ಮೈಸೂರು: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಇಲಾಖೆಯ ಇಂಜಿನಿಯರ್ ಆಗಿದ್ದ ಡಿ.ಕೆ.ದಿನೇಶ್ ಕುಮಾರ್(೫೦) ಅವರ ನಿಗೂಢ ಸಾವಿಗೆ ಸಂಬಂಧಪಟ್ಟಂತೆ ಪೊಲೀಸರು ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಣೆ ಮಾಡಿದ್ದಾರೆ.
ಮೃತರ ಸೋದರ ಮಾವ ನಾರಾಯಣ್ ಅವರು ದೂರಿನಲ್ಲಿ ಉಲ್ಲೇಖಿಸಿರುವಂತೆ ಮನೆಯ ಕೆಲಸಗಾರರು, ಆಸ್ಪತ್ರೆಗೆ ಮೃತದೇಹವನ್ನು ತಂದ ಆ್ಯಂಬುಲೆನ್ಸ್ ಚಾಲಕನನ್ನು ವಿಚಾರಣೆ ಮಾಡಲಾಗುತ್ತಿದೆ. ಇನ್ನು ದಿನೇಶ್ ಅವರ ಪತ್ನಿ ಮತ್ತು ಪುತ್ರನು ಖಾಸಗಿ ಆಸ್ಪತ್ರೆಯಲ್ಲಿಯೇ ಇರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶನಿವಾರ ಬೆಂಗಳೂರಿನಿಂದ ಬಂದ ದಿನೇಶ್ ಹೆಬ್ಬಾಳ್ನಲ್ಲಿ ನಿರ್ಮಾಣವಾಗುತ್ತಿದ್ದ ಸ್ವಂತ ಕಟ್ಟಡವನ್ನು ಪರಿಶೀಲಿಸಿ ಮನೆಗೆ ತೆರಳಿದ್ದು, ಅಲ್ಲಿಂದ ಅವರು ಯಾರಿಗೂ ಸಿಕ್ಕಿಲ್ಲ. ಅವರ ಮೊಬೈಲ್ ಕೂಡ ಶನಿವಾರ ರಾತ್ರಿಯಿಂದಲೇ ಬಂದ್ ಆಗಿದೆ. ಅವರು ಮೃತಪಟ್ಟಿರುವ ವಿಷಯ ಸೋಮವಾರ ಬೆಳಿಗ್ಗೆ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ದಿನೇಶ್ಕುಮಾರ್ ಅವರ ಪತ್ನಿ ಮತ್ತು ಪುತ್ರನನ್ನು ಮನೋವೈದ್ಯರಿಂದ ಸಮಾಲೋಚನೆಗೆ ಒಳಪಡಿಸಲು ನಿರ್ಧರಿಸಲಾಗಿದೆ.
ಪ್ರಕರಣದಿಂದ ಹುಟ್ಟಿರುವ ಪ್ರಶ್ನೆಗಳು: ತಲೆ ಹಾಗೂ ಮುಖಕ್ಕೆ ಪೆಟ್ಟು ಬಿದ್ದು, ರಕ್ತಸ್ರಾವವಾಗಿದೆ. ದಿನೇಶ್ ಮೃತದೇಹವನ್ನು ಪೊಲೀಸರ ಗಮನಕ್ಕೆ ತಾರದೇ ಆಸ್ಪತ್ರೆಗೆ ಸಾಗಿಸಲಾಗಿರುವುದು. ಆಸ್ಪತ್ರೆ ಆ್ಯಂಬುಲೆನ್ಸ್ ಬಳಸದೆ ಖಾಸಗಿ ಆ್ಯಂಬುಲೆನ್ಸ್ ಬಳಸಿರುವುದು. ಸಾವು ಸಹಜವಾಗಿದ್ದರೆ ಸಂಬಂಧಿಕರಿಗೆ ವಿಷಯ ತಿಳಿಸಬೇಕಿತ್ತು. ಅದನ್ನೂ ಪತ್ನಿ ಹಾಗೂ ಪುತ್ರ ಮಾಡಿಲ್ಲ. ಅಲ್ಲದೇ, ಮನೆ ಕೆಲಸದವರಿಗೆ ಮಲಗುವ ಕೋಣೆಯನ್ನು ಸ್ವಚ್ಛಗೊಳಿಸಲು ಬಿಟ್ಟಿಲ್ಲ ಎಂಬ ಅಂಶಗಳು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿವೆ.