Mysore
23
overcast clouds
Light
Dark

ಕನ್ನಡದ ಮೊದಲ ಚಿತ್ರ ‘ಸತಿಸುಲೋಚನಾ’ಗೆ 90 ಆಗುವ ಹೊತ್ತು

ಬಾ.ನಾ.ಸುಬ್ರಹ್ಮಣ್ಯbaanaasu@gmail.com

ನಾಡದು ಭಾನುವಾರ, ಮಾರ್ಚ್ 3. ಕನ್ನಡದ ಮೊದಲ ಚಿತ್ರ ‘ಸತಿ ಸುಲೋಚನಾ’ ತೆರೆಕಂಡು 90 ವರ್ಷ. ಕನ್ನಡ ಸಿನಿಮಾ ದಿನ ಎಂದು ಈ ದಿನವನ್ನು ಅಕರೆಯಲಾಗುತ್ತಿದೆ. ವಿಶ್ವ ಕನ್ನಡ ಸಿನಿಮಾ ದಿನ ಎಂದು ಕೂಡ. ಮೊದಲ 31 ವರ್ಷಗಳಲ್ಲಿ ತಯಾರಾಗುತ್ತಿದ್ದಷ್ಟು ಚಿತ್ರಗಳನ್ನು ಈಗ ಒಂದೇ ವರ್ಷದಲ್ಲಿ ಕನ್ನಡ ಚಿತ್ರರಂಗ ನಿರ್ಮಿಸುತ್ತಿದೆ!

ಮೊದಲು, ಸೆಲ್ಯುಲಾಯಿಡ್ ದಿನಗಳು, ಈಗ ಡಿಜಿಟಲ್. ರಂಗಭೂಮಿಯ ವಿಸ್ತರಣೆ, ತಾಂತ್ರಿಕ ವಿಸ್ತರಣೆಯಂತೆ ಪರಿಗಣಿಸಲಾಗಿದ್ದ ಕನ್ನಡ ಚಲನಚಿತ್ರ ಮುಂದೆ ತನ್ನದೇ ಆದ ಹಾದಿಯನ್ನು ಹಿಡಿಯಿತು. ಚಿತ್ರೋದ್ಯಮವೂ ಬೆಳೆಯಿತು. ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕರು ಸೋಲು-ಗೆಲುವುಗಳಲ್ಲಿ ಪೂರಕ ಹೆಜ್ಜೆಗಳನ್ನಿಡುತ್ತಿದ್ದರು.

ಚಲನಚಿತ್ರ ಕಲೆ ಮತ್ತು ಉದ್ಯಮ ಎರಡೂ ಆಗಿರುವುದರಿಂದ ಅದನ್ನು ಕಲೋದ್ಯಮ ಎಂದು ಕರೆಯುತ್ತಾರೆ. ಸಿನಿಮಾ ಮಾಧ್ಯಮದ ಬೆನ್ನಲ್ಲೇ ಬಂದ ಕಿರುತೆರೆ ಲೋಕ, ನಂತರ ಒಟಿಟಿ, ವೆಬ್ ಸರಣಿಗಳು, ಮನೆಯಲ್ಲೇ ಚಿತ್ರಮಂದಿರಗಳು, ಬೆರಳ ತುದಿಯಲ್ಲಿ ರೀಲ್ ಟ್ರೋಲ್‌ಗಳ ಹೆಸರಲ್ಲಿ ಮನರಂಜನೆ, ಚಿತ್ರರಂಗದ ಹಿಂದಿನ ಎಲ್ಲ ಲೆಕ್ಕಾಚಾರಗಳನ್ನೂ ಬುಡಮೇಲು ಮಾಡಿವೆ.

