ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ಅಂತರ್ಜಲ ಮಟ್ಟ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಮಳೆಯ ನೀರು ಸಂಗ್ರಹಿಸಲು ನಿರ್ಮಾಣ ಮಾಡಲಾಗಿದ್ದ ಚೆಕ್ ಡ್ಯಾಂ ತಡೆಗೋಡೆಯನ್ನು ಒಡೆದು ಹಾಕಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಜ್ಞಾವಂತ ನಾಗರಿಕರು ಮನವಿ ಮಾಡಿದ್ದಾರೆ.
ಹನೂರು ತಾಲ್ಲೂಕಿನ ಮಣಗಳ್ಳಿ ಗ್ರಾಮದ ಹಾಸ್ಟೆಲ್ ಹಿಂಭಾಗ ಹಳ್ಳದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ವರ್ಷಗಳ ಹಿಂದೆ ಚೆಕ್ ಡ್ಯಾಮ್ ನಿರ್ಮಾಣ ಮಾಡಲಾಗಿತ್ತು.
ಆದರೆ ಹಲವು ವರ್ಷಗಳಿಂದ ಸಮರ್ಪಕ ಮಳೆಯಾಗದ ಪರಿಣಾಮ ಚೆಕ್ ಡ್ಯಾಂ ಖಾಲಿಯಾಗಿತ್ತು. ಕಳೆದ ತಿಂಗಳು ಶಾಸಕ ಎಂ.ಆರ್.ಮಂಜುನಾಥ್ ಅವರು ಕಾವೇರಿ ನದಿ ಮೂಲದಿಂದ ರಾಮನ ಗುಡ್ಡ ಜಲಾಶಯಕ್ಕೆ ನೀರು ತುಂಬಿಸಿದ ನಂತರ ಹಳ್ಳದ ಮೂಲಕ ನೀರು ಹರಿಸಿದ್ದರು.
ಈ ನೀರು ಚಿಂಚಳ್ಳಿ ಮಾರ್ಗವಾಗಿ ಮಣಗಳ್ಳಿ ಗ್ರಾಮದ ಡ್ಯಾಂಗಳೆಲ್ಲ ಭರ್ತಿಯಾಗಿ ನೀರು ಮುಂದೆ ಹರಿದು ಹೋಗಿ ಹಾಸ್ಟೆಲ್ ಸಮೀಪದ ಚೆಕ್ ಡ್ಯಾಂ ಬರ್ತಿಯಾಗುತ್ತಿತ್ತು. ಆದರೆ ಇದನ್ನು ಸಹಿಸದ ತೋಮಿಯರ್ ಪಾಳ್ಯ ಹಾಗೂ ಸಮೀಪದ ರೈತ ಮುಖಂಡರುಗಳು ಚೆಕ್ ಡ್ಯಾಂ ಧ್ವಂಸಗೊಳಿಸಿದ್ದಾರೆ.
ಸರ್ಕಾರದ ಆಸ್ತಿ ನಾಶ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಚೆಕ್ ಡ್ಯಾಂ ಮರು ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದಾರೆ.





