ಸರಕಾರದ ವಿರುದ್ಧ ಧಿಕ್ಕಾರ ಕೂಗಿದ ವಿದ್ಯಾರ್ಥಿಗಳು
ಮೈಸೂರು: ವಿದ್ಯಾರ್ಥಿಗಳ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಶನಿವಾರ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿತ್ತು.
ಎನ್ ಎಸ್ ಯು ಐ ಮೈಸೂರು ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮಹಾರಾಣಿ ಕಾಲೇಜು,ಮಹಾರಾಜ ಪದವಿ ಕಾಲೇಜು ಸೇರಿದಂತೆ ನಾನಾ ಕಾಲೇಜುಗಳ ೫೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್, ಶಾಲಾ ಕಾಲೇಜು ಮುಂದೆ ಬಸ್ ನಿಲ್ಧಾಣ, ವಿದ್ಯಾರ್ಥಿ ವೇತನ ಬಿಡುಗಡೆ, ಪರೀಕ್ಷಾ ಶುಲ್ಕ ಕಡಿತ,ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ,ಪರೀಕ್ಷಾ ಫಲಿತಾಂಶ ಶೀಘ್ರ ಪ್ರಕಟಣೆ,ಗುಣಮಟ್ಟದ ವಿದ್ಯಾರ್ಥಿ ನಿಲಯ ನಿರ್ಮಾಣ,ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತೇಜನ, ವಿದ್ಯಾಸಂಸ್ಥೆ ಆವರಣದಲ್ಲಿ ಉತ್ತಮ ಶೌಚಾಲಯ ನಿರ್ಮಾಣ, ಶುದ್ಧ ಕುಡಿಯುವ ನೀರು ಇವೇ ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ವಿದ್ಯಾರ್ಥಿಗಳು ಕೇಂದ್ರ ಮತ್ತು ರಾಜ್ಯಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಫೀಕ್ ಅಲಿ, ರಾಜ್ಯ ಕಾರ್ಯದರ್ಶಿ ಮಜೀದ್ ವಿದಾಯತ್, ಪ್ರಶಾಂತ್ ಆರ್ಯ, ನಗರ ಉಪಾಧ್ಯಕ್ಷ ಮೊಹಮ್ಮದ್ ಅದ್ನಾನ್, ಗ್ರಾಮಾಂತರ ಅಧ್ಯಕ್ಷ ಬಾಲರಾಜ್, ಸಾಗರ್ ಸಿರ್ಸಿಕರ, ಸಮೀರ್, ವಿನಯ್, ಈಶ್ವರ್, ಇನ್ನಿತರರು ಉಪಸ್ಥಿತರಿದ್ದರು.





