ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪ ಗ್ರಾಮದ ನೀರಿನ ತೊಟ್ಟಿಯಲ್ಲಿ ನೀರು ತುಂಬಿಸದೇ ಇರುವುದರಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಆದಷ್ಟು ಬೇಗ ನೀರಿನ ತೊಟ್ಟಿಗೆ ನೀರು ತುಂಬಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ.
ಕೊಪ್ಪ ಗ್ರಾಮದಲ್ಲಿ ನೂರಾರು ನಾಟಿ ದನಗಳಿದ್ದು, ಅರಣ್ಯದಲ್ಲಿ ಮೇವು ಮೇಯ್ದು ಬಂದ ನಂತರ ನೀರು ಕುಡಿಯಲು ತೊಟ್ಟಿಯಲ್ಲಿ ನೀರಿಲ್ಲ. ಇದರಿಂದ ಜಾನುವಾರುಗಳು ಪರಿತಪಿಸುತ್ತಿದೆ.
ಜಾನುವಾರುಗಳು ಕೊಳವೆ ಬಾವಿಯ ಪೈಪ್ ಗಳಲ್ಲಿ ಸೋರುತ್ತಿರುವ ನೀರನ್ನು ನೆಕ್ಕುತ್ತಿವೆ. ಕೆಲವು ಹಸುಗಳು ನೀರಿಲ್ಲದೆ ಇರುವುದರಿಂದ ನೀರಿನ ದಾಹ ಸೇರಿಸಿಕೊಳ್ಳಲು ಸಾಧ್ಯವಾಗದೆ ಪರಿತಪಿಸುತ್ತಿದೆ. ಅಧಿಕಾರಿಗಳು ಮೂಕ ಪ್ರಾಣಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಮಾಡದೆ ಇರುವುದರಿಂದ ರೈತ ಮುಖಂಡರುಗಳು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ.
ಭಾರತೀಯ ಕಿಸಾನ್ ಸಂಘದ ಮುಖಂಡ ಸದಾಶಿವ ಬೆಟ್ಟಪ್ಪ ಎಂಬುವವರು ಮೂಕ ಪ್ರಾಣಿಗಳ ರೋಧನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.





