ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ತಾಲ್ಲೂಕಿನ ಪಾಲಾರ್ ರಸ್ತೆಯಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳು ರಸ್ತೆ ಬದಿಯಲ್ಲಿ ಓಡಾಟ ನಡೆಸಿದ್ದು, ವಾಹನ ಸವಾರರಿಗೆ ಭಯದ ವಾತಾವರಣ ಉಂಟುಮಾಡಿದೆ.
ವಾಹನ ಸವಾರರ ಮೊಬೈಲ್ ನಲ್ಲಿ ಕಾಡಾನೆಗಳ ಓಡಾಟದ ದೃಶ್ಯ ಸೆರೆಯಾಗಿದ್ದು, ಅರಣ್ಯಾಧಿಕಾರಿಗಳು ಮುಖ್ಯರಸ್ತೆಗೆ ಬರುತ್ತಿರುವ ಕಾಡಾನೆಗಳನ್ನು ಅರಣ್ಯ ಪ್ರದೇಶಕ್ಕೆ ಓಡಿಸಲು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಮಾನವ ಪ್ರಾಣಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಪಾಲಾರ್ ರಸ್ತೆಯಲ್ಲಿ ಎರಡು ಬದಿಯೂ ಕಾಡಾನೆಗಳು ಬೀಡು ಬಿಡುವುದರಿಂದ ವಾಹನ ಸವಾರರು ಪ್ರಾಣಭೀತಿಯಲ್ಲಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಗಾಯಗೊಂಡ ಆನೆ ದೃಶ್ಯ ಸೆರೆ: ಪಾಲಾರ್ ರಸ್ತೆಯಲ್ಲಿ ಆನೆಗಳು ಓಡಾಟ ನಡೆಸಿದ ಸಂದರ್ಭದಲ್ಲಿ ಆನೆಯೊಂದರ ಸೊಂಡಿಲಿಗೆ ಗಾಯಗೊಂಡಿರುವ ವಿಚಾರ ಬೆಳಕಿಗೆ ಬಂದಿದೆ.
ವಾಹನ ಸವಾರರು ಗಾಯಗೊಂಡ ಆನೆಯ ದೃಶ್ಯವನ್ನು ಸೆರೆ ಹಿಡಿದಿದ್ದು, ಸೊಂಡಿಲಿನ ಭಾಗದಲ್ಲಿ ಗಾಯಗಳಾಗಿದೆ. ಗಾಯಗೊಂಡ ಆನೆ ಮೇಲೆ ಅರಣ್ಯ ಇಲಾಖೆ ನಿಗಾ ಇಟ್ಟು ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.





