ನಿನ್ನೆ ( ಡಿಸೆಂಬರ್ 1 ) ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿನ ಲಾಡು ಪ್ರಸಾದ ತಯಾರಿಕಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇಡೀ ಘಟಕ ಹೊತ್ತಿ ಉರಿದಿದೆ. ಅಲ್ಲಿನ ಓವನ್ಗೆ ಸಂಪರ್ಕ ಮಾಡಲಾಗಿದ್ದ ಸಿಲಿಂಡರ್ ಖಾಲಿಯಾದ ಕಾರಣ ಸಿಬ್ಬಂದಿಯೊಬ್ಬರು ಅದನ್ನು ಬದಲಿಸಲು ಹೋದಾಗ ಈ ಅವಘಡ ಸಂಭವಿಸಿದೆ.
ಲಾಡು ತಯಾರಿಕಾ ಘಟಕವಾದ ಕಾರಣ ಎಣ್ಣೆ ಹಾಗೂ ಜಿಡ್ಡಿನ ಅಂಶ ಮತ್ತು ಎಣ್ಣೆ ಪದಾರ್ಥಗಳೇ ಹೆಚ್ಚಿದ್ದ ಕಾರಣ ಬೆಂಕಿ ಬಹುಬೇಗನೆ ಎಲ್ಲೆಡೆ ಹಬ್ಬಿದೆ. ಹೀಗಾಗಿ ಘಟಕದಲ್ಲಿದ್ದ ಎಲ್ಲರೂ ಆಚೆ ಓಡಿ ಬಂದಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಈ ಅವಘಡದಿಂದ ಬರೋಬ್ಬರಿ 10.26 ಲಕ್ಷ ರೂಪಾಯಿಗಳ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಘಟಕದಲ್ಲಿ ಇರಿಸಲಾಗಿದ್ದ 9 ಕ್ವಿಂಟಾಲ್ ಸಕ್ಕರೆ, 96 ಕೆಜಿ ಕಡ್ಲೆ ಹಿಟ್ಟು, 40 ಕೆಜಿ ನಂದಿನಿತುಪ್ಪ, 30 ಕೆಜಿ ದ್ರಾಕ್ಷಿ ಹಾಗೂ 20 ಕೆಜಿ ಗೋಡಂಬಿ ಬೆಂಕಿಗೆ ಆಹುತಿಯಾಗಿದೆ. ಇನ್ನು ಈ ಅವಘಡದಿಂದ ಲಾಡು ಕೊರತೆ ಉಂಟಾಗಿದ್ದು ಮಹದೇಶ್ವರ ಕ್ಷೇತ್ರದಲ್ಲಿ ತಾತ್ಕಾಲಿಕವಾಗಿ ಲಾಡು ಮಾರಾಟ ನಿಲ್ಲಿಸಲಾಗಿದೆ.