ಭವಿಷ್ಯದ ಗುರಿಸಾಧನೆಗಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೆ ನಿರ್ಧಾರ
ಕಳೆದ ವಾರ ಬಿಜೆಪಿ-ಜಾ.ದಳ ಪಾಳೆಯಗಳಲ್ಲಿ ದೊಡ್ಡ ಮಟ್ಟದ ಸಂಚಲನ ಕಂಡುಬಂದಿತು.
ಅಂದ ಹಾಗೆ ಈ ಸಂಚಲನದಿಂದ ಬಿಜೆಪಿ-ಜಾ.ದಳ ನಡುವಣ ಮೈತ್ರಿಗೆ ಸಂಪೂರ್ಣವಾಗಿ ಬ್ರೇಕ್ ಬೀಳುತ್ತದೆ ಅಂತಲ್ಲ. ಆದರೆ ಮೈತ್ರಿ ಎಂಬುದು ಭವಿಷ್ಯದಲ್ಲಿ ತಮ್ಮ ಗುರಿಸಾಧನೆಗೆ ಅಡ್ಡಿಯಾಗಬಾರದು ಎಂಬುದು ಉಭಯ ಪಕ್ಷಗಳ ವರಿಷ್ಠರಲ್ಲಿರುವುದು ಮಾತ್ರ ನಿಶ್ಚಿತ. ಹೀಗಾಗಿಯೇ ಕಳೆದ ವಾರ ನಡೆದ ಪಕ್ಷದ ಸಭೆಯೊಂದರಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಏಕಾಂಗಿಯಾಗಿ ಬಹುಮತ ಗಳಿಸಬೇಕು ಎಂದರು.
ಯಾವಾಗ ಅವರು ಈ ಮಾತು ಹೇಳಿದರೋ ಆಗ ಜಾ.ದಳ ವರಿಷ್ಠರಾದ ಹೆಚ್.ಡಿ.ದೇವೇಗೌಡ ಅವರು: ಬಿಜೆಪಿ-ಜಾ.ದಳ ನಡುವಣ ಮೈತ್ರಿ ವಿಧಾನಸಭೆ-ಲೋಕಸಭೆ ಚುನಾವಣೆಗಳಲ್ಲಿ ಮುಂದುವರಿಯುತ್ತದೆ.ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಇಲ್ಲ ಎಂದರು.
ಅಂದ ಹಾಗೆ ಇಲ್ಲಿ ವಿಜಯೇಂದ್ರ ಅವರ ಮಾತು ಮತ್ತು ದೇವೇಗೌಡರು ಆಡಿದ ಮಾತು ವಿಭಿನ್ನ ದೃಷ್ಟಿಕೋನಗಳನ್ನು ಪ್ರತಿಪಾದಿಸುತ್ತಿವೆ. ವಾಸ್ತವವಾಗಿ ವಿಜಯೇಂದ್ರ ಅವರಿಗೆ ಜಾ.ದಳ ಜತೆಗಿನ ಮೈತ್ರಿಯ ಬಗ್ಗೆ ಒಲವಿಲ್ಲ. ಕಾರಣ ಅಧಿಕಾರ ರಾಜಕಾರಣ ಇವತ್ತು ಕಾಂಗ್ರೆಸ್ ಪಕ್ಷವನ್ನು ಗದ್ದುಗೆಯ ಮೇಲೆ ಕೂರಿಸಿರಬಹುದು.ಆದರೆ ಮುಂದಿನ ವಿಧಾನಸಭೆ ಚುನಾವಣೆಯ ಹೊತ್ತಿಗೆ ಈ ಚಿತ್ರ ಬದಲಾಗಿರುತ್ತದೆ. ಅರ್ಥಾತ್, ಕಾಂಗ್ರೆಸ್ ಪಕ್ಷದ ಜಾಗದಲ್ಲಿ ಬಿಜೆಪಿ ಬಂದು ನಿಲ್ಲುತ್ತದೆ ಎಂಬುದು ವಿಜಯೇಂದ್ರ ಅವರ ವಿಶ್ವಾಸ.
