ಚಾಮರಾಜನಗರ: ಗಡಿನಾಡು ಜಿಲ್ಲೆ ಚಾಮರಾಜನಗರದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ನೆಲೆಸಿರುವ ಮಾಯ್ಕಾರ ಮಾದಪ್ಪ ಮತ್ತೊಮ್ಮೆ ಕೋಟ್ಯಾಧಿಪತಿಯಾಗಿದ್ದಾನೆ.
ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಕಾಣಿಕಗಳ ಎಣಿಕೆ ಪ್ರಕ್ರಿಯೆ ನಡೆದಿದ್ದು, ಬರೋಬ್ಬರಿ ಎರಡೂವರೆ ಕೋಟಿ ಹಣ ಸಂಗ್ರಹವಾಗಿದೆ. ಈ ಒಂದು ತಿಂಗಳಲ್ಲಿ ಬೆಟ್ಟಕ್ಕೆ ಅಪಾರ ಪ್ರವಾಸಿಗರು ಆಗಮಿಸಿ ಮಾದಪ್ಪನ ದರ್ಶನ ಪಡೆದಿದ್ದಾರೆ. ಈ ಅವಧಿಯಲ್ಲಿ ಕಾಣಿಕೆ ಹುಂಡಿಗಳನ್ನು ತೆರೆದು ಹಣ ಎಣಿಕೆ ಕಾರ್ಯ ನಡೆಸಿದ್ದು, ನಗದು ರೂಪದಲ್ಲಿ ಮಾದಪ್ಪನಿಗೆ 2,58,44,097 ರೂ. ಕಾಣಿಕೆ ಬಂದು ಸೇರಿದೆ.
ಜತೆಗೆ 93 ಗ್ರಾಂ ಚಿನ್ನ, 3.350 ಕೆಜಿ ಬೆಳ್ಳಿ ಹಾಗೂ ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ 25 ನೋಟುಗಳು ಪತ್ತೆಯಾಗಿದೆ. ವಿಶೇಷವೆಂದರೆ ಈ ಕಾಣಿಕೆಯಲ್ಲಿ ಸೌದಿ ಅರೇಬಿಯಾ, ನೇಪಾಳ, ಕತಾರ್ ಹಾಗೂ ಜಪಾನ್ ನ ಕರೆನ್ಸಿಗಳು ಕಂಡುಬಂದಿದೆ.