ಹನೂರು: ಕ್ಷೇತ್ರ ವ್ಯಾಪ್ತಿಯ ಯುವಕ-ಯುವತಿಯರು ಜೆಡಿಎಸ್ ಪಕ್ಷ ಹಾಗೂ ಎನ್.ಸಿ.ಜಿ. ಸ್ಪರ್ಧಾತ್ಮಕ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಲಾಗಿರುವ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ. ಆರ್.ಮಂಜುನಾಥ್ ತಿಳಿಸಿದರು.
ಪಟ್ಟಣದ ಜೆಡಿಎಸ್ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಹನೂರು ಭಾಗ ಗುಡ್ಡಗಾಡಿನಿಂದ ಕೂಡಿದ್ದು, ಇಂದಿಗೂ ಇಲ್ಲಿನ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಕೂಲಿ ನಾಲಿ ಮಾಡಿ ಸಾಕುತ್ತಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯುವುದು ಸುಲಭವಾದ ವಿಚಾರವಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ತಮ್ಮದೇ ಆದ ಪ್ರತಿಭೆಗಳು ಅಡಕವಾಗಿವೆ. ಅದನ್ನು ಹೊರತರುವ ವೇದಿಕೆ ಅತ್ಯವಶ್ಯಕವಾಗಿದ್ದು, ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಇದರಲ್ಲಿ ರಾಜಕೀಯ ಉದ್ದೇಶವಿಲ್ಲ. ಸರ್ಕಾರ ಪೊಲೀಸ್ ಪೇದೆ ಹುದ್ದೆ ನೇಮಕಾತಿಗೆ ಅರ್ಜಿ ಸಲ್ಲಿಸಲು ನೋಟಿಫಿಕೇಶನ್ ಹೊರಡಿಸಿದ್ದು, ಇಲ್ಲಿನ ಯುವಕ-ಯುವತಿಯರು ಉದ್ಯೋಗ ಗಳಿಸಿ ಆರ್ಥಿಕವಾಗಿ ಸಬಲರಾದರೆ ನಮ್ಮ ಕಾರ್ಯಕ್ಕೆ ಅದೇ ಸಾರ್ಥಕತೆ ಉಂಟಾಗುತ್ತದೆ ಎಂದರು.
ಎನ್. ಸಿ. ಜಿ. ಸಂಸ್ಥೆಯ ಮುಖ್ಯಸ್ಥ ನಾಗಪ್ಪ ಮಾತನಾಡಿ, ವಿದ್ಯಾಭ್ಯಾಸದ ಬಳಿಕ ಸರ್ಕಾರಿ ಉದ್ಯೋಗ ದೊರೆಯುವುದಿಲ್ಲ ಎಂದು ಅನೇಕ ವಿದ್ಯಾರ್ಥಿಗಳು ವ್ಯವಸಾಯ ಇನ್ನಿತರೆಡೆ ಮನಸ್ಸು ಮಾಡುತ್ತಾರೆ. ಅವರಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ಅವಶ್ಯಕತೆ ಇದೆ. ಪೊಲೀಸ್ ಇಲಾಖೆಗೆ ಸೇರ್ಪಡೆಗೊಳಿಸುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ಜೊತೆಗೆ ಆರ್ಥಿಕವಾಗಿ ತೊಂದರೆಗೊಳಗಾಗಿರುವ ವಿದ್ಯಾರ್ಥಿಗಳಿಗೆ ಆನ್ಲೈನ್ ನಲ್ಲಿ ನಮ್ಮ ಕಚೇರಿಯಲ್ಲಿ ಅರ್ಜಿ ಹಾಕಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಪಿಡಿಒ ಹುದ್ದೆ ಸೇರಿದಂತೆ ಟಿಇಟಿ, ಸಿಇಟಿ, ಕೆಎಎಸ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ನೊಂದಣಿಯ ಅಗತ್ಯತೆಗೆ ಅನುಗುಣವಾಗಿ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಶಿವಮೂರ್ತಿ, ಮಾಜಿ ಸದಸ್ಯ ನಾಗೇಂದ್ರ ಬಾಬು, ಮುಖಂಡರಾದ ರಾಜಶೇಖರ್ ಮೂರ್ತಿ, ಜೆಸ್ಸಿo ಪಾಷಾ, ಗ್ರಾಪಂ ಸದಸ್ಯ ಡಿ.ಕೆ. ರಾಜು,ಪಪಂ ಸದಸ್ಯ ಆನಂದ್ ಕುಮಾರ್ ಇನ್ನಿತರರು ಹಾಜರಿದ್ದರು.





