ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾದ ಈ ಬಾರಿಯ ವಸ್ತು ಪ್ರದರ್ಶನವು ಸೆ.26ರಿಂದ ಪ್ರಾರಂಭವಾಗಲಿದೆ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಾರಿ ವಿಶೇಷ ಕಾರ್ಯಕ್ರಮಗಳೊಂದಿಗೆ 90 ದಿನಗಳ ಕಾಲ ವಸ್ತುಪ್ರದರ್ಶನ ಆಯೋಜನೆಗೊಳಿಸಲಾಗಿದೆ. ವಸ್ತುಪ್ರದರ್ಶನದಲ್ಲಿ ಪುನೀತ್ ರಾಜ್ ಕುಮಾರ್ ನೆನಪಿಗಾಗಿ 7 ಸ್ಯಾಂಡ್ ಮ್ಯೂಸಿಯಂ,
ಯೋಗ 3ಡಿ ವಿಡಿಯೋ ಮ್ಯಾಪಿಂಗ್ ಸೇರಿದಂತೆ ಕಾವೇರಿ ಬಹುಮಾಧ್ಯಮ ಕಲಾ ಗ್ಯಾಲರಿ ಉದ್ಘಾಟನೆ ಮಾಡಲಾಗುವುದು ಎಂದರು.
ಪ್ರತ್ಯೇಕ ಆವರಣಗಳಲ್ಲಿ ವೆಜ್ ಅಂಡ್ ನಾನ್ ವೆಜ್ ಸ್ಟಾಲ್ ಗಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು. ಇದರ ಜೊತೆಗೆ 6 ಮಂದಿ ಸ್ವಾತಂತ್ರ್ಯ ಹೋರಾಟಗಾರರ ಮರಳು ಕೃತಿಯನ್ನು ರಚಿಸಲಾಗುವುದು. ಆ 6ಮಂದಿ ಸ್ವಾತಂತ್ರ್ಯ ಹೋರಾಟಗಾರರು ಯಾರು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.
ವಸ್ತುಪ್ರದರ್ಶನದ ಅವರಣವನ್ನ ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಣೆ ಹಿನ್ನೆಲೆ ಪ್ಲಾಸ್ಟಿಕ್ ಬಳಸುವಂತಿಲ್ಲ,
ಪ್ಲಾಸ್ಟಿಕ್ ಬಳಕೆ ತಡೆಗಟ್ಟಲು ಪ್ರಾಧಿಕಾರದ ವತಿಯಿಂದಲೇ ಆರ್ ಓ ಪ್ಲಾಂಟ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಎರಡು ವರ್ಷಗಳ ಕೋವಿಡ್ ಬಳಿಕ ನಡೆಯುತ್ತಿರುವ ಅದ್ದೂರಿ ವಸ್ತು ಪ್ರದರ್ಶನ ಇದಾಗಿದೆ, ಹೀಗಾಗಿ
ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ನಗರದ ಜನತೆ ಆಗಮಿಸುವಂತೆ ಮಿರ್ಲೆ ಶ್ರೀನಿವಾಸ್ ಗೌಡ ಮನವಿ ಮಾಡಿದರು.