ಹೊಸ ವರ್ಷದ ದಿನವೇ ಹಾಸನದ ದಾಸರಕೊಪ್ಪದಲ್ಲಿ ತಾಯಿ ಹಾಗೂ ಮಕ್ಕಳಿಬ್ಬರು ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದರು. ತುಮಕೂರಿನಲ್ಲಿ ಬೇಕರಿ ಕೆಲಸ ಮಾಡುತ್ತಿದ್ದ ಪತಿ ತೀರ್ಥಪ್ರಸಾದ್ ಪತ್ನಿ ಶಿವಮ್ಮ ಹಾಗೂ ಮಕ್ಕಳಾದ ಸಿಂಚನಾ ಹಾಗೂ ಪವನ್ರನ್ನು ನೋಡಲು ಮನೆಗೆ ಬಂದಿದ್ದ. ರಾತ್ರಿ ಬಾಗಿಲು ತೆಗೆಯದ ಕಾರಣ ಮನೆ ಮೇಲೆ ಮಲಗಿದ್ದ. ಇನ್ನು ಬೆಳಗ್ಗೆಯೂ ಬಾಗಿಲು ತೆರೆಯದ ಕಾರಣ ಬಾಗಿಲು ಒಡೆದು ಒಳಹೋಗಿದ್ದ ಪತಿಗೆ ಪತ್ನಿ ಹಾಗೂ ಮಕ್ಕಳ ಶವ ದೊರಕಿತ್ತು.
ಮೊದಲಿಗೆ ಅನಿಲ ಸೋರಿಕೆಯಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತಾದರೂ ಇದೀಗ ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬಿದ್ದಿದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಮೊದಲಿಗೆ ಪತಿ ತೀರ್ಥಪ್ರಸಾದ್ ವಿಜಯಪುರದಲ್ಲಿ ಬೇಕರಿ ನಡೆಸುತ್ತಿದ್ದ ಈ ಸಂದರ್ಭದಲ್ಲಿ ಶಿವಮ್ಮಗೆ ನಿಂಗಪ್ಪ ಕಾಗವಾಡನ ಪರಿಚಯವಾಗಿತ್ತು. ಆ ಬಳಿಕ ವಿಜಯಪುರದಲ್ಲಿ ನಷ್ಟ ಅನುಭವಿಸಿದ ತೀರ್ಥಪ್ರಸಾದ್ ತುಮಕೂರಿನಲ್ಲಿ ಬೇಕರಿ ತೆರೆದಿದ್ದ. ಇತ್ತ ಪತ್ನಿ ಹಾಸನದಲ್ಲಿ ಮಕ್ಕಳೊಂದಿಗೆ ವಾಸವಿದ್ದಳು. ಗಂಡ ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದದ್ದನ್ನೇ ಅನುಕೂಲ ಮಾಡಿಕೊಂಡ ಶಿವಮ್ಮ ನಿಂಗಪ್ಪ ಜತೆ ಅಕ್ರಮ ಸಂಬಂಧ ಬೆಳೆಸಿದ್ದಳು.
ಆದರೆ ಅದೇನಾಯಿತೋ ಏನೋ ಹೊಸವರ್ಷದ ದಿನ ಮನೆಗೆ ಭೇಟಿ ನೀಡಿದ್ದ ನಿಂಗಪ್ಪ ಶಿವಮ್ಮ ಹಾಗೂ ಮಕ್ಕಳನ್ನು ಕತ್ತು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.