ಹನೂರು : ಶ್ರೀ ಕ್ಷೇತ್ರ ನಾಗಮಲೆಗೆ ತೆರಳುತ್ತಿದ್ದ ಬಾಲಕನ ಮೇಲೆ ದಾಳಿ ಮಾಡಿ ಸಾವಿಗೆ ಕಾರಣವಾಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಿಂದ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ 6ರಕ್ಕೂ ಹೆಚ್ಚು ಮಹಿಳೆಯರು ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದು ನಾಗಮಲೆಗೆ ಮೇ 10ರ ಸೋಮವಾರ ಬೆಳಗ್ಗೆ ತೆರಳುತ್ತಿದ್ದರು. ಬೆಳಗ್ಗೆ 7:45ರ ವೇಳೆ ಹರ್ಷಿತ್ ಎಂಬ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ಗಾಯಗೊಂಡು ಸ್ಥಳದಲ್ಲಿಯೇ ಬಾಲಕ ಮೃತಪಟ್ಟಿದ್ದ.
ಅರಣ್ಯ ಇಲಾಖೆಯ ಸಿಬ್ಬಂದಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯ ನಿವಾಸಿಗಳು ಹಾಗೂ ಹೋರಾಟಗಾರರು ಅರಣ್ಯ ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ಆಕ್ರೋಶ ಹೊರಹಾಕಿದ್ದರು.
ಚಿರತೆ ದಾಳಿಯಿಂದ ಬಾಲಕ ಮೃತಪಟ್ಟ ಹಿನ್ನೆಲೆ ಎಚ್ಚೆತ್ತ ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿಯಲು ಈಗಾಗಲೇ ಅಗತ್ಯ ಕ್ರಮ ವಹಿಸಿ, ಚಿರತೆ ಚಲನವಲವನ್ನು ಪತ್ತೆಹಚ್ಚಲು ನಾಲ್ಕು ಥರ್ಮಲ್ ಡ್ರೋನ್ ಮುಖಾಂತರ ಪತ್ತೆ ಹಚ್ಚಲು ಕ್ರಮವಹಿಸಿ ಸ್ಥಳದಲ್ಲಿಯೇ ತಜ್ಞ ಪಶು ವೈದ್ಯಾಧಿಕಾರಿಗಳು ಮೊಕ್ಕಂ ಹೂಡಿದ್ದರು.
ಚಿರತೆ ಸೆರೆಗೆ 3 ಬೋನ್ ಬಳಕೆ: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಇಂಡಿಗನತ್ತ ಸಮೀಪ ಚಿರತೆ ದಾಳಿ ನಡೆಸಿ ಬಾಲಕ ಮೃತಪಟ್ಟ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಇಂಡಿಗನತ್ತ ನಾಗಮಲೆ ಮಾರ್ಗವಾಗಿ ಚಿರತೆಯನ್ನು ಸೆರೆ ಹಿಡಿಯಲು ಈಗಾಗಲೇ ಮೂರು ಬೋನ್ ಬಿಟ್ಟು ನಾಯಿ ಹಾಗೂ ಮೇಕೆ ಮರಿಗಳನ್ನು ಕಟ್ಟಲಾಗಿತ್ತು.
ಇದೀಗ 15 ದಿನಗಳ ನಂತರ ಚಿರತೆ ಕೊನೆಗೆ ಬಿದ್ದಿದ್ದು ಸ್ಥಳೀಯ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.





