Mysore
19
broken clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಆಂಗ್ಲಭಾಷೆ ಹುಚ್ಚು ವ್ಯಾಮೋಹದಿಂದ ಕನ್ನಡ ಭಾಷೆಗೆ ಪೆಟ್ಟು: ಸಿಪಿಕೆ

ಮೈಸೂರು: ಆಂಗ್ಲ ಭಾಷೆಯ ಹುಚ್ಚು ವ್ಯಾಮೋಹದಿಂದ ಇಂದು ಕನ್ನಡ ಭಾಷೆ ಅವಸಾನದ ಅಂಚಿನಲ್ಲಿದೆ. ಅದನ್ನು ಉಳಿಸಿ ಬೆಳೆಸಬೇಕಾದುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ತಿಳಿಸಿದರು.

ನಗರದ ಅಗ್ರಹಾರದಲ್ಲಿರುವ ನಟರಾಜ ಸಭಾ ಭವನದಲ್ಲಿ ಗುರುವಾರ ಶ್ರೀ ನಟರಾಜ ಪ್ರತಿಷ್ಠಾನ ಹಾಗೂ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಪರ್ಕ ಭಾಷೆಯಾಗಿ ನಮಗೆ ಇಂಗ್ಲಿಷ್ ಸೇರಿದಂತೆ ಪ್ರಪಂಚದ ಎಲ್ಲ ಭಾಷೆಗಳೂ ಬೇಕು. ಆದರೆ, ಅಗ್ರ ಸ್ಥಾನವನ್ನು ನಾವು ಕನ್ನಡಕ್ಕೆ ಮೀಸಲಿಡಬೇಕು. ಕನ್ನಡ ಉಳಿದು ಬೆಳೆಯಬೇಕಾದರೆ ನಾವೆಲ್ಲರೂ ಕನ್ನಡವನ್ನು ದಿನನಿತ್ಯ ಬಳಸಬೇಕು ಎಂದು ಕಿವಿಮಾತು ಹೇಳಿದರು.

ಇಂದು ಪೋಷಕರ ಒತ್ತಡದಿಂದ ಮಕ್ಕಳು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಆಂಗ್ಲಭಾಷೆಯನ್ನೂ ಸರಿಯಾಗಿ ಕಲಿಯುವುದಿಲ್ಲ. ಕನ್ನಡ ಭಾಷೆಯನ್ನೂ ಸಂಪೂರ್ಣ ಕಲಿಯದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಕುವೆಂಪು ಅವರು ಹೇಳುವಂತೆ ಮನೆಯ ಎಲ್ಲ ಕಿಟಕಿ, ಬಾಗಿಲುಗಳನ್ನೂ ತೆರೆದಿಡಬೇಕು. ಆದರೆ, ಹೊರಗಿನಿಂದ ಬರುವ ಗಾಳಿ ನಮ್ಮನ್ನು ಹೊತ್ತುಕೊಂಡು ಹೋಗದ ಹಾಗೆ ಎಚ್ಚರ ವಹಿಸಬೇಕು. ಜತೆಗೆ ಶಿಕ್ಷಣ ಎಂಬುದು ಮಕ್ಕಳಿಗೆ ಸೃಜನಶೀಲತೆ ಹಾಗೂ ವೈಚಾರಿಕತೆಯನ್ನು ತಿಳಿಸಿಕೊಡಬೇಕು. ಇಂತಹ ಭಾವನೆಗಳು ಬೆಳೆಯಬೇಕಾದಲ್ಲಿ ಮಾತೃ ಭಾಷೆಯಿಂದ ಮಾತ್ರ ಸಾಧ್ಯ ಎಂದರು.

ಇದಕ್ಕೂ ಮುನ್ನ ನಟರಾಜ ಶಾಲೆಯ ವಿದ್ಯಾರ್ಥಿಗಳು ಕನ್ನಡ ಧ್ವಜವನ್ನು ಹಿಡಿದು ಆಕರ್ಷಕವಾಗಿ ಮೆರವಣಿಗೆ ನಡೆಸಿದರು. ಶಾಲೆಯ ಆವರಣದಿಂದ ಆರಂಭವಾದ ಮೆರವಣಿಗೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಉದ್ಘಾಟಿಸಿದರು. ಮೆರವಣಿಗೆಯ ಬಸವೇಶ್ವರ ಪುತ್ತಳಿ ಮೂಲಕ ಸಾಗಿ ಸಯ್ಯಾಜಿರಾವ್ ರಸ್ತೆ, ಎಂಜಿ ರಸ್ತೆಯಿಂದ ಶಾಲೆಯ ಆವರಣದಲ್ಲಿ ಅಂತ್ಯಗೊಂಡಿತು. ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಉಪಸ್ಥಿತಿ ವಹಿಸಿದ್ದರು. ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಶ್ರೀ ನಟರಾಜ ಪ್ರತಿಷ್ಠಾನದ ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

 ಹಿಂದಿ ಭಾಷೆಯ ಹೇರಿಕೆಯ ಹುನ್ನಾರ ಹಿಂದಿನಿಂದಲೂ ನಡೆದಿದೆ. ಹಿಂದಿ ರಾಷ್ಟ್ರ ಭಾಷೆಯಲ್ಲ. ದೇಶದ ಎಲ್ಲಾ ಭಾಷೆಗಳೂ ರಾಷ್ಟ್ರ ಭಾಷೆಗಳೇ. ಹಿಂದಿ ಸಂಪರ್ಕ ಭಾಷೆಯಾದರೆ ಅಡ್ಡಿಯಿಲ್ಲ. ಅದೇ ಸರ್ವಸ್ವವಾಗಬಾರದು. -ಡಾ.ಸಿ.ಪಿ.ಕೃಷ್ಣಕುಮಾರ್, ಸಾಹಿತಿ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!