Mysore
23
overcast clouds

Social Media

ಭಾನುವಾರ, 14 ಜೂನ್ 2026
Light
Dark

ಶಿಕ್ಷಣ ಸುಸಂಸ್ಕೃತ ವ್ಯಕ್ತಿಯಾಗಿ ರೂಪಿಸಬೇಕು : ಶಾಸಕ ಅರ್.ನರೇಂದ್ರ

ಹನೂರು : ಮಕ್ಕಳಿಗೆ ಶಿಕ್ಷಣ ನೀಡಿದರೆ ಮಾತ್ರ ಸಾಲದು. ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಸುಸಂಸ್ಕೃತ ವ್ಯಕ್ತಿಯಾಗಿ ರೂಪಿಸಬೆಕು ಎಂದು ಶಾಸಕ ಅರ್.ನರೇಂದ್ರ ತಿಳಿಸಿದರು.

ಪಟ್ಟಣದ ಕ್ರಿಸ್ತರಾಜ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಿನ ಅಂಕ ಗಳಿಸಬೇಕು ಎನ್ನುವ ಮನೋಭಾವನೆಯನ್ನು ಪಾಲಕರು ಹೊಂದಿದ್ದಾರೆ. ಆದರೆ ಅಂಕ ಗಳಿಸಿದರೆ ಮಾತ್ರ ಶಿಕ್ಷಣ ಪರಿಪೂರ್ಣವಾಗದು. ಅದ್ದರಿಂದ ಪಾಲಕರು ಮಕ್ಕಳ ಗುಣ, ನಡತೆ ಹಾಗೂ ಹಾವಭಾವವನ್ನು ಪ್ರತಿನಿತ್ಯ ಗಮನಿಸಬೇಕು. ಈ ಮೂಲಕ ನೈತಿಕ ನಿಯಮಗಳನ್ನು ಅನುಸರಿಸುವಂತೆ ಮಾಡುವುದರ ಮೂಲಕ ಸನ್ನಡತೆಯುಳ್ಳ ವ್ಯಕ್ತಿಯಾಗಿ ರೂಪಿಸಬೇಕು. ಜತೆಗೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಹೊರತೆಗೆದು ಸಾಧನೆ ಮಾಡಲು ಪ್ರೇರಿಸಬೇಕು. ಅಲ್ಲದೇ ಇತ್ತೀಚಗೆ ವಿದ್ಯಾರ್ಥಿಗಳು ಮೊಬೈಲ್‌ನಿಂದ ಪ್ರೇರಿತರಾಗಿದ್ದು, ಹೆಚ್ಚು ಸಮಯ ಅದರ ಬಳಕೆಯಲ್ಲಿ ತೊಡಗಿದ್ದಾರೆ. ಮೊಬೈಲ್ ಬಳಕೆಯಿಂದ ಅನುಕೂಲವೂ ಉಂಟು. ಅಷ್ಟೇ ಅನಾನುಕೂಲವು ಇದೆ. ಇದರಿಂದ ಶಿಕ್ಷಣ ಮೇಲೆ ವ್ಯತೀರಿಕ್ತ ಪರಿಣಾಮ ಬೀರಲಿದೆ. ಅದ್ದರಿಂದ ಮೊಬೈಲ್ ಬಳಕೆಯಿಂದ ಮಕ್ಕಳು ಆದಷ್ಟು ದೂರವಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಹನೂರು ಭಾಗವು ಆರ್ಥಿಕವಾಗಿ ಸ್ವಲ್ಪ ಹಿಂದುಳಿದಿರಬಹುದು. ಆದರೆ ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಿದ್ದು, ಗಮನಾರ್ಹ ಸಾಧನೆ ಮಾಡಿದೆ. ಕಳೆದ ೨೦ ವರ್ಷಗಳಿಂದ ಶೈಕ್ಷಣಿಕ ವಲಯವು ಶೈಕ್ಷಣಿಕವಾಗಿ ಪ್ರಗತಿ ಹೊಂದಿದ್ದು, ಕಳೆದ ೫ ವರ್ಷದಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನವನ್ನು ಪಡೆಯುತ್ತಾ ಬಂದಿದೆ. ಅಲ್ಲದೇ ಪಿಯುಸಿಯಲ್ಲೂ ಸಹ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಜಿಲ್ಲೆ ಹಾಗೂ ಶೈಕ್ಷಣಿಕ ವಲಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಶಾಸಕರು ಪ್ರಶಂಸೆ ವ್ಯಕ್ತಪಡಿಸಿದರು.

ಕ್ರೈಸ್ತ ಪ್ರಾಂತೀಯ ಧರ್ಮಗುರು ಅಂತೋಣಿ ವಿಲಿಯಂ ಮಾತನಾಡಿ, ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ಬರೀ ಕ್ರೈಸ್ತ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಎಲ್ಲಾ ವರ್ಗದ ಮಕ್ಕಳಿಗೂ ಶಿಕ್ಷಣವನ್ನು ನೀಡಲಾಗುತ್ತಿದೆ. ಇತ್ತೀಚಗೆ ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಹಿನ್ನಡೆಯಾಗುತ್ತಿದೆ. ಆದ್ದರಿಂದ ಮಕ್ಕಳಲ್ಲಿ ವಿನಯತೆ, ಸರಳತೆ, ಸನ್ನಡತೆಯನ್ನು ಕಲಿಸುವುದರ ಮೂಲಕ ಸುಸಂಸ್ಕೃತ ವ್ಯಕ್ತಿಯನ್ನಾಗಿ ರೂಪಿಸಬೇಕಿದೆ ಎಂದು ತಿಳಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಎಂಡಿಇಎಸ್ ಸಂಸ್ಥೆಯ ಕಾರ್ಯದರ್ಶಿ ವಿಜಯ್‌ಕುಮಾರ್, ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಫಾದರ್ ರೋಷನ್‌ಬಾಬು, ಧರ್ಮಗುರುಗಳಾದ ಬೆರ್ನಾಡ್ ಪ್ರಕಾಶ್, ಟೆನ್ನಿಕುರಿಯನ್, ಮದಲೈಮುತ್ತು, ಪಪಂ ಅಧ್ಯಕ್ಷೆ ಚಂದ್ರಮ್ಮ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!