Mysore
26
overcast clouds
Light
Dark

ಶಾಲಿನಿಯವರ ಪುಟ್ಟ ಆಶಯಗಳು ಹೆಮ್ಮರವಾದ ಬಗೆ

·ಶ್ರೀವಿದ್ಯಾ ಕಾಮತ್

ಆರ್ಥಿಕ ಸ್ವಾವಲಂಬನೆ ಅಸಾಧ್ಯವಾದುದ್ದೇನೋ ಒಂದನ್ನು ಸಾಧಿಸಬೇಕೆಂಬ ಆಸೆಯೊಂದನ್ನು ಮಹಿಳೆಯರಲ್ಲಿ ಮೂಡಿಸಿ ಸಣ್ಣ ಪುಟ್ಟ ಕುಶಲತೆಗಳಿಂದಲೇ ಸ್ವಾಭಿಮಾನದ ಹಾದಿ ಹಿಡಿಯುಲು ಪ್ರೇರಣೆ ನೀಡುತ್ತದೆ ಎಂಬುದಕ್ಕೆ ಶಾಲಿನಿ ಎಂಬವರು ಸಾಕ್ಷಿಯಾಗಿ ನಿಂತಿದ್ದಾರೆ.

ತಿ.ನರಸೀಪುರ ತಾಲ್ಲೂಕಿನ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಶಾಲಿನಿ ಚಿಕ್ಕ ವಯಸ್ಸಿನಿಂದಲೂ ತಮ್ಮ ತಂದೆ ಮನೆ ನಡೆಸಲು ಪಡುತ್ತಿದ್ದ ಕಷ್ಟಗಳನ್ನು ನೋಡುತ್ತಾ ಬೆಳೆದವರು. ಅವರ ತಂದೆಯೂ ಮಗಳು ಶಾಲಿನಿಯನ್ನು ಗಂಡು ಮಗನಂತೆ ಬೆಳೆಸಿ ತನ್ನ ಮಗಳು ಮುಂದೆ ಬರಬೇಕು ಎಂಬ ಹಂಬಲದಿಂದ ಮಗಳ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟರು.

ಶಾಲಿನಿ ತಮ್ಮ ಚಿಕ್ಕ ವಯಸ್ಸಿನಿಂದಲೇ ಸ್ವಯಂ ಉದ್ಯಮವೊಂದರ ಒಡತಿಯಾಗಿ, ಸಾಧನೆ ಮಾಡಿ ತಂದೆಗೆ ಹೆಮ್ಮೆ ತರಬೇಕು ಎಂಬ ಕನಸು ಹೊತ್ತಿದ್ದರು. ತಂದೆಯ ಆಸೆಯಂತೆ, ಓದು ಬರಹದಲ್ಲಿಯೂ ಮುಂದಿದ್ದ ಶಾಲಿನಿ, ಮೈಸೂರಿನಲ್ಲಿ ಬಿ.ಕಾಂ ಪದವಿ ಮುಗಿಸಿ, ಖಾಸಗಿ ಕಂಪೆನಿಯೊಂದರಲ್ಲಿ ಕೆಲ ವರ್ಷಗಳ ಕಾಲ ಕೆಲಸ ಮಾಡಿದ್ದರು. ಕಾರ್ಪೊರೇಟ್ ಸಂಸ್ಥೆಗಳ ವಾತಾವರಣ ಹಿಡಿಸಿದ್ದರಿಂದ, ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ವಾರ್ಡನ್ ಆಗಿ ಕೆಲಸಕ್ಕೆ ಸೇರುತ್ತಾರೆ. ಹಲವು ವರ್ಷಗಳ ಕಾಲ ಇಂತಹ ಮಕ್ಕಳ ಸೇವೆ ಮಾಡುವಾಗ, ಈ ಮಕ್ಕಳ ಮನವೊಲಿಸಲು ಬಣ್ಣಗಳ ಆಸರೆ ಪಡೆಯುತ್ತಿದ್ದ ಶಾಲಿನಿಯವರಿಗೆ, ಬಣ್ಣಗಳ ಕರಕುಶಲ ವಸ್ತುಗಳನ್ನು ಮಾಡತೊಡಗುತ್ತಾರೆ.

