ಹನೂರು : ಟ್ರಾಕ್ಟರ್ – ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಮಲ್ಲಯ್ಯನಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.
ತಾಲ್ಲೂಕಿನ ಮಲ್ಲಯ್ಯನಪುರ ಬಳಿ ಮಹದೇಶ್ವರ ಬೆಟ್ಟದಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಬೆಂಗಳೂರಿನ ಮಲ್ಲೇಶ್ವರಂ ಸಮೀಪದ ತಿಲಕ್ ನಗರದ ಇಬ್ಬರು ಬೈಕ್ ಸವಾರರು, ಮಲ್ಲಯ್ಯನಪುರದ ಬಳಿ ಸಾಗುತ್ತಿದ್ದ ವೇಳೆ ಹನೂರಿನಿಂದ ವಡರದೊಡ್ಡಿಯ ಕಡೆಗೆ ಮೇವು ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್ಗೆ ಹಿಂದಿನಿಂದ ಬಂದ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ.
ಈ ನಡುವೆ ಇಬ್ಬರು ಬೈಕ್ ಸವಾರರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವೇಳೆ ಟ್ರಾಕ್ಟರ್ ಸಂಪೂರ್ಣವಾಗಿ ಮುಗುಚಿ ಅಪಾರ ಪ್ರಮಾಣದ ಮೇವು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.
ಅಪಘಾತದ ಪರಿಣಾಮವಾಗಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳಕ್ಕೆ ರಾಮಾಪುರ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.





