Mysore
24
overcast clouds

Social Media

ಭಾನುವಾರ, 05 ಜುಲೈ 2026
Light
Dark

ಉಪನಗರ ಯೋಜನೆ ಖಂಡಿತ ಅಭಿವೃದ್ಧಿಯಲ್ಲ

ಆರ್.ಪಿ.ವೆಂಕಟೇಶಮೂರ್ತಿ

ಬೆಂಗಳೂರು ಮತ್ತು ಸುತ್ತಮುತ್ತಲಿನ ದುಃಸ್ಥಿತಿಗೆ ಎಲ್ಲ ರಾಜಕೀಯ ಪಕ್ಷಗಳ ಕೊಡುಗೆ ಇದೆ, ರಾಜಕೀಯ ನಾಯಕರು ದಯಮಾಡಿ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಒಂದು ಸುಂದರವಾದ ಹೆಮ್ಮೆಯ ನಗರ ಎನ್ನಿಸಿಕೊಂಡಿದ್ದ ಬೆಂಗಳೂರು ಹೀಗೇಕೆ ಆಗಿದೆ. ಆ ಇಕ್ಕಟ್ಟು, ಆ ಟ್ರಾಫಿಕ್ಕು, ಆ ಗಟಾರ, ಆ ಕಸ, ಆ ವಾಯುಮಾಲಿನ್ಯ, ಜಲಮಾಲಿನ್ಯ… ಹೀಗೆ ಬೆಂಗಳೂರಿಗರ ಕೊಳಚೆಯನ್ನೆಲ್ಲ ಸುತ್ತಮುತ್ತಲ ಹಳ್ಳಿಗಳ ಜನರು ಅನುಭವಿಸಬೇಕಾಗಿದೆ. ಈಗ ಚರ್ಚೆಯ ಕೇಂದ್ರವಾಗಿರುವ ಬೈರಮಂಗಲವನ್ನೇ ತೆಗೆದುಕೊಳ್ಳಿ ವೃಷಭಾವತಿ ನದಿಯ ಹರಿವಿನಲ್ಲಿ ಕಟ್ಟಿದ ಜಲಾಶಯ ಎಷ್ಟು ಕಲುಷಿತಗೊಂಡಿದೆ?

ಇಂದು ಬೆಂಗಳೂರು ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುವ ನಗರವಾಗಿದೆ. ಕೈಗಾರಿಕೆಗಳು, ಆಸ್ಪತ್ರೆಗಳು, ಶಾಲಾ-ಕಾಲೇಜುಗಳು, ಮನರಂಜನಾ ಕೇಂದ್ರಗಳು, ಐಟಿ-ಬಿಟಿಗಳು, ಎಲ್ಲವನ್ನೂ ಇಲ್ಲಿಯೇ ತಂದು ತುರುಕಿದ್ದರ ಪರಿಣಾಮ ಇದು. ಯಾವುದೇ ಕೇಂದ್ರೀಕರಣ ಯೋಜನೆಯು ನಿಸರ್ಗ ವಿರೋಧಿಯಾದುದು ಎಂಬುದನ್ನು ರಾಜಕೀಯ ನಾಯಕರು ಅರಿಯಬೇಕಿದೆ.

ಬಿಡದಿ ಹೋಬಳಿಯಲ್ಲಿ ಉಪನಗರ ನಿರ್ಮಿಸುವುದರಿಂದ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಆಗುತ್ತದೆಯೇ? ಈ ಗಂಭೀರ ಪ್ರಶ್ನೆಗೆ ಆಡಳಿತಗಾರರಿಂದ ಸ್ಪಷ್ಟ ಉತ್ತರ ಬರುತ್ತಿಲ್ಲ. ರೈತರನ್ನು ಹೊರದಬ್ಬಿ ಅವರಿಗೆ ಯಾವ ಉದ್ಯೋಗ ನೀಡುತ್ತೀರಿ? ಎಷ್ಟೇ ಹಣ ಕೊಟ್ಟರೂ ಜಮೀನು ಬಿಟ್ಟು ಕೊಡುವುದಿಲ್ಲ ಎನ್ನುತ್ತಾರೆಂದರೆ, ರೈತರ ಮಾನಸಿಕ ಸ್ಥಿತಿಯನ್ನು ಡಿ.ಕೆ. ಶಿವಕುಮಾರ್ ಅವರು ಅರ್ಥ ಮಾಡಿಕೊಳ್ಳಬೇಕಿದೆ.

ಜಮೀನು ಇರುವವರು ಮಾತ್ರವಲ್ಲ, ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೮,೦೦೦ ಭೂ ರಹಿತ ಕಾರ್ಮಿಕರಿದ್ದಾರೆ, ಬೇರೆ ಕೌಶಲ ಇಲ್ಲದ ಮಹಿಳೆಯರಿದ್ದಾರೆ. ಅವರಿಗೆಲ್ಲ ಕೃಷಿ ಮತ್ತು ಕೃಷಿಗೆ ಪೂರಕ ಕಸುಬುಗಳೇ ಜೀವನಧಾರವಾಗಿವೆ, ಇವರಿಗೆಲ್ಲ ಉದ್ಯೋಗ ವಸತಿ ನೀಡಲು ಸಾಧ್ಯವೇ? ಇದು ಖಂಡಿತ ಅಭಿವೃದ್ಧಿಯಲ್ಲ;ವಿನಾಶ.

