ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಿ.ನರಸೀಪುರ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ಆದಿ ದ್ರಾವಿಡ ಸಮುದಾಯದ ಸ್ಥಳೀಯ ಯುವ ಮುಖಂಡರಾದ ಬಾಲರಾಜ್ ಅವರಿಗೆ ಟಿಕೆಟ್ ನೀಡಬೇಕೆಂದು ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ಆದಿದ್ರಾವಿಡ (ಪೌರಕಾರ್ಮಿಕರ) ಯುವಕರ ಅಭಿವೃದ್ಧಿ ಮಹಾಸಂಘ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಸಿ.ಎಂ.ರಾಮಯ್ಯ, ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ವರ್ಷಗಳಾದರೂ ಅದಿದ್ರಾವಿಡ ಮಾದಿಗ ಸಮುದಾಯ ವಿಧಾನಸೌಧದ ಮೆಟ್ಟಿಲು ಏರಿಲ್ಲ. ನಮ್ಮ ಹಕ್ಕುಗಳಿಗಾಗಿ ಸಾಕಷ್ಟು ಹೋರಾಟ ಮಾಡಿದ್ದೇವೆ. ನಮ್ಮ ಸಮುದಾಯದವರಿಗೆ ಎಂಎಲ್ಎ ಟಿಕೆಟ್ ಅನ್ನು ಇದುವರೆಗೂ ಯಾವ ಪಕ್ಷವೂ ನೀಡಿಲ್ಲ. ಪರಿಶಿಷ್ಟ ಜಾತಿಯಲ್ಲಿ ಎಡ -ಬಲವೆಂದು ವಿಂಗಡಣೆ ಆಗಿರುವುದರಿಂದಾಗಿ ನಮ್ಮ ಸಮುದಾಯವರಿಗೆ ಯಾರೂ ಟಿಕೆಟ್ ನೀಡಿಲ್ಲ. ಒಂದು ವೇಳೆ ಬಾಲರಾಜು ಅವರಿಗೆ ಟಿಕೆಟ್ ನೀಡದಿದ್ದಲ್ಲಿ ಪಕ್ಷೇತರರಾಗಿ ಅವರು ಸ್ಪರ್ಧಿಸಲಿದ್ದಾರೆ ಎಂದು ಎಚ್ಚರಿಸಿದರು.
ಸಮುದಾಯದ ಮುಖಂಡರಾದ ಕೆ.ನಂಜಪ್ಪ ಬಸವನಗುಡಿ, ಮಾಚಯ್ಯ, ಜಿ.ಶ್ರೀನಿವಾಸ್ ಗಂಗೋತ್ರಿ, ಎಂ. ರಂಗಸ್ವಾಮಿ, ಜಿ.ಮುರುಗೇಶ್, ರಾಜಣ್ಣ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.





