ಚಾಮರಾಜನಗರ: ಕಾಡಂಚಿನ ಗ್ರಾಮಗಳಲ್ಲಿ ಇತ್ತೀಚೆಗೆ ಹುಲಿ ಹಾಗೂ ಚಿರತೆಗಳು ಹಾವಳಿ ಮಿತಿಮೀರಿದ್ದು, ಜಮೀನುಗಳಿಗೆ ತೆರಳಲು ರೈತರು ಭಯಪಡುತ್ತಿದ್ದಾರೆ.
ಈ ಆತಂಕದ ಮಧ್ಯೆ ಕಿಡಿಗೇಡಿಗಳು ಎಐ ತಂತ್ರಜ್ಞಾನದ ಮೂಲಕ ಹುಲಿ ಪ್ರತ್ಯಕ್ಷವಾಗಿದೆ ಎಂಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.
ಇದರಿಂದಲೂ ಆತಂಕಕ್ಕೆ ಒಳಗಾಗಿರುವ ರೈತರು, ಕಾಡುಪ್ರಾಣಿಗಳ ಹಾವಳಿಯಿಂದ ತಮ್ಮನ್ನು ಹಾಗೂ ಜಾನುವಾರುಗಳನ್ನು ರಕ್ಷಿಸುವುದು ಹೇಗೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ರಾಜ್ಯದಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಳ
ಇನ್ನು ಇತ್ತೀಚೆಗೆ ಬಹುತೇಕರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ವಿಡಿಯೋಗಳು ಎಐ ನಿರ್ಮಿತ ಎಂಬುದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಿಡಿಗೇಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದು, ಹುಲಿಯ ವಿಡಿಯೋ ಹರಿಬಿಡುತ್ತಿರುವವರ ವಿರುದ್ಧ ಸಮರಕ್ಕಿಳಿದಿದೆ. ಜೊತೆಗೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.
ಹುಲಿ ಬಂತೆಂದು ಸುಳ್ಳು ಫೋಟೋ ಹಂಚುವುದರಿಂದ ಜನಸಾಮಾನ್ಯರಲ್ಲಿ ಭಯ ಸೃಷ್ಟಿಯಾಗುತ್ತಿದೆ. ಅಲ್ಲದೇ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯನಿರ್ವಹಣೆಗೂ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಹೇಳಿದೆ.





