Mysore
25
broken clouds

Social Media

ಬುಧವಾರ, 06 ಮೇ 2026
Light
Dark

ಬೆಳಕಿನ ಹಬ್ಬ ದೀಪಾವಳಿಯಲ್ಲಿ ಹೆಚ್ಚಾಗದ ಹೂ ಬೆಲೆ

ದೀಪಾವಳಿ ಮುನ್ನ ದಿನ ೪೦ ರೂ. ದಾಟಿದ ಸೇವಂತಿಗೆ; ಕನಕಾಂಬರ, ಮಲ್ಲಿಗೆ ಹೂ ಬೆಲೆಯಲ್ಲಿ ಏರಿಕೆ

ಮೈಸೂರು: ಸೋಮವಾರ ನರಕ ಚತುದರ್ಶಿ ಹಾಗೂ ಬುಧವಾರ ದೀಪಾವಳಿ ಹಬ್ಬವಿರುವ ಕಾರಣ ನಗರಕ್ಕೆ ರಾಶಿ, ರಾಶಿ ಸೇವಂತಿಗೆ ಹೂಗಳನ್ನು ತರುತ್ತಿರುವ ರೈತರು ಸೂಕ್ತ ಬೆಲೆ ಸಿಗದೆ ನಿರಾಶರಾಗಿದ್ದಾರೆ. ಉಳಿದಂತೆ ಮಲ್ಲಿಗೆ, ಕನಕಾಂಬರ ಹೂವಿನ ಬೆಲೆಯಲ್ಲಿ ಹೆಚ್ಚಳವಾಗಿದೆ.
ಹಬ್ಬದ ಆಚರಣೆ ಎಂದರೆ ಹೂವು ಹಾಗೂ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಕಂಡುಬರುತ್ತದೆ. ಹಬ್ಬಕ್ಕೆ ಒಂದು ವಾರವಿರುವಂತೆೆಯೇ ಹೂವಿನ ಬೆಲೆ ಗಗನಕ್ಕೇರುತ್ತದೆ. ಆದರೆ, ದೀಪಾವಳಿ ಹಬ್ಬದ ಮುನ್ನಾ ದಿನವಾದ ಭಾನುವಾರ ಹೂವಿನ ಬೆಲೆಯಲ್ಲಿ ಹೆಚ್ಚಳವಾಗಿಲ್ಲ.
ಎಚ್.ಡಿ.ಕೋಟೆ, ಹುಣಸೂರು ತಾಲ್ಲೂಕುಗಳು ಹಾಗೂ ಮಂಡ್ಯ ಜಿಲ್ಲೆಯ ಪಾಂಡವಪುರ ಹಾಗೂ ಕೆ.ಆರ್.ಪೇಟೆಯ ಭಾಗದ ರೈತರು ಹೆಚ್ಚಾಗಿ ಸೇವಂತಿಗೆ ಹೂಗಳನ್ನು ಬೆಳೆಯುತ್ತಾರೆ. ಸತತ ಮಳೆಯ ಕಾರಣ ಹೂವಿನ ಇಳುವರಿ ಹೆಚ್ಚಾಗಿದೆ. ಹೀಗಾಗಿ ಸಾವಿರಾರು ಮಂದಿ ರೈತರು ಮಾರಾಟಕ್ಕಾಗಿ ಹೂವನ್ನು ನಗರಕ್ಕೆ ತರುತ್ತಿದ್ದು, ಭಾನುವಾರ ಮುಂಜಾನೆಯಿಂದಲೇ ಹೂವಿನ ವ್ಯಾಪಾರ ಜೋರಾಗಿ ನಡೆಯಿತು. ನಗರದ ದೇವರಾಜ ಮಾರುಕಟ್ಟೆ, ದನ್ವಂತ್ರಿ ರಸ್ತೆ ಹಾಗೂ ಎಂ.ಜಿ.ರಸ್ತೆಯ ಮಾರುಕಟ್ಟೆಯಲ್ಲಿ ಸೇವಂತಿಗೆ ಹೂ ಬಿಕರಿಯಾಗುತ್ತಿದ್ದುದು ಕಂಡುಬಂತು.
ಆಯುಧ ಪೂಜೆಯ ಮುನ್ನ ದಿನ ಒಂದು ಮಾರು ಸೇವಂತಿಗೆ ಹೂವು ೨೦೦ ರೂ.ಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿತ್ತು. ಆದರೆ, ದೀಪಾವಳಿಯ ಮುನ್ನ ದಿನ ಒಂದು ಮಾರು ಸೇವಂತಿಗೆ ಹೂವಿನ ದರ ೪೦ ರೂ. ದಾಟಲಿಲ್ಲ. ಉಳಿದಂತೆ ಮಲ್ಲಿಗೆ, ಕನಕಾಂಬರ, ಕಾಕಡ ಹೂವುಗಳ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ. ಕಳೆದ ಮೂರು ದಿನಗಳ ಹಿಂದೆ ೬೦೦ ರೂ.ಗೆ ಮಾರಾಟವಾಗುತ್ತಿದ್ದ ಮಲ್ಲಿಗೆ ಭಾನುವಾರ ೧,೨೦೦ ರೂ.ಗೆ ಹೆಚ್ಚಳವಾಗಿದೆ. ಕಳೆದ ವಾರ ೮೦೦ ರೂ. ಇದ್ದ ಕನಕಾಂಬರ ೧,೬೦೦ ರೂ.ಗೆ ಮಾರಾಟವಾಗಿದೆ.
ಕಳೆದ ವಾರ ೫೦೦ ರೂ. ಇದ್ದ ಮರ್ಲೆ ಭಾನುವಾರ ೧,೨೦೦ ಹಾಗೂ ಕಾಕಡ ೧,೨೦೦ ರೂ.ಗೆ ಮಾರಾಟವಾಗಿದ್ದು ಕಂಡುಬಂತು. ಉಳಿದಂತೆ ಊಟಿ ಮಲ್ಲಿಗೆ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗದೆ ಕೆಜಿಗೆ ೨೦೦ ರೂ.ಗೆ ಮಾರಾಟವಾಯಿತು. ಕಳೆದ ವಾರ ೧೨೦ ರೂ.ಗೆ ಮಾರಾಟವಾಗುತ್ತಿದ್ದ ಗುಲಾಬಿ ಹೂ ಹಬ್ಬದ ದಿನ ೧೦ ರೂ.ಗೆ ಮಾರಾಟವಾಯಿತು.


