ಮಡಿಕೇರಿ: 24 ಗಂಟೆಗಳಲ್ಲಿ ಕೊಡಗಿನ ಇಬ್ಬರನ್ನು ಬಲಿ ಪಡೆದಿದ್ದ ನರಭಕ್ಷಕ ಹುಲಿಯನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಕೆ.ಬಾಡಗ ಗ್ರಾಮದ ಚೂರಿಕಾಡು ಎಂಬಲ್ಲಿ 24 ಗಂಟೆಯ ಒಳಗಡೆ ಇಬ್ಬರ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿತ್ತು. ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಹುಲಿಯನ್ನು ಸೆರೆ ಹಿಡಿಯವಂತೆ ಸೋಮವಾರ ರಾತ್ರಿ ಅದೇಶ ಪ್ರಕಟಿಸಿತ್ತು.
ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಹುಲಿ ಹಿಡಿಯಲು 5 ಸಾಕಾನೆಗಳ ಸಹಕಾರದೊಂದಿಗೆ 150ಕ್ಕೂ ಅಧಿಕ ಸಿಬ್ಬಂದಿ ಫೀಲ್ಡ್ಗೆ ಇಳಿದು ಕಾಫಿ ತೋಟದಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಗ್ರಾಮದ ಯಾವುದೇ ತೋಟದಲ್ಲೂ ಹುಲಿ ಪತ್ತೆಯಾಗಿರಲಿಲ್ಲ. ಇದನ್ನೂ ಓದಿ: ಡೇಟಿಂಗ್ ಮಾಡುತ್ತಿದ್ದ 25ರ ಯುವತಿಯನ್ನು ಕೊಲೆ ಮಾಡಿ ಢಾಬಾದ ಫ್ರಿಜರ್ನಲ್ಲಿ ಬಚ್ಚಿಟ್ಟ
ಮಧ್ಯಾಹ್ನದ ಬಳಿಕ ಆಪರೇಷನ್ ಟೈಗರ್ ಅರಂಭ ಮಾಡಿದ ಅರಣ್ಯ ಇಲಾಖೆಯ ಸಿಬ್ಬಂದಿಗೆ ನಾಣಚ್ಚಿ ಗೇಟ್ ಸಮೀಪ ಹುಲಿಯ ಚಲನವಲನ ಪತ್ತೆಯಾಗಿತ್ತು. ಈ ಬೆನ್ನಲ್ಲೇ ದೂರದಿಂದಲೇ ಸಿಬ್ಬಂದಿ ಅರಿವಳಿಕೆಯನ್ನು ಶೂಟ್ ಮಾಡುವ ಮೂಲಕ ಪ್ರಜ್ಞೆ ತಪ್ಪಿಸಿ ಹುಲಿಯನ್ನು ಸೆರೆ ಹಿಡಿದಿದ್ದಾರೆ. ಸೆರೆಯಾದ ಹುಲಿಗೆ 8 ಅಥವಾ 9 ವರ್ಷ ಪ್ರಾಯವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಈ ಹಿಂದೆ ಜಾನುವಾರುಗಳು ಮಾತ್ರ ಬಲಿಯಾಗುತ್ತಿದ್ದವು. ಆದರೆ ಈಗ ಜನರು ಹುಲಿಗೆ ಆಹಾರವಾಗುತ್ತಿದ್ದಾರೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಲೇ ಮನುಷ್ಯರು ಬಲಿಯಾಗುತ್ತಿದ್ದಾರೆ. ಹುಲಿಯನ್ನು ಹೇಗಾದರೂ ಮಾಡಿ ಹಿಡಿಯಲೇಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದು ಆಗ್ರಹಿಸಿದ್ದರು.





