ಆಂದೋಲನ ವರದಿ ಫಲ ಶ್ರುತಿ
ಹನೂರು : ಅರೆಕಾಡುವಿನ ದೊಡ್ಡಿ ಗ್ರಾಮದ ಶಾಲಾ ವಿದ್ಯಾರ್ಥಿಗಳು ಸಿಎಂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರಿಗೆ ಬಸ್ ಬಿಡಿಸುವಂತೆ ಮನವಿ ಮಾಡಿಕೊಂಡಿದ್ದ ಬಗ್ಗೆ ಆಂದೋಲನ ದಿನಪತ್ರಿಕೆಯಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತು ಅಧಿಕಾರಿಗಳು ಇಂದಿನಿಂದ ಬಸ್ ಸಂಚಾರ ಪ್ರಾರಂಭಿಸಿದ್ದಾರೆ.
ತಾಲೂಕಿನ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆ ಕಾಡುವಿನ ದೊಡ್ಡಿ ಹಾಗೂ ಕಂಬಿಗುಡ್ಡೆ ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೈಲೂರು ಉನ್ನತಿಕರಿಸಿದ ಪ್ರೌಢಶಾಲೆಗೆ ತೆರಳುತ್ತಿದ್ದರು. ಈ ಗ್ರಾಮಕ್ಕೆ ಸಮರ್ಪಕ ರಸ್ತೆ ಇದ್ದರೂ ಬಸ್ ವ್ಯವಸ್ಥೆ ಇಲ್ಲದಿದ್ದದ್ದರಿಂದ ಪ್ರತಿದಿನ 6 km ನಡೆದುಕೊಂಡೆ ಹೋಗುತ್ತಿದ್ದರು. ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಕಳೆದ ವಾರ ಪ್ರತಿಭಟನೆ ನಡೆಸಿದ್ದರು ಆದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ, ಡಿಸೆಂಬರ್ 13ರಂದು ಹನೂರು ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ಆಗಮಿಸುತ್ತಿರುವ ಹಿನ್ನೆಲೆ ಅರೆಕಾಡುವಿನ ದೊಡ್ಡಿ ಗ್ರಾಮದ 9ನೇ ತರಗತಿ ವಿದ್ಯಾರ್ಥಿನಿ ಹರ್ಷಿಣಿ ಸಿಎಂ ಅಂಕಲ್ ನೀವು ಹೆಣ್ಣುಮಕ್ಕಳು ಚೆನ್ನಾಗಿ ಓದಿ ಓದಿ ಅಂತ ಹೇಳ್ತೀರಾ ಆದರೆ ನಮ್ಮೂರಿಗೆ ಬಸ್ ವ್ಯವಸ್ಥೆ ಇಲ್ಲ, ಕಾರ್ಯಕ್ರಮಕ್ಕೆ ಹನೂರಿಗೆ ಬಂದಾಗ ನಮ್ಮೂರಿಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಿ ಇಲ್ಲ ಅಂದ್ರೆ ಸ್ಕೂಲ್ಗೆ ಹೋಗಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರಿಗೆ ಮನವಿ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಡಿಸೆಂಬರ್ 12ರ ಆಂದೋಲನ ದಿನಪತ್ರಿಕೆಯಲ್ಲಿ “ಸಿಎಂ ಅಂಕಲ್ ಬಸ್ ಬಿಡಿಸಿ ಇಲ್ಲವೇ ನಾವು ಶಾಲೆಗೆ ಹೋಗಲ್ಲ” ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.
ವರದಿಗೆ ಎಚ್ಚೆತ್ತ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ನವೀನ್ ಮಠದ ಹಾಗೂ ಕೊಳ್ಳೇಗಾಲ ಡಿಪೋ ವ್ಯವಸ್ಥಾಪಕ ಮುತ್ತುರಾಜ್ ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಬಸ್ ಸಂಚಾರ ಪ್ರಾರಂಭಿಸಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆ ತಂದಿದ್ದಾರೆ. ಇದಲ್ಲದೆ ಬಸ್ ತಿರುಗಿಸಲು ತೊಂದರೆಯಾಗಿದ್ದ ಟಿಸಿಯನ್ನು ಸೆಸ್ಕಾಂ ಇಲಾಖೆ ಅಧಿಕಾರಿಗಳು ಬದಲಾಯಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ.
ನಮ್ಮ ಗ್ರಾಮಕ್ಕೆ ಬಸ್ ಇಲ್ಲದಿರುವುದರಿಂದ ನಾವು ಬಸ್ ಬೇಕೆಂದು ಪ್ರತಿಭಟನೆ ನಡೆಸಿದ್ದೆವು, ಇದಲ್ಲದೆ ಸಿಎಂ ಅಂಕಲ್ ಗು ಮನವಿ ಮಾಡಿದ್ದೆವು. ನಮ್ಮ ಪ್ರತಿಭಟನೆ ಸುದ್ದಿಯನ್ನು ಆಂದೋಲನ ದಿನಪತ್ರಿಕೆಯಲ್ಲಿ ಸುದ್ದಿ ಮಾಡಿದ್ದರು ಇದರಿಂದ ನಮಗೆ ಒಳ್ಳೆಯದಾಗಿದೆ. ನಮ್ಮ ಊರಿನ ಮಕ್ಕಳ ಪರವಾಗಿ ಆಂದೋಲನ ದಿನ ಪತ್ರಿಕೆಗೆ ಅಭಿನಂದನೆ ಸಲ್ಲಿಸುತ್ತೇವೆ.
ಹರ್ಷಿಣಿ 9ನೇ ತರಗತಿ ವಿದ್ಯಾರ್ಥಿನಿ.
********
ಅರೆಕಾಡಿನ ದೊಡ್ಡಿ ಗ್ರಾಮಕ್ಕೆ ಬಸ್ ಇಲ್ಲದಿರುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ಇಂದು ಪತ್ರಿಕೆ ನೋಡಿ ಕೊಳ್ಳೇಗಾಲ ಡಿಪೋ ವ್ಯವಸ್ಥಾಪಕರ ಜೊತೆ ಮಾತನಾಡಿ ಗ್ರಾಮಕ್ಕೆ ಬಸ್ ಸಂಚಾರ ಕಲ್ಪಿಸಿದ್ದೇವೆ.
ನವೀನ್ ಮಠದ್ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ
*****
ಇಂದು ಅರೆ ಕಾಡುವಿನ ದೊಡ್ಡಿ ಗ್ರಾಮಕ್ಕೆ ಬಸ್ ಸಂಚಾರ ಪ್ರಾರಂಭಿಸಿದ್ದೇವೆ ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ಪಾಸ್ ವಿತರಿಸಲು ಕ್ರಮ ವಹಿಸುತ್ತೇವೆ.
ಮುತ್ತುರಾಜು ಡಿಪೋ ವ್ಯವಸ್ಥಾಪಕ ಕೊಳ್ಳೇಗಾಲ.





