Mysore
34
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಹನೂರು – ಉಡುತೊರೆ ಜಲಾಶಯ ಭರ್ತಿ : ಬಾಗಿನ ಅರ್ಪಿಸಿದ ಶಾಸಕ ಆರ್. ನರೇಂದ್ರ

ಹನೂರು: ತಾಲೂಕಿನ ಪ್ರಮುಖ 8 ಜಲಾಶಯಗಳ ಪೈಕಿ ರಾಮನಗುಡ್ಡ ಹೊರತುಪಡಿಸಿ 7 ಜಲಾಶಯಗಳು ಭರ್ತಿಯಾಗಿರುವುದು ಸಂತಸದ ವಿಚಾರ ಎಂದು ಶಾಸಕ ಆರ್ ನರೇಂದ್ರ ತಿಳಿಸಿದರು.

ತಾಲ್ಲೂಕಿನ ಅಜ್ಜೀಪುರ ಸಮೀಪದ ಉಡುತೊರೆ ಜಲಾಶಯ ತುಂಬಿದ ಹಿನ್ನೆಲೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಉಡುತೊರೆ ಜಲಾಶಯ ಸತತ ಎರಡು ವರ್ಷಗಳಿಂದ ಭರ್ತಿಯಾಗುತ್ತಾ ಬಂದಿದೆ, ಕಳೆದ 18 ವರ್ಷಗಳಿಂದ ಮೇ ಮತ್ತು ಜೂನ್ ತಿಂಗಳಲ್ಲಿ ಜಲಾಶಯಗಳು ತುಂಬಿದ ಇತಿಹಾಸವೇ ಇಲ್ಲ,ಕಳೆದ 2ವರ್ಷಗಳಿಂದ ಸಮರ್ಪಕ ಮಳೆ ಆಗುತ್ತಿರುವುದರಿಂದ ರೈತರಿಗೆ ಅನುಕೂಲವಾಗಿದೆ. ಜಲಾಶಯಗಳ ನಿರ್ವಹಣೆಗೆ ಸಂಬಂಧಪಟ್ಟ ನೀರಾವರಿ ಇಲಾಖೆಯವರು ಸಮರ್ಪಕ ಅನುದಾನವನ್ನು ನೀಡದೇ ಇರುವುದರಿಂದ ಜಲಾಶಯಗಳು ಮತ್ತು ಕಾಲುವೆಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಗುಂಡಾಲ್ ಜಲಾಶಯ ಹಾಗೂ ಉಡುತೊರೆ ಜಲಾಶಯ ಅಭಿವೃದ್ಧಿಗೆ ತಲಾ 15 ಕೋಟಿ ರೂ.ಗಳ ಅಗತ್ಯವಿದೆ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಆದರೂ ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಮಗೆರೆಯಲ್ಲಿರುವ ನೀರಾವರಿ ಕಚೇರಿಯನ್ನು ಅಜ್ಜೀಪುರಕ್ಕೆ ಸ್ಥಳಾಂತರಿಸಬೇಕೆಂದು ಮೂರು ಜನ ಉಸ್ತುವಾರಿ ಸಚಿವರುಗಳಿಗೆ ಮನವಿ ಮಾಡಿಕೊಂಡಿದ್ದೆ.ಆದರೆ ಒಬ್ಬರು ಸ್ಪಂದಿಸಲಿಲ್ಲ ಇದಲ್ಲದೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ ಇದುವರೆಗೆ ಕ್ರಮ ವಹಿಸಿಲ್ಲ ಎಂದರು.

ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿಯನ್ನು ಹನೂರಿಗೆ ಸ್ಥಳಾಂತರಿಸಲು ಈಗಾಗಲೇ ಸರ್ಕಾರ ಆದೇಶಿಸಲಾಗಿದೆ . ಅತಿ ಶೀಘ್ರದಲ್ಲಿ ಕಚೇರಿ ಸ್ಥಳಾಂತರವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಬಸವರಾಜು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮುರುಡೇಶ್ವರ ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ ಮುಖಂಡರಾದ ಎಂ. ಮಾದೇವ್, ಅಜ್ಜೀಪುರ ನಾಗರಾಜು, ಕಲಂದರ್ ಪಾಷ ಎಇ ವೆಂಕಟೇಶ್ ಪ್ರಭು ಎಇಇಗಳಾದ ದೊಡ್ಡಿಂದುವಾಡಿ ರಮೇಶ್,ನವೀನ್,ಮಲ್ಲಿಕಾರ್ಜುನ್ ಸೇರಿದಂತೆ ಇನ್ನಿತರರು ಹಾಜರಿದ್ದರು .

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