Mysore
21
clear sky

Social Media

ಶುಕ್ರವಾರ, 13 ಫೆಬ್ರವರಿ 2026
Light
Dark

ಪಕ್ಷಕ್ಕೆ ಕಾರ್ಯಕರ್ತರೇ ಅದರ ಸ್ತಂಭ : ಮಾಜಿ ಶಾಸನ ನರೇಂದ್ರ

Party workers are its pillars Shasana Narendra

ಹನೂರು: ಯಾವುದೇ ಪಕ್ಷಕ್ಕೂ ಪಕ್ಷದ ಕಾರ್ಯಕರ್ತರೇ ಆದರ ಸ್ತಂಭ, ಪಕ್ಷವನ್ನು ತಳಮಟ್ಟದಿಂದ ಸದೃಢವಾಗಿ ಸಂಘಟನೆ ಮಾಡಿದರೆ ಮಾತ್ರ ನಾವು ಯಶಸ್ಸು ಪಡೆಯಬಹುದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಚುನಾವಣೆಗಳಿಗೆ ಈಗಿನಿಂದಲೇ ಸಿದ್ದರಾಗಬೇಕು ಎಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು.

ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೂತ್ ಕಮಿಟಿ ರಚನೆ ಮಾಡಲು ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲಾ ಪಂಚಾಯಿತಿ ಪಟ್ಟಣ ಪಂಚಾಯಿತಿ ಚುನಾವಣೆಗಳು ಬರುತ್ತಿದೆ. ಈ ಚುನಾವಣೆಗಳಿಗೆ ಬೂತ್ ಮಟ್ಟದಲ್ಲಿಯೇ ಕಾರ್ಯಕರ್ತರನ್ನು ಸಂಘಟನೆ ಮಾಡುವ ದೃಷ್ಟಿಯಿಂದ ಪಕ್ಷದ ಹೈಕಮಾಂಡ್ ಕಮಿಟಿ ರಚನೆ ಮಾಡುವಂತೆ ಸೂಚನೆ ನೀಡಲಾಗಿದೆ. ಪ್ರತಿ ಬೂತ್‌ಗಳಿಗೂ ಕಮಿಟಿ ರಚನೆ ಮಾಡಿ ಪಕ್ಷ ಸಂಘಟನೆ ಮಾಡುವ ಮುಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯಪ್ರವೃತ್ತರಾಗಬೇಕು ಎಂದರು.

ಪ್ರತಿ ಚುನಾವಣೆಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಹಾಕಿಸುವಲ್ಲಿ ಪ್ರಮುಖ ಪಾತ್ರ ವಹಿಸುವವರು ಕಾರ್ಯಕರ್ತರು, ಈ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಸಂಘಟಿಸುವ ದೃಷ್ಟಿಯಿಂದ ಕಮಿಟಿ ರಚನೆ ಮಾಡಲಾಗುತ್ತಿದೆ. ಕಮಿಟಿ ರಚನೆ ಮಾಡುವಾಗ ಎರಡು ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಜವಾಬ್ದಾರಿಯನ್ನು ನೀಡಬೇಕು ನಾಮಕ ಅವಸ್ಥೆಗೆ ಜವಾಬ್ದಾರಿ ಪಡೆದುಕೊಳ್ಳುವ ಬದಲು ತಮಗೆ ನೀಡುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದರು.

