Mysore
21
overcast clouds

Social Media

ಶನಿವಾರ, 04 ಜುಲೈ 2026
Light
Dark

ಬೆಟ್ಟದಪುರ : ನಿಷೇಧವಿದ್ದರೂ ಜಾನುವಾರು ತಂದ ರೈತರು

ಬೆಟ್ಟದಪುರ : ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾನುವಾರು ಸಂತೆಗಳನ್ನು ನಿಷೇಧಿಸಿದ್ದರೂ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಹರದೂರು ಗೇಟ್‌ನಲ್ಲಿ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾತ್ರೋತ್ಸವದ ಅಂಗವಾಗಿ ದನಗಳ ಜಾತ್ರೆ ಆರಂಭವಾಗಿದೆ.

ಪಿರಿಯಾಪಟ್ಟಣ ಸುತ್ತಮುತ್ತಲಿನ ರೈತರು ದನಗಳನ್ನು ತಂದು ಜಾತ್ರೆಯಲ್ಲಿ ಕಟ್ಟುತ್ತಿದ್ದಾರೆ. ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ಜಾನುವಾರು ಸಂತೆ ಮತ್ತು ಸಾಗಣೆ ಮಾಡುವುದನ್ನು ನಿಷೇಧಿಸಿದೆ. ಆದರೂ ಜಾನುವಾರುಗಳನ್ನು ತರುತ್ತಿರುವುದು ಆತಂಕ ಮೂಡಿಸಿದೆ.

ಈ ಕುರಿತು ರೈತ ಹರದೂರು ಗಿರೀಶ್ ಮಾತನಾಡಿ, ನಾವು ತಾತನ ಕಾಲದಿಂದಲೂ ದನಗಳ ಜಾತ್ರೆಗಳಲ್ಲಿ ದನಗಳನ್ನು ಕಟ್ಟುತ್ತಿದ್ದೇವೆ. ಇದು ನಮ್ಮ ಸಂಪ್ರದಾಯ. ನಾವು ಗೋವುಗಳನ್ನು ಅಲಂಕಾರ ಮಾಡಿ ಸಂತೋಷಕ್ಕಾಗಿ ಕಟ್ಟುತ್ತೇವೆ. ಜಿಲ್ಲಾಡಳಿತ ನಮಗೆ ಕುಡಿಯುವ ನೀರು, ವಿದ್ಯುತ್ ಯಾವುದೇ ಸೌಕರ್ಯಗಳು ಒದಗಿಸಿ ಕೊಟ್ಟಿಲ್ಲ. ಮಾರಾಟ ಮಾಡದಿದ್ದರೂ ತೊಂದರೆ ಇಲ್ಲ, 4 ದಿವಸ ಇದ್ದು ಹೋಗುತ್ತೇವೆ ಎಂದರು.

ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸೋಮಯ್ಯ ಪತ್ರಿಕೆಯೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಚರ್ಮ ಗಂಟು ರೋಗ ಇರುವುದರಿಂದ ಜಾನುವಾರುಗಳಿಗೆ ಲಸಿಕೆ ನೀಡುತ್ತಿದ್ದೇವೆ. ತಾಲ್ಲೂಕಿನಲ್ಲಿ 200 ಜಾನುವಾರುಗಳಿಗೆ ಚರ್ಮಗಂಟು ರೋಗ ಕಂಡುಬಂದಿದ್ದು , ಲಸಿಕೆ ನೀಡಿದ್ದೇವೆ. ಇದೊಂದು ಸಾಂಕ್ರಾಮಿಕ ರೋಗವಾಗಿರುವುದರಿಂದ ದನಗಳ ಜಾತ್ರೆಗಳಲ್ಲಿ ದನಗಳಿಗೆ ಹರಡುವ ಸಾಧ್ಯತೆಯಿದೆ. ಆದ್ದರಿಂದ ಡಿಸಿ ಅವರು ದನಗಳ ಜಾತ್ರೆ ನಿಷೇಧ ಮಾಡಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆ ಮುಖಾಂತರ ಜಾನುವಾರುಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!