Mysore
24
broken clouds

Social Media

ಶುಕ್ರವಾರ, 15 ಮೇ 2026
Light
Dark

ಸರ್ವೆಗೊಂಡ ಸ್ಮಶಾನದ ಜಾಗಗಳನ್ನು ಗ್ರಾಪಂಗಳಿಗೆ ಹಸ್ತಾಂತರಿಸಿ : ಶಾಸಕ ಜಿಟಿಡಿ ಸೂಚನೆ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಸ್ಮಶಾನ,ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಬೇಕಾದ ಸರ್ಕಾರಿ ಭೂಮಿಯನ್ನು ಗುರುತಿಸಿ ಮೀಸಲಿಡುವಂತೆ ಶಾಸಕ ಜಿ.ಟಿ.ದೇವೇಗೌಡ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಮೈಸೂರು ತಾಲ್ಲೂಕಿನಲ್ಲಿ ಬರುವ ಗ್ರಾಮಗಳಿಗೆ ಸ್ಮಶಾನ,ಘನತ್ಯಾಜ್ಯ ಘಟಕಗಳನ್ನು ನಿರ್ಮಾಣ ಮಾಡುವ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಹಲವಾರು ಗ್ರಾಮಗಳಲ್ಲಿ ಸ್ಮಶಾನದ ಸಮಸ್ಯೆ ಇಲ್ಲ. ಆದರೆ ಕೆಲವು ಗ್ರಾಮಗಳಲ್ಲಿ ಸ್ಮಶಾನದ ಜಾಗಕ್ಕೆ ತುಂಬಾ ತೊಂದರೆ ಆಗಿರುವ ಕುರಿತು ದೂರುಗಳು ಬರುತ್ತಿರುವ ಕಾರಣ ತಕ್ಷಣವೇ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಜಮೀನನ್ನು ಗುರುತಿಸಬೇಕು. ಸರ್ವೆ ನಂಬರ್ ಗಳು ಅಳತೆ ಮಾಡಿ ಸ್ಕೆಚ್ ಮಾಡಿಕೊಟ್ಟ ಮೇಲೆ ಗ್ರಾಪಂಗೆ ಹಸ್ತಾಂತರ ಮಾಡಬೇಕು ಎಂದು ಹೇಳಿದರು. ಕೆಲವು ಗ್ರಾಮಗಳಲ್ಲಿ ಸ್ಮಶಾಸಕ್ಕಾಗಿ ಜಾಗ ಗುರುತಿಸಿ ಅಳತೆ ಮಾಡಿರುವ ಕಾರಣ ಕ್ಲೀನ್ ಮಾಡಿ,ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಕಂದಾಯ, ಪಿಡಿಒಗಳು,ಸರ್ವೆಗಳು ಪರಸ್ಪರ ಸಮನ್ವಯ ಸಾಗಿಸಿಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಸ್ಮಶಾನಕ್ಕೆ ಜಾಗ ಇಲ್ಲವೆಂದು ದೂರು ಬರುತ್ತಿದೆ. ಮುಂದಿನ ದಿನಗಳಲ್ಲಿ ಸ್ಮಶಾನ ಜಾಗದ ಕೊರತೆ ಇರುವ ಬಗ್ಗೆ ಒಂದು ದೂರು ಬರದಂತೆ ಮಾಡಬೇಕು ಎಂದು ತಾಕೀತು ಮಾಡಿದರು.
ಭೂಮಾಪಕರು ಮತ್ತು ಪಿಡಿಒಗಳು ಪರಸ್ಪರ ಸಮಾಲೋಚನೆ ನಡೆಸಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಜಾಗ ಗುರುತಿಸಿ ಸರ್ವೆ ನಡೆಸಲು ಪತ್ರ ವ್ಯವಹಾರ ಮಾಡಬೇಕು. ಸರ್ವೆ ಮಾಡಿ ಸ್ಕೆಚ್ ಕೊಟ್ಟ ಮೇಲೆ ಗ್ರಾಪಂಗೆ ನೀಡಬೇಕು. ಈ ವಿಚಾರದಲ್ಲಿ ಪರಸ್ಪರ ಸಮನ್ವಯತೆ ಇಲ್ಲದಿದ್ದರೆ ಕಷ್ಟವಾಗಲಿದೆ ಎಂದರು. ಹಿನಕಲ್,ಬೆಳವಾಡಿ,ಕೂರ್ಗಳ್ಳಿಯಲ್ಲಿ ಜಾಗ ಗುರುತಿಸಲಾಗಿದೆ. ಸ್ಕೆಚ್ ಮಾಡಿ ಸಲ್ಲಿಸಿದ ತಕ್ಷಣವೇ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ತೆರೆಯುತ್ತೇವೆ. ಬೆಳವಾಡಿಯಲ್ಲಿ ಮೀಸಲಿಟ್ಟಿರುವ ಜಾಗವನ್ನು ಸ್ಮಶಾನಕ್ಕೆ ಕೊಡುವುದಕ್ಕೆ ಸ್ಕೆಚ್ ಮಾಡಲು ಪತ್ರ ಬರೆಯಲಾಗಿದೆ ಎಂದು ಪೌರಾಯುಕ್ತ ನರಸಿಂಹಮೂರ್ತಿ ಹೇಳಿದರು.ಮೂಗನಹುಂಡಿ, ನಗರ್ತಹಳ್ಳಿ,ಉದ್ಭೂರು,ಕಾಟೂರು ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿದೆ. ಸ್ಕೆಚ್‌ಮಾಡಿಸಿದ ಮೇಲೆ ಹಸ್ತಾಂತರ ಮಾಡುತ್ತೇವೆಂದು ಪಿಡಿಒ ಹೇಳಿದರು. ಸರ್ಕಾರಿ ಶಾಲೆಗಳ ಜಾಗದ ಬಗ್ಗೆ ಸರ್ವೆ ಮಾಡಿದ್ದರೂ ಈತನಕ ಸ್ಕೆಚ್ ಕೊಟ್ಟಿಲ್ಲವೆಂದು ಪಿಡಿಒಗಳು ಶಾಸಕರ ಗಮನ ಸೆಳೆದಾಗ ಜಂಟಿ ಸರ್ವೆ ಮಾಡಿದ ಮೇಲೆ ಯಾಕೆ ಕೊಟ್ಟಿಲ್ಲ. ತಕ್ಷಣವೇ ಸ್ಕೆಚ್ ಕೊಡಬೇಕು. ಕಂದಾಯ ಇಲಾಖೆ ಮತ್ತು ಭೂಮಾಪಕರು ಜಂಟಿ ಸರ್ವೆ ಮಾಡಿದ ಮೇಲೆ ದಾಖಲೆ ಮತ್ತು ಸ್ಕೆಚ್ ಕೊಡಬೇಕು.
ಸರ್ಕಾರಿ ಶಾಲೆಗಳ ಜಾಗವನ್ನು ಸರ್ವೆ ಮಾಡಿ, ದಾಖಲಾತಿಗಳನ್ನು ಶಾಲೆಗಳ ಕೂಡಲೇ ಹಸ್ತಾಂತರ ಮಾಡುವಂತೆ ಸೂಚಿಸಿದರು.
ತಹಶೀಲ್ದಾರ್ ಗಿರೀಶ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಗಿರೀಶ್, ಎಡಿಎಲ್‌ಆರ್ ವಿವೇಕ್, ಹೂಟಗಳ್ಳಿ ನಗರಸಭೆ ಪೌರಾಯುಕ್ತ ನರಸಿಂಹಮೂರ್ತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಎ.ಎಂ.ಶ್ರೀಧರ್, ವಿ.ಪುಷ್ಪಲತಾ, ಶ್ಯಾಂಸುಂದರ್, ವೆಂಕಟೇಶ್, ಉಪ ತಹಸಿಲ್ದಾರ್ ಎನ್.ಎಂ. ನಿಂಗಪ್ಪ, ಕುಬೇರ್, ರಾಜಸ್ವ ನಿರೀಕ್ಷಕರಾದ ಸಿ.ವಿ.ಲೋಹಿತ್, ಶಿವಕುಮಾರ್, ತಾಲ್ಲೂಕು ಭೂ ಮಾಪಕ ಡಿ.ಸುರೇಶ್,ಭೂ ಮಾಪಕರಾದ ಧನಪಾಲ್ ಶೆಟ್ಟಿ, ಎನ್.ಜಯಬೋರೇಗೌಡ ಇನ್ನಿತರರು ಹಾಜರಿದ್ದರು.

ಸಭೆಯಲ್ಲಿ ಭೂಮಾಪಕರು,ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು,ರಾಜಸ್ವ ನಿರೀಕ್ಷಕರನ್ನು, ಗ್ರಾಮಲೆಕ್ಕಾಧಿಕಾರಿಗಳು ಹಾಜರಿದ್ದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!