ಅಂತರಸಂತೆ: ಕಾಡಿಗೆ ಸೌದೆ ತರಲು ತೆರಳಿದ್ದ ಮಂಜು ಎಂಬವರ ಮೇಲೆ ಹುಲಿಯೊಂದು ದಾಳಿ ನಡೆಸಿದ ಘಟನೆಯ ಹಿನ್ನೆಲೆಯಲ್ಲಿ ಹುಲಿಯನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳ ಕಚೇರಿ ಎದುರು ಹಾಡಿಯ ಜನರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಎಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಬಳ್ಳೆ ಹಾಡಿಯ ಮಂಜು(17) ಎಂಬ ಯುವಕನು ಜ.22ರಂದು ಕಾಡಿಗೆ ಸೌದೆ ತರಲು ತೆರಳಿದ್ದ ವೇಳೆ ಹಾಡಿಯ ಸಮೀಪ ಹುಲಿಯೊಂದು ಆತನ ಮೇಲೆ ದಾಳಿ ನಡೆಸಿ ಬಲಿ ಪಡೆದಿತ್ತು. ಬಳಿಕ ಹಾಡಿಯ ಜನರು ಹುಲಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದರು.
ಹುಲಿ ದಾಳಿಯಾಗದಂತೆ ಎಚ್ಚರ ವಹಿಸುತ್ತೇವೆ ಎಂದು ಅರಣ್ಯಾಧಿಕಾರಿಗಳು ಭರವಸೆಯನ್ನು ನೀಡಿದ್ದ ಮೇರೆಗೆ ಪ್ರತಿಭಟನೆಯನ್ನು ಕೈಬಿಡಲಾಗಿತ್ತು. ಆದರೆ ಇದೀಗ ಮತ್ತೇ ಎರಡು ದಿನಗಳ ಹಿಂದೆ ಹಾಡಿಯ ಸಮೀಪವೇ ಹುಲಿಯೊಂದು ಹಸುವನ್ನು ಕೊಂದ ಹಾಕಿದ್ದು, ಭಯಭೀತರಾದ ಹಾಡಿಯ ಜನರು, ಹುಲಿಯನ್ನು ಸ್ಥಳಾಂತರಿಸುವವರೆಗೂ ಧರಣಿ ಮುಂದುವರಿಸಲಾಗುವುದು ಎಂದು ಪಟ್ಟ ಹಿಡಿದು ಅರಣ್ಯ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ಆರಂಭಿಸಿದ್ದಾರೆ.
ರಮೇಶ್, ವಡ್ಡರಗುಡಿ ಚಿಕ್ಕಣ್ಣ, ಅಯ್ಯಪ್ಪ, ಗಂಗೆ, ಮಾಸ್ತಿ, ಟಿ.ಸಿ.ಸುರೇಶ್, ಚಂದ್ರು, ನಾಗರಾಜು, ಮಹದೇವ, ಕೂಸಣ್ಣ ಸೇರಿದಂತೆ ಹಾಡಿ ಅರಣ್ಯ ಹಕ್ಕು ಸಮಿತಿ ಸದಸ್ಯರು, ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು





