ಯಳಂದೂರು: ತಾಲ್ಲೂಕಿನ ಪುರಾಣಿಪೋಡಿನ ಗಿರಿಜನ ಆಶ್ರಮ ಶಾಲೆಯ ಬಳಿ ಕಾಣಿಸಿಕೊಂಡಿದ್ದ ಮರಿಯಾನೆಗೆ ಕೊನೆಗೂ ತಾಯಿ ಸಿಗಲಿಲ್ಲ. ಆದ್ದರಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಮೈಸೂರಿನ ಕೂರ್ಗಳ್ಳಿ ಬಳಿಯ ಪ್ರಾಣಿಗಳ ಪುನರ್ವಸತಿ ಕೇಂದ್ರಕ್ಕೆ ಮರಿಯಾನೆಯನ್ನು ರವಾನಿಸಿದ್ದಾರೆ.
ತಾಯಿಯಿಂದ ಬೇರ್ಪಟ್ಟಿದ್ದ ಗಂಡು ಮರಿಯಾನೆ ಭಾನುವಾರ ಪುರಾಣಿ ಪೋಡಿನ ಗಿರಿಜನ ಆಶ್ರಮ ಶಾಲೆಯ
ಆವರಣದಲ್ಲಿ ಕಾಣಿಸಿಕೊಂಡಿತ್ತು. ಮಕ್ಕಳು, ಗಿರಿಜನರ ಜೊತೆ ಆಟವಾಡಿದ್ದ ಈ ಮರಿಯಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದರು.
ಅರಣ್ಯ ಸಿಬ್ಬಂದಿ ಮರಿಯಾನೆಯ ತಾಯಿಗಾಗಿ ಶೋಧ ನಡೆಸಿದ್ದರು. ಮಂಗಳವಾರದ ತನಕವೂ ಇದರ ತಾಯಿ ಪತ್ತೆಯಾಗದ ಹಿನ್ನೆಲೆಯಲ್ಲಿ ಇದನ್ನು ಮೈಸೂರಿಗೆ ರವಾನಿಸಲಾಗಿದೆ ಎಂದು ಆರ್ಎಫ್ಒ ಲೊಕೇಶ್ ಮೂರ್ತಿ ಮಾಹಿತಿ ನೀಡಿದ್ದಾರೆ. ಯಳಂದೂರು ತಾಲ್ಲೂಕಿನ ಬಿಆರ್ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಮರಿಯಾನೆ ಇದಾಗಿದೆ.





