ಚಾಮರಾಜನಗರಕ್ಕೆ ಮೂರನೇ ಬಾರಿ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮೈಸೂರು: ಇರುವುದೊಂದೇ ಭೂಮಿ. ಎಲ್ಲವೂ ಒಂದಕ್ಕೊಂದು ಹೊಂದಿಕೊಂಡಿದೆ. ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಅನ್ನೋದರ ಬಗ್ಗೆ ನನಗೆ ನಂಬಿಕೆ ಇಲ್ಲ…
ಹೀಗೆಂದು ಸ್ಪಷ್ಟವಾಗಿ ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಡಿ ಜಿಲ್ಲೆಗೆ ಅಂಟಿದ ಮೌಢ್ಯದ ಕೊಳಕನ್ನು ನಿವಾರಿಸುವ ಪ್ರಯತ್ನ ಮಾಡಿದರು. ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡುವ ಸಲುವಾಗಿ ಮಂಗಳವಾರ ಮೈಸೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಚಾಮರಾಜನಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಪ್ರತೀತಿ ಇರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, “” ರಾಜ್ಯದ 31ಜಿಲ್ಲೆಗಳ ಪೈಕಿ ಚಾಮರಾಜನಗರವೂ ಒಂದು. ಜಿಲ್ಲೆಗೆ ಈ ಹಿಂದೆಯೂ ಭೇಟಿ ನೀಡಿದ್ದೇನೆ. ಸಿಎಂ ಆದ ಬಳಿಕ ಮೂರು ಬಾರಿ ಭೇಟಿ ನೀಡಿದ್ದೇನೆ. ಮೂಢನಂಬಿಕೆ ನನ್ನ ತಲೆಯಲ್ಲಿಲ್ಲ.ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧ ʼʼ ಎಂದು ಉತ್ತರಿಸಿದರು.
ಗಡಿ ವಿವಾದ: ನಿಲುವು ಮಂಡನೆ
ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆದಿರುವ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಕರ್ನಾಟಕದ ನಿಲುವು ಮಂಡಿಸುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ಅಂತಿಮ ಹಂತದಲ್ಲಿರುವುದರಿಂದ ಮುಂದಿಡುವ ಹೆಜ್ಜೆಯ ಕುರಿತು ಚರ್ಚಿಸುತ್ತೇವೆ. ಮಹಾಜನ್ ವರದಿಯ ಪ್ರಕಾರ ಈತನಕ ಏನು ನಡೆದಿದೆ, ೨೦೧೪ರ ನಂತರ ನಡೆದಿರುವ ಬೆಳವಣಿಗೆಗಳು ಮತ್ತು ಸುಪ್ರೀಂಕೋರ್ಟ್ನಲ್ಲಿ ರಾಜ್ಯದ ಬೇಡಿಕೆ ಇರುವ ವಿಚಾರವನ್ನು ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದರು.
ಗಡಿ ವಿವಾದಕ್ಕೆ ಸಂಬಂಧಿಸಿದ ಸಭೆ ಬಳಿಕ ಅವಕಾಶ ದೊರೆತರೆ ಸಂಪುಟ ವಿಸ್ತರಣೆ ವಿಚಾರ ಪ್ರಸ್ತಾಪ ಮಾಡಲಾಗುವುದು. ಸಂಪುಟ ವಿಸ್ತರಣೆಗೆ ನಾವು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದೇವೆ. ಆದರೆ, ಹೈಕಮಾಂಡ್ ಈ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ಕೃಷಿ ಇಲಾಖೆಯಿಂದ ವರದಿ
ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಗೀಡಾಗಿರುವ ಬಗ್ಗೆ ಕೃಷಿ ಇಲಾಖೆಯಿಂದ ವರದಿ ಕೇಳಲಾಗಿದೆ. ರಾಗಿ ಬೆಳೆಯು ಕಟಾವಿಗೆ ಬಂದಿರುವ ಹಂತದಲ್ಲಿ ಮಳೆ ಬಿದ್ದಿರುವ ಕಾರಣ ನಷ್ಟವಾಗಿದೆ ಎನ್ನುವ ಮಾಹಿತಿ ಮೇಲ್ನೋಟಕ್ಕೆ ಬಂದಿದೆ. ಹಾಗಾಗಿ, ಯಾವ್ಯಾವ ಬೆಳೆಗಳು ಹಾನಿಗೀಡಾಗಿವೆ ಎಂಬುದರ ಬಗ್ಗೆ ವರದಿ ಬಂದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಮಹದಾಯಿ ನದಿ ನೀರಿನ ವಿವಾದಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರು ಕಾರಣ. ಗೋವಾ ಚುನಾವಣೆಯ ಸಂದರ್ಭದಲ್ಲಿ ಗೋವಾದಿಂದ ಒಂದು ಹನಿ ನೀರನ್ನು ಬಿಡುವುದಿಲ್ಲವೆಂದು ಹೇಳಿ ಕರ್ನಾಟಕದ ಜನರ ಮೇಲೆ ಗೋಡೆ ಕಟ್ಟಿದರು. ಅದೇ ರೀತಿ ಕೃಷ್ಣ ಜಲವಿವಾದದಲ್ಲಿ ರಾಜ್ಯದ ಹಕ್ಕನ್ನು ಪ್ರತಿಪಾದಿಸಲು ಪ್ರಯತ್ನ ಮಾಡಲಿಲ್ಲ ಎಂದು ಕಿಡಿಕಾರಿದರು.
