ಹಾಸನ : ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯ ವೇಳೆ ಒಂಟಿ ಸಲಗದೊಂದಿಗಿನ ಕಾದಾಟದಲ್ಲಿ ಉಸಿರು ಚೆಲ್ಲಿದ ಅರ್ಜುನನನ್ನು ನೆನೆದು ಮಾವುತ ವಿನು ಭಾವುಕರಾಗಿದ್ದಾರೆ.
ನನ್ನ ಅರ್ಜುನನನ್ನು ಬದುಕಿಸಿಕೊಡಿ ಇಲ್ಲವಾದರೆ ನನ್ನನ್ನೂ ಹಾಗೂ ನನ್ನನ್ನೂ ಅವನೊಂದಿಗೆ ಮಣ್ಣು ಮಾಡಿ ಎಂದು ಗೋಳಾಡಿದ್ದಾರೆ.
ಮಾವುತ ವಿನು ಅರ್ಜುನನ ಸೊಂಡಿಲನ್ನು ತಬ್ಬಿಕೊಂಡು ನನ್ನ ಆನೆಯನ್ನು ಬದುಕಿಸಿಕೊಡಿ. ನನ್ನ ಅರ್ಜುನನನ್ನು ಮೈಸೂರಿಗೆ ಕಳುಹಿಸಿಕೊಡಿ ಇಲ್ಲದಿದ್ದರೆ ಅವನ ಜೊತೆ ನನ್ನನ್ನೂ ಮತ್ತು ನನ್ನ ಕುಟುಂಬವನ್ನೂ ಮಣ್ಣು ಮಾಡಿ. ನನ್ನ ಹೆಂಡತಿ ಮಕ್ಕಳಿಗೆ ಅವನು ಸತ್ತಿಲ್ಲ ಅಂತಾ ಹೇಳಿದ್ದೀನಿ ನನ್ನ ಅರ್ಜುನನನ್ನು ನನ್ನ ಜೊತೆ ಕಳುಹಿಸಿಕೊಡಿ ಎಂದು ಬಿಕ್ಕಳಿಸಿ ಬಿಕ್ಕಳಿಸಿ ಅತ್ತಿದ್ದಾರೆ.
ಮಾವುತ ವಿನು ಅವರು ಅರ್ಜುನನೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ನೆನ್ನೆ ಅರ್ಜುನನ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದಿದ್ದ ವಿನು ಅವರನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ಕೊಂಚ ಚೇತರಿಸಿಕೊಂಡು ಅರ್ಜುನನ ಅಂತ್ಯಕ್ರಿಯೆಗೆ ಬಂದಿದ್ದ ವಿನು ತಮ್ಮ ಪ್ರೀತಿಯ ಅರ್ಜುನನನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ.
ವೀರಮರಣವನ್ನಪ್ಪಿದ ಅರ್ಜುನನ ಅಂತ್ಯಕ್ರಿಯೆಗೆ ಅಭಿಮಾನಿಗಳ ದಂಡೇ ಹರಿದುಬಂದು ಅಂತಿಮ ನಮನ ಸಲ್ಲಿಸಿದೆ. ಹಾಸನ ಜಿಲ್ಲೆಯ ಸಕಲೇಶಪುರದ ಯಸಳೂರು ವಲಯದ ದಬ್ಬಳಿಕಟ್ಟೆ ಸಮೀಪವಿರುವ ಕೆಎಫ್ ಡಿಸಿ ನೆಡುತೋಪಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಮೈಸೂರು ಅರಮನೆಯ ರಾಜ ಪುರೋಹಿತರ ನೇತೃತ್ವದಲ್ಲಿ ಅರ್ಜುನನ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯ್ತು.
ಎಂಟು ವರ್ಷಗಳ ಕಾಲ ನಾಡ ಹಬ್ಬ ದಸರಾ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟು ಜನರ ಪ್ರೀತಿಪಾತ್ರವಾಗಿದ್ದ 64 ವರ್ಷದ ಅರ್ಜುನನಿಗೆ ಜಿಲ್ಲಾಡಳಿತದಿಂದ ಅಪರ ಜಿಲ್ಲಾಧಿಕಾರಿಗಳಾದ ಆರ್ .ಲೋಕನಾಥ್ ಅವರು ಶ್ರದ್ಧಾಂಜಲಿ ಸಲ್ಲಿಸಿದರು.