ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಪಚ್ಚೆದೊಡ್ಡಿಯಲ್ಲಿ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಆತನ ಕುಟುಂಬಸ್ಥರೆ ಅರಣ್ಯಾಧಿಕಾರಿಗಳ ವಶಕ್ಕೆ ನೀಡಿರುವ ಘಟನೆ ಬುಧವಾರ ನಡೆದಿದೆ.
ಪಚ್ಚೆದೊಡ್ಡಿ ಹುಲಿ ಹತ್ಯೆ ಪ್ರಕರಣದ ಸಂಬಂಧ ಅರಣ್ಯಾಧಿಕಾರಿಗಳು ಈಗಾಗಲೆ ಪಚ್ಚಮಲ್ಲು, ಗಣೇಶ, ಸಂಪು ಮೂವರನ್ನು ಬಂಧಿಸಿ ನ್ಯಾಯಲಯದ ಮುಂದೆ ಹಾಜರು ಪಡಿಸಿ ಐದು ದಿನಗಳ ಕಾಲ ಅರಣ್ಯ ಇಲಾಖೆ ಅಧಿಕಾರಿಗಳು ಕಸ್ಟಡಿಗೆ ಪಡೆದು ಉಳಿದ ನಾಲ್ವರ ಪತ್ತೆಗೆ ಬಲೆ ಬೀಸಿದ್ದರು.
ಇದನ್ನು ಓದಿ : ಮ.ಬೆಟ್ಟ | ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಸ್ಥಳೀಯರೊಂದಿಗೆ ಸಭೆ ನಡೆಸಲು ಖಂಡ್ರೆ ಸೂಚನೆ
ಈ ನಡುವೆ ಸಿದ್ದು ಕುಟುಂಬಸ್ಥರೆ ಆತನನ್ನು ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಬಳಿಕ ವಶಕ್ಕೆ ಪಡೆದಂತಹ ಅರಣ್ಯ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ಆತನನ್ನು ವಿಚಾರಣೆಯನ್ನು ನಡೆಸುತ್ತಿದ್ದು ಮತ್ತು ಉಳಿದ ಮೂವರ ಬಂಧನಕ್ಕೂ ಕೂಡ ಬಲೆ ಬೀಸಿದ್ದಾರೆ.
ಚಾಲಕನನ್ನು ವಶಕ್ಕೆ ಪಡೆದ ಇಲಾಖೆ : ಅರಣ್ಯ ಇಲಾಖೆಯ ಸಫಾರಿ ವಾಹನದಲ್ಲಿ ಚಾಲಕನಾಗಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸಿತ್ತಿರುವ ಚಾಲಕ ನಾರಯಣ್ ಹುಲಿ ಹತ್ಯೆ ವಿಷಯ ಗೊತ್ತಿದ್ದರೂ ಮುಚ್ಚಿಟ್ಟು ಆರೋಪಿಗಳಿಗೆ ಹೆಚ್ಚಿನ ಸಹಕಾರ ನೀಡುವ ಮೂಲಕ ಇಲಾಖೆಗೆ ದ್ರೋಹ ಎಸಗಿದ್ದಾನೆ. ಜೊತೆಗೆ ಹುಲಿ ಸತ್ತ ಬಳಿಕ ಹುಲಿಯನ್ನು ತುಂಡು ತುಂಡು ಮಾಡಿ ಅದರ ಕರುಳು ಹಾಗೂ ಲಿವರ್ ಗಳನ್ನು ತೆಗೆದುಕೊಳ್ಳುವಂತೆ ಈತನೇ ಸಲಹೆ ನೀಡಿದ್ದಾನೆ ಎಂಬ ಆರೋಪದ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದೂ ಇದರ ಅನ್ವಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಆರೋಪಿ ಚಾಲಕ ನಾರಾಯಣ ನನ್ನು ಸಹ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





