಚಕ್ಕೆ ಕಡಿವಾಣ ಹಾಕಿದ್ದರೆ ವಿವಿಗಳನ್ನು ಮುಚ್ಚುವ ಮತ್ತು ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹಾಕುವ ದುಸ್ಥಿತಿ ಒದಗಿ ಬರುತ್ತಿರಲಿಲ್ಲ. ಈಗಲಾದರು ಸರ್ಕಾರ ಎಚ್ಚೆತ್ತುಕೊಂಡು ಜನಸಾಮಾನ್ಯರಿಗೆ ಹೊರೆಯಾಗದಂತೆ ಶಿಕ್ಷಣ, ಆರೋಗ್ಯ ಮತ್ತು ಕೃಷಿಯಂತಹ ವಲಯಗಳ ಕಡೆ ಒಲವು ತೋರಿ ಈ ಬಾರಿಯ ಬಜೆಟ್ ಮಂಡಿಸಬೇಕು ಹಾಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಆರ್ಥಿಕ ದಿವಾಳಿತನಕ್ಕೆ ತುತ್ತಾಗಿದ್ದು, ಒಂದು ರೂಪಾಯಿಯ ಗ್ಯಾರಂಟಿ ನೀಡಿ ನಾಲ್ಕು ರೂಪಾಯಿ ವಸೂಲಿ ಮಾಡುತ್ತಿದೆ.

ಆಸ್ತಿ ನೋಂದಣಿ ಶುಲ್ಕ, ಆಸ್ತಿ ಮಾರ್ಗದರ್ಶನ ಮೌಲ್ಯಗಳು, ವಾಹನ ನೋಂದಣಿ ಶುಲ್ಕ, ಆಸ್ಪತ್ರೆ ಸೇವಾ ಶುಲ್ಕಗಳು, ಸರ್ಕಾರಿ ಕಾಲೇಜು ಶುಲ್ಕಗಳು, ಬೆಂಗಳೂರು ಮೆಟ್ರೋ ದರ, ಎಲೆಕ್ಟ್ರಿಕ್‌ ವಾಹನ ತೆರಿಗೆ, ವಿದ್ಯುತ್ ದರ, ನೀರಿನ ಸುಂಕ, ಆಸ್ತಿ ತೆರಿಗೆ, ಬಿತ್ತನೆ ಬೀಜಗಳ ದರ, ಬಿಯರ್ ದರ, ಹಾಲಿನ ದರ, ಬಸ್ ಪ್ರಯಾಣ ದರ ಮತ್ತು ಮದ್ಯದ ಮೇಲಿನ ತೆರಿಗೆಯನ್ನು ಸರ್ಕಾರ ದುಬಾರಿಗೊಳಿಸಿದೆ.

ಆರ್ಥಿಕವಾಗಿ ಕುಗ್ಗಿ ಹೋಗಿರುವ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಮತ್ತು ತೆರಿಗೆಯನ್ನು ನಿರತಂತರವಾಗಿ ಏರಿಸುತ್ತಲೇ ಬರುತ್ತಿದ್ದು, ಜನರ ಹಿತದೃಷ್ಟಿಯಿಂದ ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕು ಎಂದು ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ.

 

Tags:
error: Content is protected !!