ಇನ್ನು ಪಕ್ಷದಲ್ಲಿಯೇ ಇದ್ದು ಪಕ್ಷಕ್ಕೆ ದ್ರೋಹ ಮಾಡುವಂತಹ ವ್ಯಕ್ತಿಗಳನ್ನು ಮುಂದಿನ ದಿನಗಳಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದರಿಂದ ಪಕ್ಷದ ವತಿಯಿಂದ ಹೆಚ್ಚಿನ ಲಾಭ ಪಡೆದು ಚುನಾವಣೆಗಳಲ್ಲಿ ಬೆನ್ನಿಗೆ ಚೂರಿ ಹಾಕುವಂತಹ ಕೆಲಸವನ್ನು ಕೆಲವು ಕಾರ್ಯಕರ್ತರು ಮಾಡುತ್ತಿದ್ದಾರೆ. ಅಂತಹವರು ತಾವಾಗಿಯೇ ಪಕ್ಷವನ್ನು ತೊರೆದರೆ ಒಳ್ಳೆಯದು ಇಲ್ಲದಿದ್ದರೆ ಯಾವುದೇ ಮುಲಾಜಿ ಇಲ್ಲದೆ ನಿಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ನಾವು ಚುನಾವಣೆಯಲ್ಲಿ ಸೋತಿದ್ದರು ಸಹ ರಾಜ್ಯದಲ್ಲಿ ನಮ್ಮದೇ ಸರ್ಕಾರ ಅಧಿಕಾರದಲ್ಲಿರುವುದರಿಂದ ಇದುವರೆಗೂ 225 ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳು ಹಾಗೂ ಸಂಬಂಧ ಪಟ್ಟ ಸಚಿವರುಗಳಿಗೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿ ಅನುದಾನ ತಂದಿದ್ದೇನೆ .ಆದರೆ ಕೆಲವರು ಇದನ್ನು ನಾನು ಅನುದಾನ ತಂದಿದ್ದೇನೆ ಎಂದು ಪತ್ರಿಕೆಗಳಲ್ಲಿ ಬರೆಸಿಕೊಳ್ಳುತ್ತಿದ್ದಾರೆ. ಇಲ್ಲಿ ಅನುದಾನ ತಂದಿರುವುದಕ್ಕೆ ನನಗೆ ಯಾವುದೇ ಪ್ರಶಸ್ತಿಯೂ ಬೇಡ, ರಾಜ್ಯದಲ್ಲಿ ನಮ್ಮ ಪಕ್ಷವೇ ಅಧಿಕಾರದಲ್ಲಿರುವುದರಿಂದ ಹೆಚ್ಚಿನ ಅನುಕೂಲವಾಗುತ್ತಿದೆ ಒಟ್ಟಾರೆ ಹನೂರು ಕ್ಷೇತ್ರದ ಅಭಿವೃದ್ಧಿಯಾದರೆ ಅಷ್ಟೇ ಸಾಕು ಎಂದರು.

ಕಳೆದ 15 ವರ್ಷಗಳಲ್ಲಿ ಬೇಸಿಗೆ ಮುನ್ನಾ ಅಧಿಕಾರಿಗಳ ಸಭೆ ನಡೆಸಿ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದೇನೆ. ಆದರೆ ಈ ವರ್ಷ ಮುಂಜಾಗ್ರತ ಕ್ರಮ ಕೈಗೊಳ್ಳದೆ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಕುಡಿಯುವ ನೀರಿನ ವಿಚಾರದಲ್ಲಿ ಯಾರೊಬ್ಬರು ರಾಜಕೀಯ ಮಾಡದೇ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ ಕೊಡಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಾವು ಸಹ ಸಂಬಂಧ ಪಟ್ಟ ಸಚಿವರುಗಳ ಜೊತೆ ಚರ್ಚೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡುವ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರ ಸೂಚನೆಯ ಮೇರೆಗೆ ಕಮಿಟಿ ರಚನೆ ಮಾಡಲಾಗುತ್ತಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರು ಇದ್ದಾರೆ ನಾವು ಬೇರೆಯವರನ್ನು ನಂಬಿ ರಾಜಕೀಯ ಮಾಡಬಾರದು ಮಾಜಿ ಶಾಸಕ ಆರ್ ನರೇಂದ್ರ ರವರ ಕೈ ಬಲಪಡಿಸುವ ಮೂಲಕ ಮತ್ತೊಮ್ಮೆ ಮುಂದಿನ ಚುನಾವಣೆಯಲ್ಲಿ ಹನೂರು ಕ್ಷೇತ್ರ ಕಾಂಗ್ರೆಸ್ ಪತ್ರ ಕೋಟೆ ಎಂಬುದನ್ನು ಸಾಬೀತು ಮಾಡಬೇಕು. ನಮ್ಮ ಕ್ಷೇತ್ರದ ಜನ ಹಣಕ್ಕೆ ಮನ್ನಣೆ ನೀಡದೆ ಸದಾ ಜನರ ಕಷ್ಟಕ್ಕೆ ಸ್ಪಂದಿಸುವ ನಮ್ಮ ನಾಯಕರಿಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

