Mysore
26
overcast clouds

Social Media

ಮಂಗಳವಾರ, 28 ಜುಲೈ 2026
Light
Dark

ಪ್ರೇಕ್ಷಕರ ಮನಗೆದ್ದ ಚಂದ್ರಹಾಸ, ಲೀಲಾವತಿ ನಾಟಕ ಪ್ರದರ್ಶನ

ಜಿಟಿಜಿಟಿ ಮಳೆ, ಚಳಿಯ ನಡುವೆ ಮಿರ್ಚಿ, ಮಂಡಕ್ಕಿ ತಿಂದು ನಾಟಕ ವೀಕ್ಷಣೆ

ಬಿ.ಎನ್.ಧನಂಜಯಗೌಡ

ಮೈಸೂರು: ಹೊರಗೆ ಜಿಟಿ ಜಿಟಿ ಮಳೆ, ಚಳಿಯ ನಡುವೆ ತಲೆಗೆ ಟೋಪಿ ಹಾಕಿ, ಬೆಚ್ಚಗೆ ಸ್ವೆಟರ್ ಧರಿಸಿ, ಮಿರ್ಚಿ, ಮಂಡಕ್ಕಿ, ಬಜ್ಜಿಯನ್ನು ತಿನ್ನುತ್ತಾ ನಾಟಕ ವೀಕ್ಷಣೆ ಮಾಡುವಲ್ಲಿ ಪ್ರೇಕ್ಷಕರು ನಿರತರಾಗಿದ್ದ ದೃಶ್ಯಗಳು ಭಾನುವಾರ ರಂಗಮಂದಿರಗಳಲ್ಲಿ ಕಂಡುಬಂದವು.  ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ಭಾನುವಾರ ಪ್ರದರ್ಶನಗೊಂಡ ‘ಚಂದ್ರಹಾಸ’ ಮತ್ತು ‘ಲೀಲಾವತಿ’ ನಾಟಕಗಳು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದವು.

‘ಚಂದ್ರಹಾಸ’ ಅತ್ಯುತ್ತಮ ಸ್ಪಂದನೆ: ಮಂತ್ರಿಯೊಬ್ಬ ಮೌಢ್ಯದ ದಾಸ್ಯಕ್ಕೆ ಒಳಗಾಗಿ ಮತ್ತು ರಾಜಪುರೋಹಿತರು ಹೇಳುವ ಭವಿಷ್ಯವನ್ನು ನಂಬಿ, ಹೇಗೆ ತನ್ನ ಮಗನನ್ನೇ ಬಲಿಕೊಡುತ್ತಾನೆ ಎಂಬ ಸಾರವನ್ನು ಒಳಗೊಂಡ ಕುವೆಂಪು ರಚನೆಯ ಪ್ರಮೋದ್ ಶಿಗ್ಗಾಂವ್ ನಿರ್ದೇಶನದ ನಾಟಕ ‘ಚಂದ್ರಹಾಸ’ ನಾಟಕ ಸಂಪತ್ ರಂಗಮಂದಿರದಲ್ಲಿ ಸಾಣೇಹಳ್ಳಿ ಶಿವಕುಮಾರ ಕಲಾಸಂಘದ ತಂಡದಿಂದ ಪ್ರದರ್ಶನಗೊಂಡಿತು. ಈ ನಾಟಕಕ್ಕೆ ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು.


ಮನಗೆದ್ದ ಲೀಲಾವತಿ: ಭಾರತದ ಶ್ರೇಷ್ಠ ಗಣಿತಶಾಸ್ತ್ರಜ್ಞ ಭಾಸ್ಕರಾಚಾರ್ಯ ಅವರು ಬರೆದಿರುವ ‘ಲೀಲಾವತಿ’ ಗ್ರಂಥ ಸಿದ್ಧಾಂತವನ್ನು ಆಧರಿಸಿದ ಲೀಲಾವತಿ ನಾಟಕ ಭೂಮಿಗೀತ ವೇದಿಕೆಯಲ್ಲಿ ಪ್ರದರ್ಶನಗೊಂಡಿತು. ಶಶಿಧರ ಡೋಂಗ್ರೆ ಅವರ ರಚನೆಯ, ಪ್ರೊ.ಎಚ್.ಎಸ್.ಉಮೇಶ್ ನಿರ್ದೇಶಿಸಿರುವ ಕನ್ನಡದ ಈ ನಾಟಕವನ್ನು ಕಲಾಸುರುಚಿ ತಂಡ ಅದ್ಬುತವಾಗಿ ಪ್ರದರ್ಶಿಸಿತು. ಭೂಮಿಗೀತ ವೇದಿಕೆ ಶೇ.೮೦ರಷ್ಟು ಭರ್ತಿಯಾಗುವ ಮೂಲಕ ರಂಗಾಸ್ತಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.

ನೀರಸ ಪ್ರತಿಕ್ರಿಯೆ: ಸಿಯಾಮ್ ಡೆತ್ ರೈಲ್ವೇ ನಿರ್ಮಾಣದಲ್ಲಿ ನಾಶವಾದ ಲಕ್ಷಾಂತರ ಆಗ್ನೇಯ ಏಷ್ಯಾದ ಮತ್ತು ಮಲೇಷಿಯಾದ ತಮಿಳು ನಿರಾಶ್ರಿತರ ಕಥೆಗಳನ್ನು ಆಧರಿಸಿದ ‘ಇಡಕಿಣಿ ಕಥಾಯರಥಂ’ ಎಂಬ ತಮಿಳು ನಾಟಕಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ೪೦೦ ಟಿಕೆಟ್‌ಗಳ ಪೈಕಿ ಕೇವಲ ೩೬ ಟಿಕೆಟ್‌ಗಳಷ್ಟೆ ಸೇಲ್ ಆಗಿದ್ದವು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!