Mysore
19
scattered clouds

Social Media

ಗುರುವಾರ, 16 ಜನವರಿ 2025
Light
Dark

ಹೋಂ ಸ್ಟೆಯಲ್ಲಿ ಕಳವು : ಮೂವರು ಆರೋಪಿಗಳ ಬಂಧನ

ಮಡಿಕೇರಿ: ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಠಾಣಾ ವ್ಯಾಪ್ತಿಯ ಬೀರುಗ ಗ್ರಾಮದ ಆತ್ಮಹಿತ ಹೋಮ್ ಸ್ಟೇಯಲ್ಲಿ ಕಳವು ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೀರುಗ ಗ್ರಾಮದ ನಾಯಿಕಲ್ ನಿವಾಸಿಗಳಾದ ಮಂಜು, ಸಂಜು ಹಾಗೂ ಸುಧೀರ್ ಬಂಧಿತ ಆರೋಪಿಗಳು.
ತೆಲಂಗಾಣ ರಾಜ್ಯದ ಸಿಖೆಂದ್ರಬಾದ್ ವಾಸಿ ಡಾ.ರವೀಂದ್ರ ಕೊಟ್ಟಿರಿ ಅವರ ಮಾಲೀಕತ್ವದ ಹೋಮ್ ಸ್ಟೆಯನ್ನು ಸ್ಥಳೀಯರಾದ ಸುನಿಲ್ ನಿರ್ವಹಿಸುತ್ತಿದ್ದರು. ಕಳೆದ ಜೂ.೨೯ರಂದು ಹೋಂಸ್ಟೆಯಲ್ಲಿ ಕಳವು ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರು, ವಿಚಾರಣೆ ನಡೆಸಿದಾಗ ಹೋಂಸ್ಟೆಯಲ್ಲಿದ್ದ ಫ್ರಿಡ್ಜ್, ಸಿಲಿಂಡರ್, ಕುಕ್ಕರ್, ಬ್ಲಾಂಕೇಟ್, ಬೆಡ್ ಶೀಟ್ ಮುಂತಾದ ಸಾಮಗ್ರಿಗಳನ್ನು ಕಳವು ಮಾಡಿ ಆರೋಪಿಗಳು ಅರಣ್ಯದೊಳಗೆ ಬಚ್ಚಿಟ್ಟಿದ್ದನ್ನು ಒಪ್ಪಿಕೊಂಡರು. ಜೊತೆಗೆ ಕೆಲವು ಸಾಮಗ್ರಿಗಳನ್ನು ಮನೆಯಲ್ಲಿ ಇಟ್ಟಿರುವ ಬಗ್ಗೆ ಮಾಹಿತಿ ನೀಡಿದ ಮೇರೆಗೆ ಕಳವು ಮಾಡಿದ್ದ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಎ.ಅಯ್ಯಪ್ಪ ಹಾಗೂ ಪೊಲೀಸ್ ಉಪಾಧಿಕ್ಷಕ ನಿರಂಜನ್ ರಾಜೆ ಅರಸ್ ಆವರ ಮಾರ್ಗದರ್ಶನದಂತೆ ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ ಅವರ ನಿರ್ದೇಶನದಂತೆ ಶ್ರೀಮಂಗಲ ಠಾಣಾಧಿಕಾರಿ ರವಿಶಂಕರ್ ಹಾಗೂ ಎ.ಎಸ್.ಐ. ಬೋಪಯ್ಯ, ಸಿಬ್ಬಂದಿಗಳಾದ ಎಂ.ಕೆ. ಖಾಲಿದ್, ಶಿವಪ್ಪ ಮಂಜುನಾಥ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