ಚಾಮರಾಜನಗರ: ಭಾರಿ ಮಳೆಯಿಂದಾಗಿ ಗೋಡೆ ಕುಸಿದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದರ ಮೂಲಕ ಪೂರ್ವ ಪೋಲೀಸ್ ಠಾಣೆಯ ಸಿಬ್ಬಂದಿಗಳು ಮಾನವೀಯತೆ ಮೆರೆದಿದ್ದಾರೆ.
ಚಾ.ನಗರ ತಾಲ್ಲೂಕಿನ ದಡದಹಳ್ಳಿ ಗ್ರಾಮದ ಮೂರ್ತಿ(೩೨) ಎಂಬಾತ ಕೆಲವು ದಿನಗಳ ಹಿಂದೆ ಗೋಡೆ ಕುಸಿದು ಮೃತಪಟ್ಟಿದ್ದರು, ಈ ಸಂದರ್ಭದಲ್ಲಿ ಮೃತ ಮೂರ್ತಿ ಕುಟುಂಬದ ಸಂಕಷ್ಟ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದ ಚಾ.ನಗರ ಪೂರ್ವ ಪೋಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಎಸ್.ಆನಂದ್ ಅವರು ನೊಂದ ಕುಟುಂಬಕ್ಕೆ ಕಿಂಚಿತ್ತು ಸಹಾಯ ಮಾಡುವ ಯೋಚನೆ ಮಾಡಿದ್ದರು.
ಈ ನಿಟ್ಟಿನಲ್ಲಿ ಸಾಗಿದ ಆನಂದ್ ಅವರು ತಾವು ಹಾಗೂ ಸಹ ಸಿಬ್ಬಂದಿಗಳ ಸಹಕಾರದೊಂದಿಗೆ ಕುಟುಂಬಕ್ಕೆ ಆರ್ಥಿಕವಾಗಿ ನೆರವು ನೀಡುವುದರ ಮೂಲಕ ಪೋಲೀಸರಲ್ಲೂ ಕೂಡ ಮಾನವೀಯತೆ ಇದೆ ಎಂಬುದನ್ನೂ ಸಾಬೀತುಪಡಿಸಿದ್ದಾರೆ. ಅದರಂತೆ ಭಾನುವಾರ ಮೃತ ಕುಟುಂಬಕ್ಕೆ ಪರಿಹಾರ ನೀಡಿ, ಸಾಂತ್ವನದ ಮಾತುಗಳನ್ನಾಡಿ, ಸದಾ ನಿಮ್ಮ ನೆರವಿಗೆ ನಾವು ಇರುತ್ತೇವೆ ಎಂಬ ಭರವಸೆ ನೀಡಿದ್ದಾರೆ.
ಈ ವೇಳೆ ಪೂರ್ವ ಪೋಲೀಸ್ ಠಾಣೆಯ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ಅಶೋಕ್, ಮಹೇಶ್, ಎಲ್.ಬಸವಣ್ಣ, ಚಂದ್ರು, ಮಹಾದೇವ ಸ್ವಾಮಿ ಹಾಜರಿದ್ದರು.





