ಗುಂಡ್ಲುಪೇಟೆ: ಮನೆ ಕಟ್ಟಲು ಪತಿ ಸಾಲ ಮಾಡಿದ್ದ ಪರಿಣಾಮ ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಕೋಟೆಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹಾದೇವಿ (26) ಎಂಬುವವರೇ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಯಾಗಿದ್ದಾರೆ. ಈಕೆಗೆ ಎಂಟು ವರ್ಷದ ಮಗು ಇದೆ.
ಮಹಾದೇವಿ ಅದೇ ಗ್ರಾಮದ ನಿಂಗರಾಜು ಎಂಬುವವರನ್ನು ವಿವಾಹ ಆಗಿದ್ದರು. ಇತ್ತೀಚೆಗೆ ಹೊಸ ಮನೆ ಕಟ್ಟಲು ನಿಂಗರಾಜು 5 ಲಕ್ಷ ಸಾಲ ಮಾಡಿಕೊಂಡಿದ್ದರು. ಇದರ ಬಗ್ಗೆ ತೀವ್ರ ಚಿಂತೆಗೊಳಗಾಗಿದ್ದ ಮಹಾದೇವಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಸಂಬಂಧ ಮಹಾದೇವಿ ತಂದೆ ರಾಜಾನಾಯ್ಕ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ಮನೆಯಲ್ಲಿ ನನ್ನ ಮಗಳಿಗೆ ಯಾವುದೇ ಕಿರುಕುಳ ಇರಲಿಲ್ಲ. ಸಾಲದ ಬಗ್ಗೆ ಚಿಂತಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.





