ಚಾಮರಾಜನಗರ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸುನಿಲ್ ಬೋಸ್ ಕಣಕ್ಕಿಳಿಯಲಿದ್ದಾರೆ. ಇಂದು ( ಏಪ್ರಿಲ್ 3 ) ಸುನಿಲ್ ಬೋಸ್ ಬೃಹತ್ ಹಿಂಬಾಲಕರ ಗುಂಪಿನ ಜತೆ ನಾಮಪತ್ರ ಸಲ್ಲಿಸಿದ್ದಾರೆ.
ಒಂದೆಡೆ ಸುನಿಲ್ ಬೋಸ್ ಚುನಾವಣೆ ಸಿದ್ಧತೆಗಳಲ್ಲಿ ನಿರತರಾಗಿದ್ದರೆರೆ, ಮತ್ತೊಂದೆಡೆ ನಗರದ ಬೀದಿ ಬೀದಿಗಳಲ್ಲಿ ʼಗೋ ಬ್ಯಾಕ್ ಸುನಿಲ್ ಬೋಸ್ʼ ಪೋಸ್ಟರ್ಗಳು ರಾರಾಜಿಸಿವೆ. ಹೌದು, ʼಮರಳು ಮಾಫಿಯಾ ದೊರೆಗೆ ಮರುಳು ಆಗ್ಬೇಡಿ, ಗೋಬ್ಯಾಕ್ ಸುನಿಲ್ ಬೋಸ್ʼ ಎಂದು ಸುನಿಲ್ ಬೋಸ್ ಭಾವಚಿತ್ರದ ಮೇಲೆ ʼಎಕ್ಸ್ʼ ಚಿಹ್ನೆ ಬರೆದಿರುವ ಪೋಸ್ಟರ್ಗಳು ಚಾಮರಾಜನಗರದ ಹಲವು ರಸ್ತೆಯ ಗೋಡೆಗಳ ಮೇಲೆ ಕಂಡುಬಂದಿದೆ. ರಾತ್ರೋರಾತ್ರಿ ಈ ಪೋಸ್ಟರ್ಗಳನ್ನು ಅಂಟಿಸಲಾಗಿದೆ.
ಈ ಕುರಿತು ಇಂದು ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಸುನಿಲ್ ಬೋಸ್ ಮಾತನಾಡಿದ್ದು, ಈ ಕೃತ್ಯ ಎಸಗಿದರ ವಿರುದ್ಧ ದೂರು ನೀಡುತ್ತೇನೆ ಎಂದಿದ್ದಾರೆ. ʼಗೋಬ್ಯಾಕ್ ಸುನಿಲ್ ಬೋಸ್ ಅಂತ ಮಾಡ್ತಾ ಇದ್ದಾರೆ. ನನ್ನ ಮೇಲೆ ಮೊಕದ್ದಮೆ ಏನಿತ್ತೋ ಅದರಲ್ಲಿ ಮಾನ್ಯ ಉಚ್ಛ ನ್ಯಾಯಾಲಯ ನಾನು ನಿರ್ದೋಷಿ ಎಂದು ತೀರ್ಪು ನೀಡಿದೆ. ಮೊದಲಿಂದಲೂ ಹೇಳುತ್ತಿದ್ದೇನೆ. ಬಿಜೆಪಿ ಅವರ ಹತ್ರ ನಮ್ಮನ್ನ ಎದುರಿಸುವ ಶಕ್ತಿ ಇಲ್ಲ. ಹತ್ತು ವರ್ಷದಲ್ಲಿ ಅವರು ಯಾವುದೇ ರೀತಿಯ ಸಾಧನೆಯನ್ನೂ ಮಾಡಿಲ್ಲ. ಜನರಿಗೆ ಯಾವುದೇ ರೀತಿಯ ಯೋಜನೆಯನ್ನೂ ಸಹ ತಂದಿಲ್ಲ. ಅವರು ಕೊನೆಗೆ ಉಪಯೋಗಿಸುವುದೇ ಈ ಅಪಪ್ರಚಾರ ಅಂತ ನಾನು ಮೊದಲಿನೇ ದಿನದಿಂದಲೂ ಹೇಳುತ್ತಾ ಬಂದಿದ್ದೆ. ಅದನ್ನು ಅವರು ಮಾಡಿದ್ದಾರೆ. ಈಗಲೂ ಬಿಜೆಪಿಯವರು ಅದನ್ನು ಸಾಬೀತುಪಡಿಸಿದರೆ ನಾನು ನಾಮಪತ್ರವನ್ನೇ ಸಲ್ಲಿಸುವುದಿಲ್ಲʼ ಎಂದು ಸುನಿಲ್ ಬೋಸ್ ಹೇಳಿದರು.
ಅಲ್ಲದೇ ತನಗೆ ಹಿರಿಯರು ಹಾಗೂ ಯುವ ನಾಯಕರ ಬೆಂಬಲವಿದೆ, ಬಿಜೆಪಿಯವರಿಗೆ ಮೋದಿ, ಹಿಂದುತ್ವ ಬಿಟ್ಟು ಬೇರೇನೂ ಇಲ್ಲ. ಹಾಗಾಗಿ ಇಂತಹ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ಧ ಚುನಾವಣಾಧಿಕಾರಿಗಳಿಗೆ ದೂರನ್ನು ನೀಡುತ್ತೇನೆ ಎಂದೂ ಸಹ ಸುನಿಲ್ ಬೋಸ್ ತಿಳಿಸಿದರು.