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭಾವಂತರು ಬರುತ್ತಿದ್ದಾರೆ ಎನ್ನುವುದೇನೋ ನಿಜ. ಆದರೆ, ಉದ್ಯಮದಲ್ಲಿ ಅವರು ನೆಲೆಯೂರುವ ಸಾಧ್ಯತೆ ಎಷ್ಟು? ಬಹಳ ಕಡಿಮೆ. ವಾರದಲ್ಲಿ ಬಿಡುಗಡೆಯಾಗುವ ಚಿತ್ರಗಳ ಸಂಖ್ಯೆ ಎರಡಂಕಿಯನ್ನು ಹಲವು ಬಾರಿ ದಾಟುತ್ತದೆ. ತೆರೆಕಂಡ ಪ್ರದರ್ಶನ ಮತ್ತು ದಿನದ ಹೊರತಾಗಿ, ಚಿತ್ರ ಚೆನ್ನಾಗಿದ್ದರೂ ಹೋಗುವುದಿಲ್ಲ ಎನ್ನುವುದು ಹೊಸಬರ ದೂರು. ಅದಕ್ಕೆ ಈ ದಿನಗಳಲ್ಲಿನ ಪ್ರಚಾರ ವ್ಯವಸ್ಥೆ ಮತ್ತು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವ ಹೊಸ ಬೆಳವಣಿಗೆ ಕಾರಣ ಎನ್ನುವುದು ಹೊಸ ಚಿತ್ರಗಳನ್ನು ನಿರ್ಮಿಸಿ, ತಾವೇ ಬಿಡುಗಡೆ ಮಾಡಿದ ಅನುಭವಿಗಳ ಮಾತು.

ಯಾವುದೇ ಹೊಸ ಚಿತ್ರ ತೆರೆ ಕಂಡಾಗ, ಆರಂಭದ ದಿನಗಳಲ್ಲಿ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಒದಗಿಸುವ ಮಂದಿ ಇದ್ದಾರೆ. ಇದನ್ನು ‘ಮಾಫಿಯಾ’ ಎನ್ನುವ ನಿರ್ಮಾಪಕರೂ ಇದ್ದಾರೆ. ಕರ್ನಾಟಕದ ಯಾವುದೇ ಜಿಲ್ಲೆಯ ಯಾವುದೇ ಚಿತ್ರಮಂದಿರದಲ್ಲಿ ಒಂದು ಸಿನಿಮಾ ತೆರೆ ಕಾಣುವ ಪ್ರಕಟಣೆ ಆಗುತ್ತಲೇ ಮೊದಲಲ್ಲಿ ಆ ಚಿತ್ರದ ನಿರ್ಮಾಪಕರನ್ನು ಸಂಪರ್ಕಿಸುವುದು ಪ್ರೇಕ್ಷಕರನ್ನು ಕರೆತರುವ ಈ ವರ್ಗದ ಮುಖ್ಯರು. ಚುನಾವಣೆ ಬಂತು. ಎಲ್ಲ ಪಕ್ಷಗಳೂ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸುವುದಿದೆ. ಸಭೆಗೆ ಸಾವಿರಾರು ಜನ ಬರುತ್ತಾರೆ. ಅವರನ್ನು ಕರೆತರುವ ವ್ಯವಸ್ಥೆ ಮಾಡುವ ಮಂದಿ ಇರುತ್ತಾರೆ. ಅವರಿಗೆ ಊಟ ಫಲಾಹಾರಗಳ ಜೊತೆಗೆ ನಿಗದಿತ ಮೊತ್ತವನ್ನೂ ನೀಡುವ ವ್ಯವಸ್ಥೆ ಎಲ್ಲ ಪಕ್ಷಗಳಲ್ಲೂ ಇದೆ. ಇದು ಈಗ ಚಿತ್ರರಂಗಕ್ಕೂ ವಿಸ್ತರಿಸಿದೆ.

ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಕರೆತರುವ ದಂಧೆ ಕರ್ನಾಟಕಾದ್ಯಂತ ಇದೆ ಎನ್ನುವುದನ್ನು ಸ್ವತಃ ಗಾಂಧಿನಗರವೇ ಹೇಳುತ್ತಿದೆ. ವಿತರಕರೇ ಈ ವ್ಯವಸ್ಥೆಗೆ ಅವಕಾಶ ಮಾಡಿಕೊಡುತ್ತಾರೆ ಎನ್ನುವುದು ಅನುಭವಿಗಳ ಮಾತು. ಚಿತ್ರ ಬಿಡುಗಡೆಯಾದಾಗ ಆಸಕ್ತ ಪ್ರೇಕ್ಷಕರ ಸಂಖ್ಯೆ ಕಡಿಮೆ. ಆದರೆ, ಪುಕ್ಕಟೆ ಪ್ರೇಕ್ಷಕರನ್ನು ಕರೆತರುವ ವ್ಯವಸ್ಥೆ ಆಗಬೇಕು. ಇಲ್ಲದೆ ಹೋದರೆ, ಎರಡನೇ ವಾರ ಚಿತ್ರ ಪ್ರದರ್ಶನ ಇರುವುದಿಲ್ಲ. ಎರಡನೇ ವಾರ ಏಕೆ, ಕೆಲವೊಮ್ಮೆ ಖಾಲಿ ಹೊಡೆದು, ಎರಡನೇ ಪ್ರದರ್ಶನವೇ ಚಿತ್ರಮಂದಿರದಿಂದ ಎತ್ತಂಗಡಿಯಾದ ದ್ದಿದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರ ಸಂಖ್ಯೆ ಕನಿಷ್ಠ ಹತ್ತು ಇರಬೇಕು, ಹಾಗಾದರೆ ಮಾತ್ರ ಪ್ರದರ್ಶನ. ಇಲ್ಲದಿದ್ದರೆ ಶೋ ರದ್ದು! ಅದಕ್ಕಾಗಿ ಮೈಸೂರಿನ ಮಿತ್ರರೊಬ್ಬರು ತಾವು ಹತ್ತು ಟಿಕೆಟು ಪಡೆದು ಒಬ್ಬರೇ ಚಿತ್ರ ನೋಡಿದ್ದನ್ನು ಹೇಳುತ್ತಿರುತ್ತಾರೆ.

ಚಿತ್ರಮಂದಿರಗಳಿಗೆ ಉಚಿತ ಟಿಕೆಟ್ ನೀಡಿ ಪ್ರೇಕ್ಷಕರನ್ನು ಕರೆತರುವ ಜಾಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇದೆ. ರಾಜ್ಯ ಮಾತ್ರವಲ್ಲ, ದೇಶದಾದ್ಯಂತ ಇದೆ ಎನ್ನುವವರೂ ಇದ್ದಾರೆ. ಗಲ್ಲಾಪೆಟ್ಟಿಗೆ ಗಳಿಕೆಯ ಒಂದು ಭಾಗ ನಿರ್ಮಾಪಕರಿಗೆ ಪುನಃ ಹಿಂದಿರುಗುವುದರಿಂದ ಇದು ಕಪ್ಪು-ಬಿಳಿ ಲೆಕ್ಕಾಚಾರಕ್ಕೂ ಸಹಕಾರಿಯಾಗುತ್ತದೆ, ಇದು ಹೊಸದೇನೂ ಅಲ್ಲವಲ್ಲ ಎನ್ನುವವರ ಸಂಖ್ಯೆಯೂ ಸಾಕಷ್ಟು ಇದೆ.

ಚಿತ್ರಗಳ ಬಿಡುಗಡೆಗೆ ಈ ದಿನಗಳಲ್ಲಿ ಪ್ರಚಾರ ಮುಖ್ಯ. ಅದು ಸಾಮಾಜಿಕ ಜಾಲತಾಣಗಳಲ್ಲಿರಬಹುದು, ಇಲ್ಲವೇ ಇತರ ಮಾಧ್ಯಗಳಲ್ಲಿರಬಹುದು. ಮೊದಲು ತಮ್ಮ ಬಿಡುಗಡೆಯ ಚಿತ್ರಗಳ ವಿವರಗಳನ್ನು ಅಲ್ಲಿ ಪ್ರಕಟಿಸುತ್ತಾರೆ. ಚಿತ್ರದ ನಿರ್ಮಾಣಕ್ಕೂ ಮೊದಲು ಅದರ ಮೊದಲ ನೋಟ, ಟೀಸರ್, ಟ್ರೇಲರ್, ಹಾಡುಗಳನ್ನು ಒಬ್ಬೊಬ್ಬಪ್ರಮುಖರಿಂದಬಿಡುಗಡೆಮಾಡಿಸುವುದು ಪ್ರಚಾರದ ರೀತಿ.

