ಕಾರವಾರ : ಜಿಲ್ಲೆಯಲ್ಲಿ ಆರೋಗ್ಯ ಮೂಲಸೌಕರ್ಯಗಳ ಸುಧಾರಣೆ ಮಾಡಿಕೊಡಿ ಎಂದು ಕೇಳಿದ ಪತ್ರಕರ್ತರಿಗೆ ಆರೋಗ್ಯ ಸಚಿವರಾದ ಡಾ. ಸುಧಾಕರ್ ಅವರು, ಜಿಲ್ಲೆಯಲ್ಲಾಗಿರುವ ಆರೋಗ್ಯ ಸೌಕರ್ಯಗಳ ಕುರಿತು ಪ್ರವಚನ ನೀಡಿರುವ ಘಟನೆ ಮಂಗಳವಾರ ನಡೆದಿದೆ.
‘’ಭೌಗೋಳಿಕವಾಗಿ ವಿಸ್ತಾರವಾದ ಹಾಗೂ ಸೂಕ್ತ ವೈದ್ಯಕೀಯ ವ್ಯವಸ್ಥೆ ಇಲ್ಲದ ಉತ್ತರಕನ್ನಡ ಜಿಲ್ಲೆಯ ಜನತೆಗೆ ತುರ್ತು ಸಂದರ್ಭದಲ್ಲಿ ಹೊರ ಜಿಲ್ಲೆಗಳನ್ನು ಚಿಕಿತ್ಸೆಗಾಗಿ ಆಶ್ರಯಿಸಬೇಕಿದೆ. ಈ ವೇಳೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನ ರೆಫರಲ್ ಗಾಗಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡುವಷ್ಟು ಸಮಯ ಅಥವಾ ವ್ಯವಧಾನ ಇಲ್ಲದವರು ಪಕ್ಕದ ಜಿಲ್ಲೆಯ ಆಸ್ಪತ್ರೆಗಳಿಗೆ ಹೋಗಿ ದಾಖಲಾಗುತ್ತಾರೆ. ದಾಖಲಾದ ಬಳಿಕ ಆರೋಗ್ಯ ಕಾರ್ಡ್ ಪ್ರಯೋಜನ ಸಿಗುತ್ತಿಲ್ಲ. ಹೀಗಾಗಿ ಕಾರ್ಡ್ ನಿಯಮಗಳಲ್ಲಿ ಕೊಂಚ ಸಡಿಲಿಕೆ ನೀಡಬೇಕಿದೆ’’ ಎಂದು ಪತ್ರಕರ್ತರು ಸಚಿವರನ್ನು ಕೇಳಿದ್ದರು.
ಅದಕ್ಕೆ ಉತ್ತರಿಸಿದ ಸಚಿವರು, ‘’ಬೇರೆ ರಾಜ್ಯಗಳ ಚಿತ್ರಣ ನಿಮಗೆ ಗೊತ್ತಿಲ್ಲ. ಹೀಗಾಗಿ ಬಹಳ ಚೆನ್ನಾಗಿ ಪ್ರಶ್ನೆ ಕೇಳುತ್ತೀರಿ ಎಂದಿದ್ದಾರೆ. ಅಲ್ಲದೆ, ಬೇರೆ ರಾಜ್ಯಗಳಿಗೆ ಭೇಟಿ ನೀಡಿದರೆ ಕರ್ನಾಟಕ ಸ್ವರ್ಗ ಎನ್ನುತ್ತೀರಿ. ನಾನು ತಮಾಷೆ ಮಾಡುತ್ತಿಲ್ಲ. ನಾನು ಸತ್ಯ ಹೇಳುತ್ತಿದ್ದೇನೆ. ನೀವು ಈ ದೇಶದ ಕೆಲವು ರಾಜ್ಯಗಳಿಗೆ ಭೇಟಿ ಕೊಟ್ಟು ಆರೋಗ್ಯ ವ್ಯವಸ್ಥೆಗಳನ್ನ ನೋಡಿ ಕರ್ನಾಟಕದ ಬಗ್ಗೆ ಮಾತನಾಡಿ. ಒಂದೇ ಒಂದು ಕಿದ್ವಾಯಿ ಇತ್ತು, ಈಗ ಎಷ್ಟು ಕಡೆ ಮಾಡಿದ್ದೇವೆ? ಎಷ್ಟು ಕಡೆಗಳಲ್ಲಿ ರೇಡಿಯೋ ಥೆರಪಿ, ಕಿಮೋ ಥೆರಪಿ ಮಾಡಿದ್ದೇವೆ. ಈ ಬಾರಿಯ ಬಜೆಟ್ ನಲ್ಲಿ 16 ಕಡೆ ಈ ಬಾರಿ ಕಿಮೋ ಥೆರಪಿ ಮಾಡಿದ್ದೇವೆ. ಎಲ್ಲವನ್ನೂ ಎಲ್ಲಾ ಕಡೆ ಮಾಡಲಾಗುವುದಿಲ್ಲ’’ ಎಂದಿದ್ದಾರೆ.