ಮೈಸೂರು: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಮಂಗಳವಾರ ರಾತ್ರಿ 7.30ರಲ್ಲಿ ಚಾಮುಂಡಿಬೆಟ್ಟದ ಉತ್ತನಹಳ್ಳಿ ಭಾಗದಲ್ಲಿ ಸುಮಾರು 4ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿದ್ದ ಹುಲ್ಲು, ಕುರುಚಲು ಗಿಡಗಳು ಸುಟ್ಟು ಭಸ್ಮವಾಗಿವೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು 3 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು. ಉತ್ತನಹಳ್ಳಿಯ ಭಾಗದ ಕಡೆಗಳಲ್ಲಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಈ ಘಟನೆ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ೨೪ ಮತ್ತು ಅರಣ್ಯ ಇಲಾಖೆಯ 20 ಮಂದಿ ಸಿಬ್ಬಂದಿ, ಕಾರ್ಯಾಚರಣೆಯನ್ನು ರಾತ್ರಿ 10.30ರವರೆಗೂ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಸುಮಾರು ನಾಲ್ಕು ಅಗ್ನಿ ಶಾಮಕ ವಾಹನಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು.
ಮಂಗಳವಾರ ರಾತ್ರಿ 7.30ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ಬಂದ ಕೂಡಲೇ ನಾಲ್ಕು ಅಗ್ನಿಶಾಮಕ ವಾಹನಗಳು ಮತ್ತು 24 ಮಂದಿ ಸಿಬ್ಬಂದಿ ಹೋಗಿ ಬೆಂಕಿ ನಂದಿಸಲಾಗಿದೆ.
-ರಾಜು, ಜಿಲ್ಲಾ ಅಗ್ನಿಶಾಮಕ ಅಧಿಕಾರಿ.