ಎರಡು ವಾರಗಳ ಹಿಂದೆ ಹನ್ನೆರಡೋ ಹದಿಮೂರೋ ಚಿತ್ರಗಳು ತೆರೆಕಂಡವು. ಅವುಗಳಲ್ಲಿ ಒಂದೆರಡು ಚಿತ್ರಗಳಿವೆ. ಉಳಿದವು, ಈ ಕೃತಕ ಪ್ರೇಕ್ಷಕರಿಲ್ಲದೆ ಚಿತ್ರಮಂದಿರದಿಂದ ದೂರವಾಗಬೇಕಾಯಿತು. ಎರಡು ವಾರಗಳ ಹಿಂದೆ ತೆರೆಕಂಡ ಹನ್ನೆರಡು ಚಿತ್ರಗಳಲ್ಲಿ ‘ರವಿಕೆ ಪ್ರಸಂಗ’ವೂ ಒಂದು. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡ ಸ್ಪರ್ಧಾ ವಿಭಾಗಕ್ಕೂ ಆಯ್ಕೆಯಾದ ಚಿತ್ರವಿದು. ಅದರ ನಿರ್ಮಾಪಕ, ನಿರ್ದೇಶಕ ಒಬ್ಬರೇ. ‘ಮೊದಲು ನನಗೆ ಈ ವಿಷಯ ತಿಳಿದಿರಲಿಲ್ಲ. ಚಿತ್ರ ನಿರ್ಮಾಣಕ್ಕಿಂತ, ಅದನ್ನು ತೆರೆಗೆ ತರಲು ಬೇಕಾದ ಈ ದುಬಾರಿ ವೆಚ್ಚದ ಬಗ್ಗೆ ನನಗೆ ತಿಳಿದಿರಲಿಲ್ಲ. ಚಿತ್ರ ತೆರೆಕಂಡ ಮೇಲೆ, ಪ್ರತಿದಿನ ಒಂದಷ್ಟು ಮಂದಿ ಬರುವಂತೆ ನೋಡಿಕೊಳ್ಳುವುದು ನಿರ್ಮಾಪಕರ ಕೆಲಸ ಮುಂದಿನ ಚಿತ್ರದ ವೇಳೆ ನಾನು ಅದಕ್ಕೂ ಸಿದ್ಧನಾಗಿ ಬರುತ್ತೇನೆ’ ಎನ್ನುತ್ತಾರೆ ಅವರು.

ಅವರ ಪ್ರಕಾರ, ಪ್ರೇಕ್ಷಕರು ಮಾತ್ರ ಕೃತಕವಲ್ಲ. ಹಾಡುಗಳು ಬಿಡುಗಡೆಯಾದಾಗ ಇಂತಿಷ್ಟು ಮಂದಿ ಇದನ್ನು ವೀಕ್ಷಿಸಿದರು ಎನ್ನುವುದನ್ನು ಹೇಳುವ ಲೆಕ್ಕಾಚಾರವೂ ಕೆಲವೊಮ್ಮೆ ಕೃತಕ. ಸಂಖ್ಯೆಗಳೂ ಬೆಲೆಗೆ ಸಿಗುತ್ತವೆ. ಮಿಲಿಯಗಟ್ಟಲೆ ಸಂಖ್ಯೆಯಲ್ಲಿ ವೀಕ್ಷಕರು ಭೇಟಿ ನೀಡಿದ್ದಾರೆ ಎನ್ನುವುದು ಈಗ ಬಹಿರಂಗ ಗುಟ್ಟು.

ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಅವರ ಹೊಸ ಚಿತ್ರ ‘ಫಸ್ಟ್ ನೈಟ್ ವಿಥ್ ದೆವ್ವ’ ಬೇರೆಯವರ ನಿರ್ದೇಶನಕ್ಕೆ ಕಥೆ, ಚಿತ್ರಕಥೆ ಎಲ್ಲ ಅವರದ್ದೇ. ಮೊನ್ನೆ ಈ ಚಿತ್ರದ ಟೈಲರ್ ಬಿಡುಗಡೆ ಆಯಿತು. ಅದರ ಆರಂಭದಲ್ಲಿನ ವಿಷಯ ಕನ್ನಡ ಚಿತ್ರಗಳ ಪ್ರಚಾರದ ಕುರಿತಂತೆಯೇ ಇದೆ.

