Mysore
24
overcast clouds

Social Media

ಸೋಮವಾರ, 11 ಮೇ 2026
Light
Dark

ಚಾಲೆಂಜಿಂಗ್ ಮೋಡ್ ಪ್ರವಾಸಿತಾಣವಾಗಿ ವಸ್ತುಪ್ರದರ್ಶನ?

ಕೇಂದ್ರ ಪ್ರವಾಸೋದ್ಯಮ ಸಚಿವರ ಟ್ವೀಟ್ ಹುಟ್ಟು ಹಾಕಿದ ಚರ್ಚೆ, ಸ್ವದೇಶಿ ದರ್ಶನ್ ಯೋಜನೆ ಜೋಡಿಸುವ ನಿರೀಕ್ಷೆ

ಗಿರೀಶ್ ಹುಣಸೂರು
ಮೈಸೂರು: ಕೇಂದ್ರ ಬಜೆಟ್‌ನಲ್ಲಿ ಚಾಲೆಂಜ್ ಮೋಡ್‌ನಡಿ 50 ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು ನೀಡಿರುವುದರಡಿ ಮೈಸೂರಿನಲ್ಲಿರುವ ಕರ್ನಾಟಕ ವಸ್ತುಪ್ರದರ್ಶನವೂ ಸೇರಿರುವ ಕುರಿತು ಚರ್ಚೆಗಳು ನಡೆದಿವೆ.
ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಗುರುವಾರ ‘ದೇಖೋ ಅಪ್ನಾ ದೇಶ್’ ಯೋಜನೆಯಡಿ ಪ್ರವಾಸೋದ್ಯಮಕ್ಕೆ ಒತ್ತು ನೀಡಿದ ಕುರಿತು ಮಾಡಿರುವ ಟ್ವೀಟ್ ಹಾಗೂ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಅವರು ಸ್ವದೇಶ ದರ್ಶನ್ ವಸ್ತುಪ್ರದರ್ಶನ ಅಭಿವೃದ್ಧಿ ಕುರಿತು ನೀಡಿರುವ ಹೇಳಿಕೆ ಈ ಎರಡರಡಿ ಮೈಸೂರನ್ನು ಜೋಡಿಸುತ್ತಿರುವುದು ಪುಷ್ಟೀಕರಿಸುತ್ತಿದ್ದು, ಕೆಲವೇ ದಿನಗಳಲ್ಲಿ ಇದಕ್ಕೆ ಸ್ಪಷ್ಟ ರೂಪ ಸಿಗುವ ಸಾಧ್ಯತೆ ಇದೆ.
ಸಚಿವರ ಟ್ವೀಟ್‌ನಲ್ಲಿ ಏನಿದೆ?: ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ಸರ್ಕಾರಿ ಕಾರ್ಯಕ್ರಮಗಳ ವ್ಯಾಪ್ತಿ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ೫೦ ಪ್ರವಾಸಿ ತಾಣಗಳ ಅಭಿವೃದ್ಧಿಯೊಂದಿಗೆ ಮಿಷನ್ ಮೋಡ್‌ನಲ್ಲಿ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್‌ರೆಡ್ಡಿ, ಪ್ರವಾಸೋದ್ಯಮವು ಅಮೃತ ಕಾಲದಡಿ ನಾಲ್ಕು ಪ್ರಮುಖ ಪರಿವರ್ತನೆ ಅವಕಾಶಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ.
ಪ್ರವಾಸೋದ್ಯಮ ಸಚಿವಾಲಯಕ್ಕೆ ಹಂಚಿಕೆ ಮಾಡಲಾದ ೨,೪೦೦ ಕೋಟಿ ರೂ.ಗಳಲ್ಲಿ ೧,೭೪೨ ಕೋಟಿ ರೂ.ಗಳನ್ನು ಪ್ರವಾಸಿ ತಾಣಗಳ ಮೂಲ ಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ. ಈ ಪೈಕಿ ಪ್ರವಾಸೋದ್ಯಮ ಸಚಿವಾಲಯದ ಪ್ರಮುಖ ಯೋಜನೆಯಾದ ‘ಸ್ವದೇಶ್ ದರ್ಶನ್’ ಯೋಜನೆಗೆ ೧,೪೧೨ ಕೋಟಿ ರೂ. ಭೌತಿಕ, ಡಿಜಿಟಲ್ ಮತ್ತು ವರ್ಚುವಲ್ ಸಂಪರ್ಕ, ಪ್ರವಾಸಿ ಮಾಗ ದರ್ರ್ಶಿಗಳ ಲಭ್ಯತೆ ಮತ್ತು ಪ್ರವಾಸಿ ಸುರಕ್ಷತೆ ಮತ್ತು ಸಂಪೂರ್ಣ ಪ್ರವಾಸೋದ್ಯಮ ಅನುಭವವನ್ನು ಒದಗಿಸಲು 50 ಪ್ರವಾಸಿ ತಾಣಗಳನ್ನು ಮಿಷನ್ ಮೋಡ್‌ನಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿರುವುದು ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ದೊರೆತಂತಾಗಿದೆ. ಅಂತಹ ಸ್ಥಳಗಳನ್ನು ಸ್ವದೇಶ್ ದರ್ಶನ್ ಯೋಜನೆಯಡಿ ಸಂಪೂರ್ಣ ಪ್ಯಾಕೇಜ್‌ನಡಿ ಅಭಿವೃದ್ಧಿಪಡಿಸಲಾಗುವುದು. ಗಡಿ ಗ್ರಾಮಗಳಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಮತ್ತು ಸೌಲಭ್ಯಗಳ ಅಭಿವೃದ್ಧಿಗಾಗಿ ವೈಬ್ರೆಂಟ್ ವಿಲೇಜ್ ಕಾರ್ಯಕ್ರಮವನ್ನು ಪ್ರಸ್ತಾಪಿಸಲಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವರು ಹೇಳಿದ್ದಾರೆ.
ಸ್ವದೇಶ ದರ್ಶನ್ ಅಡಿ ಮೈಸೂರು: ವಾರ್ಷಿಕ ೩೦ ಲಕ್ಷಕ್ಕೂ ಹೆಚ್ಚು ದೇಶ-ವಿದೇಶಗಳ ಪ್ರವಾಸಿಗರು ಭೇಟಿ ನೀಡುವ ಮೈಸೂರು ಹಾಗೂ ಐತಿಹಾಸಿಕ ಸ್ಥಳ ಹಂಪಿಯನ್ನು ಸ್ವದೇಶ್ ದರ್ಶನ್ ಯೋಜನೆಯಡಿ ಆಯ್ಕೆ ಮಾಡಿದ್ದು, ಮೈಸೂರಿನ ವಸ್ತುಪ್ರದರ್ಶನ ಕೇಂದ್ರವಾಗಿಟ್ಟುಕೊಂಡು ಅಲ್ಲಿನ ೮೦ ಎಕರೆ ವಿಶಾಲವಾದ ಸ್ಥಳದಲ್ಲಿ ವರ್ಷಪೂರ್ತಿ ವಸ್ತುಪ್ರದರ್ಶನ ನಡೆಯುವಂತೆ ಯೋಜನೆ ರೂಪಿಸುವ ಸಂಬಂಧ ಈಗಾಗಲೇ ವಸ್ತುಪ್ರದರ್ಶನ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಮಟ್ಟದಲ್ಲಿ ಪ್ರಾರಂಭಿಕ ಹಂತದ ಚರ್ಚೆಗಳು ನಡೆದಿವೆ. ಈ ಯೋಜನೆಯಡಿ ದೊರೆಯುವ ೧೮೦ ಕೋಟಿ ರೂ. ಅನುದಾನ ಬಳಕೆ ರೂಪುರೇಷೆ ಅಂತಿಮಗೊಳಿಸಲಿದ್ದಾರೆ.


