ಹಾಸನ: ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹುಂಡಿಗನಾಳ ಗ್ರಾಮದಲ್ಲಿ ನಡೆದಿದೆ.
ಕೆರೆಯಲ್ಲಿ ಈಜಲೆಂದು ಐವರು ಹೋಗಿದ್ದರು. ಅವರಲ್ಲಿ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ. ವಿಜಯ್ ಕುಮಾರ್ ಹಾಗೂ ಸುಜನ್ ಎಂಬುವವರೇ ಮೃತ ಮಕ್ಕಳಾಗಿದ್ದಾರೆ.
ಇಂದು ಭಾನುವಾರವಾದ ಹಿನ್ನೆಲೆಯಲ್ಲಿ ರಜೆ ಇದ್ದ ಕಾರಣ ಮಕ್ಕಳು ಕೆರೆಯಲ್ಲಿ ಈಜಲು ಹೋಗಿ ದುರಂತಕ್ಕೀಡಾಗಿದ್ದಾರೆ.
ಜವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬಾಲಕರ ಶವವನ್ನು ಕೆರೆಯಿಂದ ಮೇಲಕ್ಕೆತ್ತಲಾಗಿದೆ.





