ಎ.ಎಸ್.ಮಣಿಕಂಠ
ಶಾಲಾ ಅಂಗಳದಲ್ಲೇ ವಿಶೇಷ ಕಾರ್ಯಕ್ರಮ.
ಸರ್ಕಾರಿ ಶಾಲಾ ಮಕ್ಕಳ ವಿಜ್ಞಾನ ಕಲಿಕೆಗೆ ಉಪಯೋಗ.
ಚಾಮರಾಜನಗರ: ದಸರಾ ರಜೆ ಪ್ರಾರಂಭಕ್ಕೂ ಮುನ್ನವೆ ಜಿಲ್ಲೆಯ ಎಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಲ್ಲಿ ಡಿಜಿಟಲ್ ತಾರಾಲಯ ಸಂಚರಿಸಲಿದ್ದು ಸರ್ಕಾರಿ ಶಾಲೆಯ ಮಕ್ಕಳ ವಿಜ್ಞಾನ ಕಲಿಕೆಗೆ ಸಾಕಷ್ಟು ಅನುಕೂಲವಾಗಲಿದೆ.
ಜಿಲ್ಲೆಯ ಚಾ.ನಗರ ತಾಲ್ಲೂಕಿನ ೧೬೭ ಶಾಲೆ, ಗುಂಡ್ಲುಪೇಟೆ ತಾಲ್ಲೂಕಿನ ೧೧೪ ಶಾಲೆ, ಹನೂರು ತಾಲ್ಲೂಕಿನ ೯೫ ಶಾಲೆ, ಕೊಳ್ಳೇಗಾಲ ತಾಲ್ಲೂಕಿನ ೬೬ ಸರ್ಕಾರಿ ಶಾಲೆಗಳು ಹಾಗೂ ಯಳಂದೂರು ತಾಲ್ಲೂಕಿನ ೫೨ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಲ್ಲಿ ಹಂತ ಹಂತವಾಗಿ ಡಿಜಿಟಲ್ ಸಂಚಾರಿ ತಾರಾಲಯ ಮೂಲಕ ಮಕ್ಕಳಿಗೆ ವಿಜ್ಞಾನದ ಕಲಿಕೆಯನ್ನು ಮತ್ತಷ್ಟು ಸುಲಭ ಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
ಶಾಲೆಯ ಅಂಗಳದಲ್ಲೇ ವಿಶೇಷ ಕಾರ್ಯಕ್ರಮ ಎಂಬ ಉದ್ದೇಶದಿಂದ ಯಳಂದೂರು ತಾಲ್ಲೂಕಿನ ಯರಗಂಬಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಖಗೋಳ ವಿಜ್ಞಾನದ ಬಗ್ಗೆ ಹೆಚ್ಚಿನ ಮಾತಿ ನೀಡುವ ತಾರಾಲಯವನ್ನು ಮಕ್ಕಳಿಗೆ ಪರಿಚಯಿಸಲಾಗುತ್ತಿದೆ. ನುರಿತ ಶಿಕ್ಷಕರಿಂದ ಖಗೋಳ ವಿಜ್ಞಾನದ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಗುತ್ತಿದ್ದು ಸರ್ಕಾರಿ ಶಾಲೆಯ ಮಕ್ಕಳು ಈ ಕಾರ್ಯಕ್ರಮದ ಕುರಿತು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಚಾರಿ ತಾರಾಲಯದಲ್ಲಿ ಏನಿದೆ?: ತಂತ್ರಜ್ಞಾನ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಈ ನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಖಗೋಳ ವಿಜ್ಞಾನದ ವಿಸ್ಮಯ, ತಾರಾ ಮಂಡಲದ ಕೌತುಕದ ಬಗ್ಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಮಾಹಿತಿ ನೀಡಲಾಗುತ್ತದೆ. ಕಾಲ್ಪನಿಕ ಆಕಾಶಕಾಯ ಸೃಷ್ಟಿಸುವ ಮೂಲಕ ಗ್ರಹ, ನಕ್ಷತ್ರ ಹಾಗೂ ಇತರೆ ಆಕಾಶಕಾಯಗಳನ್ನು ತೋರಿಸಲಾಗುತ್ತದೆ.
ಗೋಳಕಾರದ ಗುಮ್ಮಟದಲ್ಲಿ ಏಕಕಾಲದಲ್ಲಿ ೩೦-೪೦ ವಿದ್ಯಾರ್ಥಿಗಳು ೧೮೦ ಡಿಗ್ರಿಯಲ್ಲಿ ಗುಣಮಟ್ಟದ ಶಬ್ದದೊಂದಿಗೆ ಗುಣಮಟ್ಟದ ಪಿಡಿಯ ವೀಕ್ಷಿಸಬಹುದಾಗಿದೆ.

ಡಿಜಿಟಲ್ ಸಂಚಾರಿ ತಾರಾಲಯದ ಮೂಲಕ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನದ ಕೌತುಕದ ಕುರಿತು ಸಾಕಷ್ಟು ಮಾಹಿತಿ ಲಭ್ಯವಾಗಲಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು.

ಸೂರ್ಯ, ಭೂಮಿ, ಗ್ರಹ ಮಂಡಲಗಳ ಬಗ್ಗೆ ಸಾಕಷ್ಟು ವಿಡಿಯೋಗಳ ಮೂಲಕ ಖಗೋಳ ವಿಜ್ಞಾನದ ಕುರಿತು ಮಾಹಿತಿ ನೀಡಿದರು. ಇದು ನನಗೆ ತುಂಬಾ ಖುಷಿ ನೀಡಿತು.

ಈ ಮೊದಲು ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಸಂಚಾರಿ ತಾರಾಲಯದ ಮೂಲಕ ಖಗೋಳ ವಿಜ್ಞಾನದ ಕುರಿತು ಮಾಹಿತಿ ನೀಡಲಾಗುತ್ತು. ಮತ್ತೆ ಪ್ರಾರಂಭಸಲಾಗಿದ್ದು ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲಿದೆ.