ದಸರಾ ವೇಳೆ ಹೂವಿನ ಬೆಲೆ ಸಾಕಷ್ಟು ಹೆಚ್ಚಳವಾಗಿತ್ತು. ನಮಗೆ ಸಾಕಷ್ಟು ಲಾಭ ಕೂಡ ತಂದುಕೊಟ್ಟಿತ್ತು. ಆದರೆ, ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಲಾಭ ದೊರಕಿಲ್ಲ. ಸೋಮವಾರದ ನಂತರ ಬೆಲೆ ಹೆಚ್ಚಳವಾಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದೇವೆ.
ಮಹೇಶ್, ಕೆ.ಆರ್.ಪೇಟೆ.


ಹಬ್ಬದ ವೇಳೆ ಹೂವಿನ ಬೆಲೆ ಹೆಚ್ಚಳವಾಗುವುದು ಸಾಮಾನ್ಯ. ಅದರಂತೆ ಸೇವಂತಿಗೆ, ಊಟಿ ಮಲ್ಲಿಗೆ ಹೊರತುಪಡಿಸಿ ಉಳಿದ ಹೂಗಳ ಬೆಲೆ ಹೆಚ್ಚಳವಾಗಿದೆ. ಈ ಭಾಗದಲ್ಲಿ ದೀಪಾವಳಿ ಬುಧವಾರ ಆಚರಿಸುವುದರಿಂದ ಸೋಮವಾರ ಹೂವುಗಳ ಬೆಲೆ ಹೆಚ್ಚಳವಾಗಬಹುದು.
ಶ್ರೀನಿವಾಸ್, ಹೂ ವ್ಯಾಪಾರಗಾರರು, ದೇವರಾಜ ಮಾರುಕಟ್ಟೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!