ದೇವನಹಳ್ಳಿ ತಾಲ್ಲೂಕಿನ ಚೆನ್ನರಾಯಪಟ್ಟಣ, ರಾಮನಗರ ಜಿಲ್ಲೆಯ ಬಿಡದಿ, ಹೀಗೆ ಬೆಂಗಳೂರು ಸುತ್ತಮುತ್ತಲ ರೈತರು ಭೂಸ್ವಾಧೀನವನ್ನು ಏಕೆ ವಿರೋಧ ಮಾಡುತ್ತಿದ್ದಾರೆಂದು ಅರ್ಥಮಾಡಿಕೊಳ್ಳಬೇಕಿದೆ. ಹಿಂದೆ ಬೆಂಗಳೂರಿನ ಮೇಲೆ ಒತ್ತಡ ತಗ್ಗಿಸಲೆಂದೇ ಯಲಹಂಕ ಹಾಗೂ ಕೆಂಗೇರಿಯಲ್ಲಿ ಉಪನಗರಗಳನ್ನು ನಿರ್ಮಿಸಲಾಯಿತು. ಇಂತಹ ನೂರಾರು ಬಡಾವಣೆಗಳು ಸೇರಿ ಬೆಂಗಳೂರು ಜನ ಜೀವನದ ಒತ್ತಡ ಹೆಚ್ಚಾಗಿದೆಯೇ ಹೊರತು ಕಡಿಮೆ ಮಾಡಲಿಲ್ಲ. ಬಿಡದಿ ಅಲ್ಲದೆ ಬೆಂಗಳೂರು ಹತ್ತಿರದಲ್ಲಿ ಇನ್ನೊಂದು ಉಪನಗರ ನಿರ್ಮಿಸಲು ಹೊರಟರೆ, ಬೆಂಗಳೂರು ಸಮಸ್ಯೆಗಳು ಇನ್ನಷ್ಟು ಜಟಿಲ ಆಗುತ್ತವೆ ಎಂಬುದನ್ನು ಡಿ.ಕೆ.ಶಿವಕುಮಾರ್ ಅರ್ಥ ಮಾಡಿಕೊಳ್ಳಬೇಕಿದೆ.

ಆಶ್ಚರ್ಯ ಎಂದರೆ ೨೦೨೮ರ ವಿಧಾನಸಭಾ ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಅವಧಿ ಮುಗಿದು ಐದು ವರ್ಷಗಳೇ ಕಳೆಯಿತು. ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲೂ ಚುನಾಯಿತ ಪ್ರತಿನಿಧಿಗಳಿಲ್ಲ. ಜನರಿಗೆ ಹತ್ತಿರವಾಗಿರುವ ಈ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಮಾತನಾಡುತ್ತಿಲ್ಲ. ರಾಜ್ಯದ ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಶಿವಕುಮಾರ್ ಅವರು ಬೆಂಗಳೂರು ನಗರ ಒಂದರ ಚಿಂತೆ ಮಾಡುವುದನ್ನು ಬಿಟ್ಟು ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಮೊದಲು ಚುನಾವಣೆ ನಡೆಸಬೇಕು.

ಒಂದು ಉಪನಗರವನ್ನು ನಿರ್ಮಿಸುವುದು ದೊಡ್ಡ ಸಾಧನೆಯೇನೂ ಅಲ್ಲ, ಗುತ್ತಿಗೆದಾರರು ಸೇರಿ ಇದನ್ನು ಮಾಡಬಲ್ಲರು. ಕಲುಷಿತಗೊಂಡಿರುವ ರಾಜ್ಯದ ಎಲ್ಲ ನದಿಗಳು ಹಾಗೂ ಜಲ ಮೂಲಗಳನ್ನು ಸ್ವಚ್ಛಗೊಳಿಸುವುದು ದೊಡ್ಡ ಸಾಧನೆ, ಬರಡಾಗುತ್ತಿರುವ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದು ದೊಡ್ಡ ಸಾಧನೆ, ರಾಜ್ಯದ ಅರಣ್ಯ ಪ್ರದೇಶವನ್ನು ವಿಸ್ತರಿಸುವುದು ದೊಡ್ಡ ಸಾಧನೆ, ಭ್ರಷ್ಟಗೊಂಡಿರುವ ಸರ್ಕಾರಿ ವ್ಯವಸ್ಥೆಯನ್ನು ಸುಧಾರಿಸುವುದು ದೊಡ್ಡ ಸಾಧನೆ. ಬಿಡದಿ ಉಪನಗರದ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತ್ರ ಮಾತನಾಡುವುದಷ್ಟೇ ಮುಖ್ಯವಲ್ಲ. ಬಿಡದಿ ಟೌನ್‌ಶಿಪ್ ವಿರುದ್ಧ ಹೋರಾಟವನ್ನು ಸ್ಥಳೀಯ ಜನರು ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ನಡೆಸುತ್ತಾ ಬಂದಿದ್ದಾರೆ. ರಾಜ್ಯದ ಅನೇಕ ರೈತ ಸಂಘಟನೆಗಳು ಕಾರ್ಮಿಕ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳು ಈ ಹೋರಾಟವನ್ನು ಬೆಂಬಲಿ ಸುತ್ತಾ ಬಂದಿವೆ. ಹೋರಾಟ ನಿರತ ರೈತರೊಂದಿಗೆ, ಜನಪರ ಸಂಘಟನೆಗಳು ಹಾಗೂ ಪರ್ಯಾಯ ಅಭಿವೃದ್ಧಿ ಮಾರ್ಗಗಳ ಬಗ್ಗೆ ಸ್ಪಷ್ಟ ಚಿಂತನೆಯುಳ್ಳ ಜನರೊಂದಿಗೆ ಮುಖ್ಯಮಂತ್ರಿಗಳು ದುಂಡು ಮೇಜಿನ ಸಭೆ ಏರ್ಪಡಿಸಿ ಸಂವಾದ ನಡೆಸಬೇಕು.