ಹೀಗೆ ಬುದ್ಧಿಮಾಂಧ್ಯ ಹೆಣ್ಣು ಮಗುವೊಂದರ ಹುಟ್ಟಿದ ಹಬ್ಬಕ್ಕಾಗಿ ತಮ್ಮ ಕೈಯಾರೆ ತಯಾರಿಸಿದ ಸುಂದರವಾದ ಅಲಂಕಾರಿಕ ಹೇರ್ ಬ್ಯಾಂಡ್ ಒಂದನ್ನು ಆ ಮಗುವಿಗೆ ಉಡುಗೊರೆಯಾಗಿ ನೀಡುತ್ತಾರೆ. ಈ ವೇಳೆ ಆ ಮಗುವಿನ ಮುಖದಲ್ಲಿ ಕಂಡ ಮಂದಹಾಸಕ್ಕೆ ಮಾರುಹೋದ ಶಾಲಿನಿ, ಕರಕುಶಲ ವಸ್ತುಗಳ ತಯಾರಿಕೆಯನ್ನೇ ಒಂದು ಉದ್ದಿಮೆಯಾಗಿಸುವ ಬಗ್ಗೆ ಯೋಚಿಸಿದರು.

ಶಾಲಿನಿಯವರ ಆಸೆಗೆ ಆಸರೆಯಾಗಿ ನಿಂತವರು ಅವರ ಪತಿ, ಶಾಲಿನಿ ಕರಕುಶಲ ವಸ್ತುಗಳ ತಯಾರಿಕೆಗೆ ಬೇಕಾದ ಮಾರ್ಗದರ್ಶನ, ಮಾರುಕಟ್ಟೆಯಲ್ಲಿ ವ್ಯವಹರಿಸಬೇಕಾದ ವಿಧಾನಗಳ ಬಗ್ಗೆ ಮೈಸೂರಿನಲ್ಲಿ ಸ್ವಯಂ ಉದ್ಯೋಗ ಕಾರ್ಯಾಗಾರವೊಂದರಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆದರು. ಈಗ, ಇಂತಹ ಸುಂದರ ಉತ್ಪನ್ನದ ಜೊತೆ, ಸುಗಂಧಭರಿತ ಮೇಣದ ಬತ್ತಿಗಳನ್ನೂ ತಯಾರು ಮಾಡುವುದನ್ನು ಕಲಿತ ಅವರು ‘ಫ್ಲೋರೋ ಕಾರ್ವೆಸ್್ರ’ ಎಂಬ ಪ್ರೊಪ್ರೈಟರಿ ಕಂಪೆನಿಯೊಂದನ್ನು ಆರಂಭಿಸಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಮೈಸೂರಿನಲ್ಲಿಯೇ ತಮ್ಮ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ. ಅಲಂಕಾರಕ್ಕೆ ಹೆಚ್ಚು ಒತ್ತು ನೀಡುವ ಈಗಿನ ಕಾಲದಲ್ಲಿ ಇಂತಹ ಉತ್ಪನ್ನಗಳಿಗೆ ಬಹಳ ದೊಡ್ಡ ಮಾರುಕಟ್ಟೆಯೇ ಇದೆ. 50 ರೂಪಾಯಿಗಳಿಂದ ಆರಂಭವಾಗಿ 2,000 ರೂಪಾಯಿವರೆಗಿನ ರೇಷ್ಮೆಯ ಹೈರ್‌ ಬ್ಯಾಂಡ್‌ಗಳೂ ಸಹ ಶಾಲಿನಿಯವರ ಕೈಗಳ ಜಾದೂವಿನಿಂದ ತಯಾರಾಗುತ್ತಿವೆ.

