Mysore
16
overcast clouds

Social Media

ಬುಧವಾರ, 11 ಫೆಬ್ರವರಿ 2026
Light
Dark

ಹುಬ್ಬಳ್ಳಿ | ದಲಿತ ಯುವಕನ ಜೊತೆ ಮದುವೆ : ಗರ್ಭಿಣಿ ಮಗಳನ್ನ ಕೊಂದ ಪೋಷಕರು

ಹುಬ್ಬಳ್ಳಿ : ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ಮಗಳನ್ನು ಸ್ವಂತ ತಂದೆ ಸೇರಿ ಇತರರು ಕೊಲೆ ಮಾಡಿ ಗಂಡನ ಮನೆಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಅಮಾನುಷ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರ ಗ್ರಾಮದಲ್ಲಿ ಜರುಗಿದೆ.

ಕೊಲೆಯಾದ ಗೃಹಿಣಿಯನ್ನು ಮಾನ್ಯ ಎಂದು ಗುರುತಿಸಲಾಗಿದೆ. ಈಕೆಯ ಅತ್ತೆ ರೇಣಮ್ಮ ಮತ್ತು ದೊಡ್ಡ ಮಾವನ ಸ್ಥಿತಿ ಚಿಂತಾಜಕವಾಗಿದ್ದು ಹುಬ್ಬಳ್ಳಿ ನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಷ್ಕೃತ್ಯವೆಸಗಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಇದನ್ನು ಓದಿ: ಡಿ.24ರಂದು ಮಹಾಸಭಾದಿಂದ ಶಾಮನೂರು ನುಡಿ ನಮನ: ಈಶ್ವರ ಖಂಡ್ರೆ

ಇನಾಂ ವೀರಾಪೂರ ಗ್ರಾಮದ ಮಾನ್ಯಾ ಎಂಬಾಕೆ ಇದೇ ಗ್ರಾಮದ ವಿವೇಕಾನಂದ ದೊಡ್ಡಮನಿ ಎಂಬ ದಲಿತ ಯುವಕನನ್ನು ಪ್ರೀತಿಸಿ ಇದೇ ವರ್ಷ ಮೇ ತಿಂಗಳಲ್ಲಿ ಮದುವೆಯಾಗಿದ್ದಳು. ಇದಕ್ಕೆ ಮಾನ್ಯಳ ಮನೆಯವರ ವ್ಯಾಪಕ ವಿರೋಧವಿತ್ತು. ಮದುವೆಯ ನಂತರ ಮಾನ್ಯಾಳ ಕುಟುಂಬಸ್ಥರು ಕೊಲೆ ಮಾಡುವುದಾಗಿ ಮಾನ್ಯಾಳಿಗೆ ಬೆದರಿಕೆ ಹಾಕಿದ್ದರು. ಇದರಿಂದ ಹೆದರಿದ್ದ ದಂಪತಿಗಳು ಕೆಲ ದಿನಗಳು ಹಾವೇರಿಯಲ್ಲಿ ನೆಲೆಸಿ ಇತ್ತೀಚೆಗೆ ಸ್ವಗ್ರಾಮಕ್ಕೆ ಮರಳಿದ್ದರು. ಭಾನುವಾರ (ಡಿ.೨೧) ವಿವೇಕಾನಂದ ಮತ್ತು ಆತನ ತಂದೆ ಜಮೀನಿನಲ್ಲಿ ಕೆಲಸ ಮಾಡುವಾದ ಮಾನ್ಯಾಳ ತಂದೆ ಮತ್ತು ಕುಟುಂಬದ ಸದಸ್ಯರು ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿದ್ದಾರಲ್ಲದೆ, ವಿವೇಕಾನಂದನ ಮನೆಗೆ ತೆರಳಿ ಮಾನ್ಯ ಮತ್ತು ಈಕೆಯ ಅತ್ತೆಯ ಮೇಲೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾನ್ಯ ಆರು ತಿಂಗಳ ಗರ್ಭಿಣಿಯಾಗಿದ್ದರಿಂದ ಈಕೆಯ ತಲೆ ಮತ್ತು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಈಕೆಯನ್ನು ಹುಬ್ಬಳ್ಳಿ ನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ಮಾನ್ಯ ಮತ್ತು ಆಕೆಯ ಹೊಟ್ಟೆಯಲ್ಲಿದ್ದ ಆರು ತಿಂಗಳ ಮಗು ಮೃತಪಟ್ಟಿದೆ ಎಂದು ವರದಿಯಾಗಿದೆ. ತೀವ್ರ ಹಲ್ಲೆಗೆ ಒಳಗಾದ ವಿವೇಕಾನಂದನ ತಾಯಿ ರೇಣಮ್ಮ ಹಾಗೂ ದೊಡ್ಡಪ್ಪನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮವಹಿಸಿದ್ದಾರೆ.

Tags:
error: Content is protected !!