ಗೊಂದಲ ಸೃಷ್ಟಿಸುವ ಕೆಲಸ
ಕಳೆದ ೪೦ ವರ್ಷಗಳ ಬೇಡಿಕೆಯಾದ ಮೀಸಲಾತಿ ಸಮಸ್ಯೆಯನ್ನು ಕಾಂಗ್ರೆಸ್ ಪರಿಹರಿಸಲು ಯತ್ನಿಸಲಿಲ್ಲ. ಸಿದ್ದರಾಮಯ್ಯ ಅವರೇ ಅಧಿಕಾರದಲ್ಲಿದ್ದಾಗ ಒಳ ಮೀಸಲಾತಿ ಕುರಿತು ನಡೆದ ಸಮಾವೇಶದಲ್ಲಿ ದೀಪ ಹಚ್ಚಿ ಬಂದರೇ ಹೊರತು ಬೇರೇನೂ ಮಾಡಲಿಲ್ಲ. ಕಾಂಗ್ರೆಸ್ ನಾಯಕರ ನಡೆ, ನುಡಿಯ ಬಗ್ಗೆ ಜನರಿಗೆ ಗೊತ್ತಾಗಿದೆ. ಪದೇ ಪದೇ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಎಂದು ಟೀಕಿಸಿದರು. ಒಳ ಮೀಸಲಾತಿ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಈಗ ಜನರಲ್ಲಿ ಗೊಂದಲ ಮೂಡಿಸಲು ಮುಂದಾಗಿದ್ದಾರೆ. ಎಸ್ಸಿ-ಎಸ್ಟಿ ಮತಗಳು ಕೈತಪ್ಪಿ ಹೋಗುವ ಭಯದಿಂದ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಒಟ್ಟಿಗೆ ಪ್ರವಾಸ ಮಾಡುವುದರಿಂದ ನಮಗೇನೂ ತೊಂದರೆ ಇಲ್ಲ. ಅವರು ಯಾವಾಗ ಒಟ್ಟಿಗೆ ಇರುತ್ತಾರೆ ಅಥವಾ ಯಾವಾಗ ಬೇರೆಯಾಗುತ್ತಾರೆ ಎಂಬುದು ನಮಗಿಂತ ನಿಮಗೆ(ಮಾಧ್ಯಮದವರಿಗೆ)ಚೆನ್ನಾಗಿ ಗೊತ್ತಿರುತ್ತದೆ. ಅವರ ಯಾತ್ರೆ ಕುರಿತು ಅಷ್ಟೇನೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಲೇವಡಿ ಮಾಡಿದರು.
ಚೀನಾ ಹಿಮ್ಮೆಟ್ಟಿಸುವ ಶಕ್ತಿ ಇದೆ
ಭಾರತಕ್ಕೆ ಚೀನಾ ಹಿಮ್ಮೆಟ್ಟಿಸುವ ಶಕ್ತಿಯಿದೆ. ಭಾರತ ಮೊದಲಿನಂತಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ಭಾರತಕ್ಕಿದೆ. ಹಾಗಾಗಿ,ಚೀನಾಕ್ಕೆ ಪ್ರತ್ಯುತ್ತರ ಕೊಡುವ ಸಾಮರ್ಥ್ಯವಿದೆ ಎಂದರು. ಚೀನಾ ಗಡಿಯಲ್ಲಿ ಮೊದಲು ಸಂಪರ್ಕ ಇರಲಿಲ್ಲ. ಈಗ ರಸ್ತೆ,ಬ್ರಿಡ್ಜ್ ಸೇರಿದಂತೆ ಮೊದಲಾದ ವ್ಯವಸ್ಥೆ ಹೊಂದಿರುವ ಕಾರಣ ಹೆದರಿಸುವ ಶಕ್ತಿ ಇದೆ ಎಂದು ಹೇಳಿದರು. ಮಹಾಪೌರ ಶಿವಕುಮಾರ್,ಶಾಸಕ ಬಿ.ಹರ್ಷವರ್ಧನ ಹಾಜರಿದ್ದರು. ಮಳೆ ಹಿನ್ನೆಲೆಯಲ್ಲಿ ಸಿಎಂ ಅವರ ಮಲೆಮಹದೇಶ್ವರ ಬೆಟ್ಟದ ಭೇಟಿ ಕಾರ್ಯಕ್ರಮ ರದ್ದಾಗಿದೆ.





