ಹನೂರು : ತಾಲೂಕಿನ ರಾಮನಗುಡ್ಡ ಜಲಾಶಯದ ಅಕ್ಕ ಪಕ್ಕದ ರೈತರು ಒತ್ತುವರಿ ಮಾಡಿಕೊಂಡಿರುವ 98 ಎಕರೆ ಜಾಗವನ್ನು ಒತ್ತುವರಿ ತೆರವು ಮಾಡಿ ಕಾವೇರಿ ನದಿ ಮೂಲದಿಂದ ನೀರು ತುಂಬಿಸಲು ಕ್ರಮ ವಹಿಸಲಾಗಿದೆ ಎಂದು ಶಾಸಕ ಎಂ ಆರ್ ಮಂಜುನಾಥ್ ತಿಳಿಸಿದರು. ಹನೂರು ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನ ಗುಡ್ಡ ಜಲಾಶಯದ ಸರ್ವೆ ಕಾರ್ಯ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ರಾಮನಗುಡ್ಡ ಜಲಾಶಯದ ಅಕ್ಕಪಕ್ಕದ ರೈತರು ಹಲವಾರು ವರ್ಷಗಳಿಂದ ಸುಮಾರು 98 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ.
ಈಗಾಗಲೇ ಹಲವು ದೂರುಗಳು ಬಂದಿದ್ದು ಒತ್ತುವರಿ ತೆರವು ಮಾಡಲು ಭೂಮಾಪನ ಇಲಾಖೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಜಂಟಿ ಸರ್ವೆ ನಡೆಸಲಾಗುತ್ತಿದೆ. ನಂತರ ಜಲಾಶಯದ ಗಡಿ ರೇಖೆ ಗುರುತಿಸಿ ಒತ್ತುವರಿ ಜಮೀನನ್ನು ತೆರವು ಮಾಡಿದ ನಂತರ ನೀರು ತುಂಬಿಸುವ ಯೋಜನೆಗೆ ಸಹಕರಿಸಬೇಕು ಎಂದು ತಿಳಿಸಿದರು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತರಿಗೆ ನೀರಾವರಿ ಯೋಜನೆಯನ್ನು ಕಲ್ಪಿಸಿ ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಈ ಒಂದು ಯೋಜನೆ ಯಶಸ್ವಿಯಾಗಲು ರೈತರು ಹಾಗೂ ಸ್ಥಳೀಯರ ಸಹಕಾರ ಅತಿ ಮುಖ್ಯವಾಗಿದೆ ಎಂದರು. ಈಗಾಗಲೇ ಕಾವೇರಿ ನದಿಯಿಂದ ರಾಮನಗುಡ್ಡ ಜಲಾಶಯಕ್ಕೆ ನೀರನ್ನು ಹರಿಸಲು ಅಗತ್ಯ ಕ್ರಮ ವಹಿಸಲಾಗಿದೆ 2.5 ಕೋಟಿ ವೆಚ್ಚದಲ್ಲಿ ಬಾಕಿ ಉಳಿದಿರುವ 1.45 ಕಿ.ಲೋ ಪೈಪ್ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿ ಕೆರೆಗೆ ನೀರು ತುಂಬಿಸಲು ಕ್ರಮ ವಹಿಸಲಾಗುತ್ತಿದೆ. ರೈತರ ಬಹುದಿನಗಳ ಕನಸು ನನಸಾಗುವ ದಿನ ಕೆಲವೇ ದಿನಗಳಲ್ಲಿ ಬರಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ರೈತ ಮುಖಂಡರಲ್ಲಿ ಹರ್ಷ ರಾಮನ ಗುಡ್ಡ ಜಲಾಶಯ ನಿರ್ಮಾಣ ಮಾಡಿದ ದಿನದಿಂದ ಯಾವೊಬ್ಬ ಜನಪ್ರತಿನಿಧಿಗಳು ಒತ್ತುವರಿ ಜಮೀನನ್ನು ತೆರೆವು ಮಾಡಲು ಮುಂದಾಗಿರಲಿಲ್ಲ ಆದರೆ ಶಾಸಕ ಮಂಜುನಾಥ್ ರವರು ಕೊಟ್ಟ ಭರವಸೆಯಂತೆ ಭೂಮಾಪನ ಇಲಾಖೆಯವರನ್ನು ಕರೆತಂದು ಗಡಿ ಗುರುತಿಸಿ ಒತ್ತುವರಿ ತೆರವು ಮಾಡಲು ಮುಂದಾಗಿದ್ದಾರೆ.
ಈಗಾಗಲೇ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ನೀರು ಹರಿದು ಬರಲಿದೆ ಇದರಿಂದ ಹಲವಾರು ವರ್ಷಗಳಿಂದ ಸ್ಥಗಿತವಾಗಿದ್ದ ಕಾಮಗಾರಿ ವೇಗ ಪಡೆದುಕೊಂಡಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಪರಿಶೀಲನೆ ವೇಳೆ ಭೂ ಮಾಪನ ಇಲಾಖೆಯ ಎಸ್ ಇ ಚೇತನ್ ಕುಮಾರ್ ನೀರಾವರಿ ಇಲಾಖೆಯ ಎಇಇ ಅಭಿಲಾಶ್ ಜೆ.ಇ ಪ್ರತಾಪ್ ಸರ್ವೆ ಇಲಾಖೆಯ ಸಿಬ್ಬಂದಿಗಳು ಹಾಗೂ ರೈತ ಮುಖಂಡರುಗಳು ಹಾಜರಿದ್ದರು .





