ಚಾಮರಾಜನಗರ: ಪರಿಶಿಷ್ಟ ಸಮುದಾಯದವರು ಹೆಚ್ಚಾಗಿರುವ ತಾಲ್ಲೂಕಿನ ಚಿಕ್ಕಹೊಳೆ, ಚಿಕ್ಕಹೊಳೆ ಚೆಕ್ಪೋಸ್ಟ್ ಗ್ರಾಮದ ಸಮೀಪ ಸ್ಮಶಾನ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬ ಒತ್ತುವರಿ ಮಾಡಿ ದಾರಿ ಬಂದ್ ಮಾಡಿದ್ದು ಇವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ಸ್ಮಶಾನ ಭೂಮಿ ಎದುರು ಜಮಾಯಿಸಿ ಗ್ರಾಮಸ್ಥರು, ಮಹೇಶ್ ಎಂಬವರು ತಮ್ಮ ಜಮೀನಿನೊಂದಿಗೆ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡು ಶವ ಹೂಳುವುದಕ್ಕೆ ತೊಂದರೆ ನೀಡುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಲು ಹೋದ ಗ್ರಾಮಸ್ಥರನ್ನೇ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಗ್ರಾಮಸ್ಥರು ದೂರಿದರು.
ಸುಮಾರು 70 ವರ್ಷಗಳಿಂದಲೂ ಎರಡೂ ಗ್ರಾಮದವರು ಸರ್ಕಾರಿ ಜಮೀನು 38ಪಿ1 ರಲ್ಲಿ 4ಎಕರೆ ಸರ್ಕಾರಿ ಭೂಮಿಯನ್ನು ಸ್ಮಶಾನವಾಗಿ ಬಳಕೆ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಗ್ರಾಮ ಪಂಚಾಯಿತಿಯವರು ಇಲ್ಲಿ ಬೋರ್ವೆಲ್ ಕೊರೆದು ಪಂಪ್ಹೌಸ್ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಈಗ ಏಕಾಏಕಿ ಒತ್ತುವರಿ ಮಾಡಿಕೊಂಡು ಸ್ಮಶಾನದ ದಾರಿಯನ್ನು ಬಂದ್ ಮಾಡಿದ್ದು ಕೂಡಲೇ ಇದನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸುವುದಾಗಿ ಎಂದಾಗಿ ಮಹದೇವಯ್ಯ ತಿಳಿಸಿದರು.
ಗ್ರಾಪಂ ಸದಸ್ಯರಾದ ಚೆಕ್ಪೋಸ್ಟ್ ಮೂರ್ತಿ, ಪ್ರಶಾಂತ್, ಸಿದ್ದಯ್ಯನಪುರದ ಮಂಜು, ಮುಖಂಡರಾದ ಕುಮಾರ್, ಅಂಗಡಿ ವಿನೋದ್, ಕಾರ್ತಿಕ್, ನಾಗೇಂದ್ರ, ರವಿ, ಸೆಲ್ವೆ ದೊರೆ, ನಾಗೇಗೌಡ, ಮೋಹನ್ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.




