Mysore
68
overcast clouds

Social Media

ಭಾನುವಾರ, 22 ಫೆಬ್ರವರಿ 2026
Light
Dark

ಸಹಸ್ರಾರು ಮೀನುಗಳ ಸಾವು : ವಿಷಪ್ರಾಶನ ಶಂಕೆ

Death of thousands of fish: Poisoning suspected

ಚಾಮರಾಜನಗರ : ತಾಲ್ಲೂಕಿನ ದೊಡ್ಡಮೋಳೆ ಗ್ರಾಮದ ಸಮೀಪವಿರುವ ದೊಡ್ಡಕೆರೆಯಲ್ಲಿ ಸಹಸ್ರಾರು ಮೀನುಗಳು ಮೃತಪಟ್ಟಿದ್ದು, ವಿಷಪ್ರಾಶನ ಅಥವಾ ಹೊಸ ನೀರಿಗೆ ಹೊಂದಿಕೊಳ್ಳದೆ ಮೃತಪಟ್ಟಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

ಮೃತಪಟ್ಟಿರುವ ಮೀನುಗಳು ಕೆರೆಯ ದಡದಲ್ಲಿ ತೇಲಾಡುತ್ತಿದ್ದು, ಈ ಕೆರೆಯಲ್ಲಿ ಮೀನು ಸಾಕಾಣಿಕೆ ಗುತ್ತಿಗೆ ಪಡೆದಿದ್ದ ಚಿಕ್ಕಮೋಳೆ ಗ್ರಾಮದ ನಿಸರ್ಗ ಮೀನುಗಾರರ ಸಂಘದ ಸದಸ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸುತ್ತೂರು ಏತ ಯೋಜನೆಯ 2ನೇ ಹಂತಕ್ಕೆ ಸೇರಿದ ಕೆರೆಗಳ ಪೈಕಿ ದೊಡ್ಡ ಕೆರೆಯು ಒಂದಾಗಿದ್ದು, ಇತ್ತೀಚೆಗೆ ಈ ಕೆರೆಗೆ ಕಬಿನಿ ನೀರು ತುಂಬಿಸಲಾಗುತ್ತಿದೆ. ಹೊಸ ನೀರು ಕೆರೆ ಅಂಗಳದಲ್ಲಿ ಸಂಗ್ರಹವಾಗಿದ್ದು ಈ ನೀರಿಗೆ ಹೊಂದಿಕೊಳ್ಳಲಾಗದೆ ಮೃತಪಟ್ಟಿರಬಹುದೇ ಎಂಬ ಸಂಶಯ ವ್ಯಕ್ತವಾಗಿದೆ.

ಆದರೆ, ಕೆರೆಯಲ್ಲಿ ಮೀನು ಸಾಕಣೆ ಮಾಡಿ ಮಾರಾಟ ಮಾಡುತ್ತಿದ್ದ ಮೀನುಗಾರರು ಕಿಡಿಗೇಡಿಗಳು ವಿಷ ಹಾಕಿ ಮೀನುಗಳನ್ನು ಸಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸೂಕ್ತ ತನಿಖೆಯಿಂದಷ್ಟೇ ಮೀನುಗಳ ಸಾವಿನ ಸತ್ಯಾಂಶ ಬಯಲಾಗಬೇಕಿದೆ.

120ಕ್ಕೂ ಹೆಚ್ಚು ಕುಟುಂಬಗಳು ಈ ಕೆರೆಯ ಮೀನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿದ್ದವು. ಈಗ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ಅಧಿಕಾರಿಗಳ ಭೇಟಿ, ಪರಿಶೀಲನೆ: ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಮಂಜೇಶ್ವರ್, ಮೀನುಗಾರಿಕೆ ಸಹಾಯಕರಾದ ಶ್ರೀನಿವಾಸ, ಉಮೇಶ್ ಅವರು ಭೇಟಿ ನೀಡಿ ಪರಿಶೀಲಿಸಿದರು.

ಕೆರೆಯ ದಡದಲ್ಲಿರುವ ಮೃತ ಮೀನುಗಳನ್ನು ತೆರವು ಮಾಡುವಂತೆ ಮೀನುಗಾರರಿಗೆ ಸೂಚಿಸಲಾಗಿದೆ. ವಿಷ ಪ್ರಾಶನವಾಗಿದ್ದರೆ ಎಲ್ಲ ಜಾತಿಯ ಮೀನುಗಳ ಸಾಯಬೇಕಿತ್ತು. ಜಿಲೇಜಿ ಜಾತಿಯ ಮೀನುಗಳು ಮಾತ್ರ ಸತ್ತಿವೆ. ಕಾಟ್ಲಾ, ಸಾಮಾನ್ಯ ಜಂಡೆ, ರೋವೋ, ಮಿರ್ಗಾಲ್ ಜಾತಿಯ ಮೀನುಗಳು ಮೃತಪಟ್ಟಿಲ್ಲ ಎಂದು ಉಪ ನಿರ್ದೇಶಕರು ತಿಳಿಸಿದ್ದಾರೆ.

ಹೊಸ ನೀರು ಬಂದಿದ್ದರಿಂದ ಹೊಂದಿಕೊಳ್ಳಲಾರದೆ ಸಾವನ್ನಪ್ಪಿರಬಹುದು. ನೀರಿನ ಮಾದರಿಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳುಹಿಸಲಾಗುವುದು. ಮಂಡಳಿ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಿದ ನಂತರ ಸತ್ಯಾಂಶ ತಿಳಿದುಬರಲಿದೆ ಎಂದು ತಿಳಿಸಿದ್ದಾರೆ.

Tags:
error: Content is protected !!