ನಾನು ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕನಾಗುವ ಮೊದಲು ಚಾಮರಾಜನಗರಕ್ಕೆ 28 ಕೋಟಿ ಮಾತ್ರ ಸಾಲ ನೀಡುತ್ತಿದ್ದರು ನಾನು ನಿರ್ದೇಶಕನಾಗಿ ಅಧ್ಯಕ್ಷನಾದ ಮೇಲೆ ಚಾಮರಾಜನಗರ ಜಿಲ್ಲೆಗೆ ನಾವು 25 ಕೋಟಿ ಸಾಲ ಕೊಡಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದೇನೆ. ಹನೂರು ಪಟ್ಟಣದಲ್ಲಿ 66 ಲಕ್ಷ ವೆಚ್ಚದಲ್ಲಿ ಎಂಸಿಡಿಸಿಸಿ ಬ್ಯಾಂಕ್ ನಿರ್ಮಾಣಕ್ಕೂ ಅನುದಾನ ಕೊಡಿಸಿದ್ದೇನೆ, ಆದರೆ ನಮ್ಮ ಜೊತೆ ಇದ್ದವರೆ ನನಗೆ ಬೆನ್ನಿಗೆ ಚೂರಿ ಹಾಕುವಂತಹ ಕೆಲಸವನ್ನು ಮಾಡಿದ್ದಾರೆ. ಕಳೆದ ವಾರ ನಡೆದ ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ವಿರೋಧ ಪಕ್ಷದವರಿಗೆ ಮತ ಚಲಾಯಿಸಿರುವವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಈಶ್ವರ್, ಮುಕುಂದವರ್ಮ, ಚಾಮುಲ್ ನಿರ್ದೇಶಕ ಶಾಹುಲ್ ಅಹಮದ್, ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಳ್ಯ ರಾಚಯ್ಯ, ಜಿಲ್ಲಾ ಉಪಾಧ್ಯಕ್ಷ ಸಿದ್ದರಾಜು, ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್, ಹರೀಶ್, ಸಂಪತ್, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ನಾಯ್ಡು, ನಿರ್ದೇಶಕ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಇಗ್ನೇಶಿ ಮುತ್ತು, ಸದಸ್ಯ ಸುರೇಶ್, ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ರಾಮಲಿಂಗಂ,ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಯೋಗೇಂದ್ರ, ಹನೂರು ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಂಡಾಪುರ ಮಾದೇಶ್, ಉಪಾಧ್ಯಕ್ಷ ಭಾನುಪ್ರಕಾಶ್, ರಾಮಾಪುರ, ಹನೂರು ಬ್ಲಾಕ್ ಯುವ ಘಟಕದ ಅಧ್ಯಕ್ಷರುಗಳಾದ ಸಂಜಯ್, ರಮೇಶ್, ಮಹಿಳಾ ಘಟಕದ ಅಧ್ಯಕ್ಷ ಸುವರ್ಣಮ್ಮ, ಯುವ ಮುಖಂಡ ಚೇತನ್ ದೊರೆರಾಜು, ರಾಜೇಶ್ ಸೋಮಶೇಖರ್, ಕಾಂಚಳ್ಳಿ ನಟರಾಜು, ರಾಜು, ಮಂಜೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Tags:
error: Content is protected !!