ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ರಾಮನಗುಡ್ಡ ಜಲಾಶಯಕ್ಕೆ ನೀರು ತುಂಬಿಸಿ, ಅಲ್ಲಿಂದ ಚಿಂಚಳ್ಳಿ ಕೆರೆಗೆ ನೀರು ತುಂಬಿಸಿದ ಪರಿಣಾಮ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ. ಇದೀಗ ಅಂತರ್ಜಲ ಮಟ್ಟ ಹೆಚ್ಚಾಗಲಿದ್ದು ಪ್ರತಿಯೊಬ್ಬ ರೈತರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಂ ಆರ್ ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಚಿಂಚಳ್ಳಿ ಗ್ರಾಮದ ಭೂತರಾಯನ ಕೆರೆ ತುಂಬಿದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ ನಂತರ ಅವರು ಮಾತನಾಡಿದರು.
ಹನೂರು ತಾಲೂಕಿನ ರಾಮನಗುಡ್ಡ ಕೆರೆಯಿಂದ ಚಿಂಚಳ್ಳಿ ಹಳ್ಳಕ್ಕೆ ನೀರು ಹರಿಸುತ್ತಿರುವುದರಿಂದ ಚಿಂಚಳ್ಳಿ ಭೂತ ರಾಯನ ಕೆರೆ ತುಂಬಿದ್ದು ಈ ಭಾಗದ ರೈತಾಪಿ ವರ್ಗಕ್ಕೆ ಹಾಗೂ ಜಾನುವಾರುಗಳಿಗೆ ಅನುಕೂಲ ಆಗಲಿದೆ ಎಂದರು.
ರೈತರ ದಶಕಗಳ ಬೇಡಿಕೆ ಈಡೇರಿಸಲು ನೀರಾವರಿ ಅಧಿಕಾರಿಗಳ ಮನವೊಲಿಸಿ ರಾಮನ ಗುಡ್ಡ ಕೆರೆಯಿಂದ ಹಳ್ಳಕ್ಕೆ ನೀರು ಹರಿಸಿಲಾಗುತ್ತಿದೆ. ನೀರಾವರಿ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡಿ ಕೆರೆಕಟ್ಟೆಗಳಿಗೆ ನೀರು ತುಂಬಿಸಲಾಗುತ್ತಿದೆ. ರೈತರು ನೀರನ್ನು ಪೋಲು ಮಾಡದೆ ಸದ್ಬಳಕೆ ಮಾಡಿಕೊಂಡರೆ ಹೆಚ್ಚಿನ ಅನುಕೂಲವಾಗಿ ಆರ್ಥಿಕವಾಗಿ ಸದೃಢರಾಗಬಹುದು ಎಂದರು .
ಜನ ಜಾನುವಾರಗಳಿಗೆ ಸಂಕಷ್ಟ ತಪ್ಪಿಸಲು ನೀರು ಬಿಡುಗಡೆ : ಮುಂಗಾರು ಮಳೆ ಕ್ಷೀಣಿಸಿರುವುದರಿಂದ ಹಿಂಗಾರು ಮಳೆ ಸಹ ಇಲ್ಲದ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಬರದ ವಾತಾವರಣ ಉಂಟಾಗಿರುವುದರಿಂದ ರೈತರ ಸಂಕಷ್ಟ ಮಾದಪ್ಪನಿಗೆ ಅರಿವಾಗಿದೆ. ಹಾಗಾಗಿ ಕಾವೇರಿ ನದಿಯಿಂದ ರಾಮನಗುಡ್ಡ ಕೆರೆಗೆ ನೀರು ತುಂಬಿಸಿ ಈ ಭಾಗದ ರಾಯರ ದೊಡ್ಡಿ,ಚಿಂಚಳ್ಳಿ, ಮಣಗಳ್ಳಿ ಸೇರಿದಂತೆ ತೋಮಿಯರ್ ಪಾಳ್ಯದವರಗೆ ಕೆರೆಯ ನೀರು ಹಳ್ಳದಲ್ಲಿ ಹರಿದು ರೈತರ ಜಮೀನುಗಳಲ್ಲಿ ಇರುವ ಬೋರ್ವೆಲ್, ತೋಡುಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾದರೆ ರೈತರು ತಮ್ಮ ಬದುಕನ್ನು ಸಹ ಕಟ್ಟಿಕೊಳ್ಳಲಿದ್ದಾರೆ. ಹೀಗಾಗಿ ರೈತರಿಗೆ ಬೇಕಾಗಿರುವ ನೀರಾವರಿ ಯೋಜನೆ ಹಾಗೂ ರಸ್ತೆ ವಿದ್ಯುತ್ ನೀಡಿದರೆ ರೈತರಿಗೆ ಅನುಕೂಲದಾಯಕವಾಗಲಿದೆ ಎಂದರು.
ಇದೆ ಸಂದರ್ಭದಲ್ಲಿ ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ರಾಮಪುರದ ಬಸವಣ್ಣ ಸ್ವಾಮಿಗಳು, ಮಣಗಳ್ಳಿ ಗ್ರಾ ಪಂ ಮಾಜಿ ಅಧ್ಯಕ್ಷ ಸೋಮಶೇಖರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರುಗಳಾದ ಬಾಬಣ್ಣ, ರವಿ, ಮದರ್ ಮುಜಿದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಂಜುಮ್ ಪಾಷ ಸೇರಿದಂತೆ ಹಲವರು ಉಪಸ್ಥಿತರಿದ್ದರು.