ಅಲ್ಲದೆ ಆಂದೋಲನ’ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ‘ಮೇಣದ ಬತ್ತಿಗಳ ಉದ್ದಿಮೆಯ ಬಗೆಗಿನ ಲೇಖನವನ್ನು ಓದಿದ ಬಳಿಕ ಶಾಲಿನಿ ಮೇಣದ ಬತ್ತಿಗಳನ್ನು ಮಾಡುವುದನ್ನು ಕಲಿತು ಈಗ ತಮ್ಮದೇ ಶೈಲಿಯಲ್ಲಿ 150ಕ್ಕೂ ಹೆಚ್ಚು ವಿವಿಧ ರೀತಿಯ ಮೇಣದಬತ್ತಿಗಳನ್ನು ತಯಾರು ಮಾಡುವ ಉದ್ಯಮವನ್ನು ಮುನ್ನಡೆಸುತ್ತಿರುವುದು ಮತ್ತೊಂದು ವಿಶೇಷ.

ಶಾಲಿನಿಯವರು ಈಗ ತಮ್ಮ ಕೆಲಸದಿಂದ ಬರುತ್ತಿದ್ದ ಸಂಬಳಕ್ಕಿಂತಲೂ ಉದ್ಯಮದಲ್ಲಿ ಹೆಚ್ಚು ದುಡಿಯುತ್ತಿದ್ದಾರೆ. ಅಲ್ಲದೆ ತಮ್ಮ ಇಬ್ಬರು ಪುಟ್ಟ ಮಕ್ಕಳ ಲಾಲನೆ, ಪಾಲನೆಯನ್ನೂ ಮಾಡುತ್ತಾ ಅವರ ವಿದ್ಯಾಭ್ಯಾಸಕ್ಕೂ ಹೆಚ್ಚು ಒತ್ತು ನೀಡಿದ್ದಾರೆ.

ಆರ್ಥಿಕ ಸ್ವಾವಲಂಬನೆಯಿಂದಾಗಿ ಮಹಿಳೆ ಹೆಚ್ಚು ಸುರಕ್ಷಿತ ಭಾವನೆ ಹೊಂದುತ್ತಾಳೆ, ಕುಟುಂಬದ ಆಧಾರ ಸ್ಥಂಭವಾಗಿ ನಿಲ್ಲುತ್ತಾಳೆ ಎಂಬುದಕ್ಕೆ ಶಾಲಿನಿಯವರಿಗಿಂತ ಮತ್ತೊಂದು ಸಾಕ್ಷಿ ಬೇಕಿಲ್ಲ.

ಮಹಿಳೆಯರು ಹೆಚ್ಚು ಆರ್ಥಿಕವಾಗಿ ಸ್ವಾವಲಂಬಿಗಳಾದಷ್ಟೂ ಸಮಾಜ ಪ್ರಗತಿಪರವಾಗಿರುತ್ತದೆ, ಆರೋಗ್ಯಕರ, ಸುರಕ್ಷಿತವಾಗಿರುತ್ತದೆ ಮತ್ತು ತಾರತಮ್ಯ ಮುಕ್ತವಾಗುತ್ತದೆ.

ಆರ್ಥಿಕವಾಗಿ ಸ್ವಾವಲಂಬಿಯಾದ ಮಹಿಳೆ ಭವಿಷ್ಯದ ಪೀಳಿಗೆಗೆ ಮಾದರಿಯಾಗುತ್ತಾಳೆ ಜತೆಗೆ ಸಮಾಜದಲ್ಲಿ ಆಳವಾಗಿ ಬೇರೂರಿರುವ ಲಿಂಗ ತಾರತಮ್ಯವನ್ನು ನಿವಾರಿಸಲು ಸಹಾಯ ಮಾಡುತ್ತಾಳೆ.
(srividya.sahitya@gmail.com)

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