No fake promotions, no fake likes, no fake views,

ಯಾವುದೇ ಸುಳ್ಳು ಪ್ರಚಾರದ ಮೂಲಕ ಜನರನ್ನು ಯಾಮಾರಿಸೋ ಕೆಲಸ ಮಾಡಲ್ಲ; ನೀವೆಷ್ಟು ಜನ ನೋಡ್ತೀರೋ ಅಷ್ಟೇ ನಮ್ಮ ಯೋಗ್ಯತೆ, ಅದೇ ನಿಜವಾದ ಆಶೀರ್ವಾದ: ಕನ್ನಡ ಚಿತ್ರರಂಗದ ಉಳಿವಿಗಾಗಿ Fake views, fake build-upಗೆ ಮನ್ನಣೆ ಕೊಡಬೇಡಿ. ಅಣ್ಣಾವ್ರು ಸಹಿತ ಹಿರಿಯ ಕಲಾವಿದರು ಕಟ್ಟಿದ ಚಿತ್ರರಂಗವನ್ನು Fakeviews ಎಂಬ ಅಪಾಯದಿಂದ ಪಾರು ಮಾಡಿ, ಕನ್ನಡ ಚಿತ್ರರಂಗವನ್ನು Fake ರಾಕ್ಷಸರಿಂದ ರಕ್ಷಿಸಿದರು. ಇದು ಈ ದಿನಗಳ ಬಹುತೇಕ ಚಿತ್ರಗಳು ಮಾಡುತ್ತಿವೆ ಎನ್ನಲಾದ ಪ್ರಚಾರತಂತ್ರದ ವಿರುದ್ಧದ ಅವರ ಸಾಲುಗಳು.

ಕನ್ನಡ ಚಿತ್ರರಂಗ90ಕ್ಕೆ ಕಾಲಿಡುವ ವೇಳೆ ವಿತರಕರ ಸಂಖ್ಯೆ ಗಮನಾರ್ಹವಾಗಿ ಇಳಿದಿದೆ, ಒಂಟಿ ಚಿತ್ರಮಂದಿರಗಳ ಸಂಖ್ಯೆಯೂ, ಅದು ಮಲ್ಟಿಪ್ಲೆಕ್ಸ್‌ಗಳ ಕೊಡುಗೆ, ಅಷ್ಟೇ ಅಲ್ಲ, ಚಿತ್ರಮಂದಿರದತ್ತ ಬರುವ ಪ್ರೇಕ್ಷಕರ ಸಂಖ್ಯೆಯೂ ಕೂಡ. ಹಾಗಾಗಿ ಎಲ್ಲ ರೀತಿಯ, ಫೇಕ್, ಒರಿಜಿನಲ್ ವಿಚಾರಗಳೂ ಮುನ್ನೆಲೆಗೆ ಬಂದಿವೆ. ಎರಡು ವರ್ಷಗಳ ಹಿಂದೆ ಬೆಂಗಳೂರು ಚಿತ್ರೋತ್ಸವದ ಉದ್ಘಾಟನಾ ಭಾಷಣದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡದ ಮೊದಲ ಈ ಚಿತ್ರ ಬಿಡುಗಡೆಯ ದಿನವೇ ಮುಖ್ಯಮಂತ್ರಿಗಳು, ಮುಂದೆ, ಮಾರ್ಚ್ 3ರಂದೇ ಮುಂದಿನ ಚಿತ್ರೋತ್ಸವಗಳು ಪ್ರತಿ ವರ್ಷ ಮಾರ್ಚ್ 3ರಂದು ನಡೆಯುವುದಾಗಿ ಹೇಳಿದ್ದರು.

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಚಿತ್ರಗಳು ಈಗ ಪ್ರದರ್ಶನ ಆಗುತಿರುವುದು ಓರಾಯನ್ ಮಾಲ್‌ನಲ್ಲಿ. ಅದು ಖಾಸಗಿ ಚಿತ್ರಮಂದಿರ ಸಂಕೀರ್ಣ. ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಬಾಡಿಗೆ ಕೊಡುವ ಬದಲು, ತನ್ನದೇ ಜಾಗದಲ್ಲಿ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬಹುದು. ಅಲ್ಲಿ ಸಾಕಷ್ಟು ಜಾಗವೂ ಇದೆ. ಸರ್ಕಾರ ಮನಸ್ಸು ಮಾಡಬೇಕು ಅಷ್ಟೇ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