ಚಾಮರಾಜನಗರ: ಗ್ಯಾರಂಟಿ ಯೋಜನೆಗಳಿಗೂ ಬೆಲೆ ಏರಿಕೆಗೂ ಯಾವುದೇ ಸಂಬಂಧವಿಲ್ಲ. ಈಗ ಏರಿಕೆಯಾಗಿರುವ ಹಾಲಿನ ದರದ ಹಣವೂ ರೈತರ ಖಾತೆಗೆ ಹೋಗುತ್ತದೆ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಇಂದು(ಏಪ್ರಿಲ್.1) ಹಾಲಿನ ದರ ಏರಿಕೆ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಕೆಲವುಗಳ ಮೇಲೆ ಬೆಲೆ ಏರಿಕೆಗೂ ಹಾಗೂ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೂ ಯಾವುದೇ ಸಂಬಂಧ ಇಲ್ಲ. ಯಾವುದೇ ವಸ್ತುಗಳಿಗಾಗಲಿ 25 ವರ್ಷದ ಹಿಂದೆ ಇದ್ದ ಬೆಲೆಯನ್ನೇ ಈಗಲು ಮುಂದುವರಿಸಲು ಆಗುತ್ತಾ? ಎಂದು ಪ್ರಶ್ನಿಸಿದರು.
ಇನ್ನು ಹಾಲಿನ ದರ 4 ರೂ. ಏರಿಕೆಯಾದ ಹಣವನ್ನು ಸಂಪೂರ್ಣ ರೈತರಿಗೆ ನೀಡುತ್ತೇವೆ. ಅಲ್ಲದೇ ಏರಿಕೆ ಮಾಡಿರುವ ಹಣವನ್ನು ರೈತರಿಗೆ ನೀಡಲು ಎಲ್ಲಾ ಹಾಲು ಒಕ್ಕೂಟಗಳಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.