ದೇಖೋ ಅಪ್ನಾ ದೇಶ್ ಯೋಜನೆಯಡಿ ದೇಶದ 50 ಪ್ರಮುಖ ಪ್ರವಾಸಿತಾಣಗಳ ಅಭಿವೃದ್ಧಿ ಕುರಿತು ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿರುವುದರಲ್ಲಿ ಮೈಸೂರು ಸೇರಿದ್ದು, ಈ ತಿಂಗಳಾಂತ್ಯದಲ್ಲಿ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಮೈಸೂರಿಗೆ ಭೇಟಿ ನೀಡಿ ಯೋಜನೆಯ ರೂಪು ರೇಷೆ ಸಿದ್ಧಪಡಿಸಲಿದ್ದಾರೆ.

ಮಿರ್ಲೆ ಶ್ರೀನಿವಾಸ ಗೌಡ, ಅಧ್ಯಕ್ಷರು, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ.


ಸ್ವದೇಶ್ ದರ್ಶನ್ ಯೋಜನೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಈ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ದೇಶದ 50 ಪ್ರಮುಖ ಪ್ರವಾಸಿತಾಣಗಳ ಅಭಿವೃದ್ಧಿ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ರಾಘವೇಂದ್ರ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ


ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ೫೦ ಪ್ರವಾಸಿ ಸ್ಥಳಗಳ್ಯಾವುವು ಎಂಬ ಕುತೂಹಲವಿದೆ. ಮೈಸೂರಿನ ಜತೆಗೆ ಅಕ್ಕಪಕ್ಕದ ಲೋಕೇಷನ್‌ಗಳೂ ಸೇರಿಸಿಕೊಂಡರೆ ಉತ್ತಮ. ರಾಜ್ಯಸರ್ಕಾರ ಕೂಡ ಪ್ರವಾಸೋದ್ಯಮದ ವಿಷನ್ ಅರ್ಥ ಮಾಡಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮವನ್ನು ಮಾರ್ಕೆಟಿಂಗ್ ವಿಸ್ತರಣೆ ಮಾಡಿ, ವಿದೇಶಿ ಪ್ರವಾಸಿಗರು ಬಂದರೆ ಆರ್ಥಿಕ ಬೆಳವಣಿಗೆಗೆ ದಾರಿಯಾಗಲಿದೆ.

-ಬಿ ಎಸ್‌.ಪ್ರಶಾಂತ್‌, ಅಧ್ಯಕ್ಷರು, ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟ 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!