ಈ ಸಮಸ್ಯೆಯನ್ನು ಕುಮಾರಸ್ವಾಮಿ ಮತ್ತು ತಮ್ಮ ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಗಿ ಶಿವಕುಮಾರ್ ಪರಿಗಣಿಸಿದರೆ ತಪ್ಪು ನಿರ್ಧಾರಗಳಾಗುವ ಸಾಧ್ಯತೆ ಇದೆ. ಇಲ್ಲಿ ಯಾರು ಸೋಲುತ್ತಾರೆ ಮತ್ತು ಯಾರು ಗೆಲ್ಲುತ್ತಾರೆ ಎಂದು ಯೋಚಿಸಬಾರದು, ಬಿಡದಿ ಉಪನಗರದ ಪ್ರಶ್ನೆಯ ಮೂಲಕ ರಾಜ್ಯಕ್ಕೆ ಒಂದು ವಿಕೇಂದ್ರೀಕೃತ ಹೊಸ ಅಭಿವೃದ್ಧಿ ಮಾರ್ಗ ರೂಪುಗೊಳ್ಳಲಿದೆ ಎಂಬ ಆಶಯ ರಾಜ್ಯದ ಜನರದ್ದಾಗಿದೆ. ಪರಿಸರ ಸ್ನೇಹಿ ಹಳ್ಳಿಗಳನ್ನು, ಪಟ್ಟಣಗಳನ್ನು,ನಗರಗಳನ್ನು, ಕಟ್ಟುವುದು ಹೇಗೆ ಎಂಬ ಚಿಂತನೆ ಇಲ್ಲಿಂದಲೇ ಆರಂಭಗೊಳ್ಳಲಿದೆ. ಇದು ಕಾಲದ ಕರೆ, ಜಾಗತಿಕ ತಾಪಮಾನ ಹೆಚ್ಚಿ ಹವಾಮಾನ ಅಲ್ಲೋಲ ಕಲ್ಲೋಲ ಆಗುತ್ತಿರುವ ಈ ಹೊತ್ತಿನಲ್ಲಾದರೂ ನಾವು ಪರಿಸರ ಕೇಂದ್ರಿತ ಚಿಂತನೆಗಳತ್ತ ಹೊರಡುವುದು ಅನಿವಾರ್ಯವಾಗಿದೆ. ಪರಿಸರಕ್ಕೆ ಪೂರಕ ಶಿಕ್ಷಣ, ಕೃಷಿ, ಕೈಗಾರಿಕೆ ಅಭಿವೃದ್ಧಿ ಮಾರ್ಗಗಳತ್ತ ಹೆಜ್ಜೆ ಹಾಕುವುದಾದರೆ ಶಿವಕುಮಾರ್ ಅವರು ನಿಜವಾಗಿಯೂ ಜನ ಮೆಚ್ಚುವ ಮುಖ್ಯಮಂತ್ರಿ ಆಗಲಿದ್ದಾರೆ.

” ಜಮೀನು ಇರುವವರು ಮಾತ್ರವಲ್ಲ, ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೮,೦೦೦ ಭೂ ರಹಿತ ಕಾರ್ಮಿಕರಿದ್ದಾರೆ, ಬೇರೆ ಕೌಶಲ ಇಲ್ಲದ ಮಹಿಳೆಯರಿದ್ದಾರೆ. ಅವರಿಗೆಲ್ಲ ಕೃಷಿ ಮತ್ತು ಕೃಷಿಗೆ ಪೂರಕ ಕಸುಬುಗಳೇ ಜೀವನಧಾರವಾಗಿವೆ, ಇವರಿಗೆಲ್ಲ ಉದ್ಯೋಗ ವಸತಿ ನೀಡಲು ಸಾಧ್ಯವೇ?”

 

 

Tags:
error: Content is protected !!