ಎಷ್ಟೇ ಆದರೂ ೨೦೦೮ ಮತ್ತು ೨೦೧೮ರ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷ ಅನುಕ್ರಮವಾಗಿ ೧೧೦ ಮತ್ತು ೧೦೪ ಕ್ಷೇತ್ರಗಳಲ್ಲಿ ಗೆಲುವು ಗಳಿಸಿತ್ತು. ಅಂದ ಹಾಗೆ ಆ ಎರಡು ಚುನಾವಣೆಗಳಿಗೆ ಹೋಲಿಸಿದರೆ ಈಗಿನ ಪರಿಸ್ಥಿತಿ ಬೇರೆ. ಏಕೆಂದರೆ ಆ ದಿನಗಳಿಗೆ ಹೋಲಿಸಿದರೆ ಈ ದಿನಗಳಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಬಲಿಷ್ಠವಾಗಿದೆ. ಎರಡನೆಯದಾಗಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಶಕ್ತಿ ಎಷ್ಟು ಚೆನ್ನಾಗಿದೆ ಎಂದರೆ ಪ್ರತಿಪಕ್ಷ ಕಾಂಗ್ರೆಸ್ ನಿರಾಸೆಯ ಕೂಪಕ್ಕೆ ಬಿದ್ದಿದೆ. ಇಂತಹ ಸಂದರ್ಭದಲ್ಲಿ ಜಾ.ದಳದ ಜತೆ ಸೇರಿ ವಿಧಾನಸಭೆ ಚುನಾವಣೆಗೆ ಹೋಗಿ ಗೆದ್ದರೆ ಅಽಕಾರವನ್ನು ಆ ಪಕ್ಷದ ಜತೆ ಹಂಚಿಕೊಳ್ಳಬೇಕು.
ಗಮನಿಸಬೇಕಾದ ಸಂಗತಿ ಎಂದರೆ ಚುನಾವಣೆಗೂ ಮುನ್ನವೇ ಜಾ.ದಳ ಎಷ್ಟು ಆತ್ಮವಿಶ್ವಾಸದಲ್ಲಿದೆ ಎಂದರೆ ಸ್ವತಃ ಜಾ.ದಳ ವರಿಷ್ಠರಾದ ದೇವೇಗೌಡರು ಇತ್ತೀಚೆಗೆ ಉತ್ತರದಲ್ಲಿ ನಿತೀಶ್ ಕುಮಾರ್, ದಕ್ಷಿಣದಲ್ಲಿ ಕುಮಾರಸ್ವಾಮಿ ಎಂದು ಘೋಷಿಸಿದ್ದರು. ಅರ್ಥಾತ್, ಬಿಹಾರದ ರಾಜಕಾರಣದಂತೆ ಕರ್ನಾಟಕದಲ್ಲೂ ಬಿಜೆಪಿಯ ಮಿತ್ರ ಪಕ್ಷ ಜಾ.ದಳ ಗೆ ಮುಖ್ಯಮಂತ್ರಿ ಪಟ್ಟ ಒಲಿಯುತ್ತದೆ ಎಂದು ತಾನೇ? ಹೀಗೆ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಜಾ.ದಳಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗುವುದು ನಿಶ್ಚಿತ ಎಂದಾದರೆ ಕರ್ನಾಟಕದಲ್ಲಿ ಬಿಜೆಪಿಯನ್ನು ಸಂಘಟಿಸುತ್ತಿರುವ ತಮ್ಮ ಗತಿ ಏನಾಗಬೇಕು? ಎಂಬುದು ವಿಜಯೇಂದ್ರ ಅವರ ಯೋಚನೆ.
ಇದನ್ನು ಓದಿ: ಆಟಿಕೆ ಮಾರಾಟಗಾರರ ಸುರಕ್ಷತೆಗೆ ಸರ್ಕಾರಗಳು ಮುಂದಾಗಲಿ
ಇದೇ ರೀತಿ ಕಳೆದ ಕೆಲ ದಿನಗಳಲ್ಲಿ ನಡೆದ ಬೆಳವಣಿಗೆ ವಿಜಯೇಂದ್ರ ಅವರ ಮನಸ್ಸಿಗೆ ಹಿತಕರವಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಜಾ.ದಳ ನಾಯಕ,ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕದ ರಾಜಕಾರಣದ ಮೇಲೆ ಗಮನ ಕೇಂದ್ರೀಕರಿಸಿದರಲ್ಲ. ಇದಾದ ನಂತರ ರಾಜ್ಯ ಬಿಜೆಪಿಯ ಭಿನ್ನಮತೀಯರು ಅವರ ಕಡೆ ಗಮನ ಹರಿಸಿದ್ದಾರೆ. ಹೀಗೆ ತಮ್ಮನ್ನು ವಿರೋಧಿಸುವವರು ಕುಮಾರ ಸ್ವಾಮಿಯವರನ್ನು ಹೆಚ್ಚಾಗಿ ಅವಲಂಬಿಸುವುದು ತಮಗೆ ಸೇಫ್ ಅಲ್ಲ ಎಂಬುದು ವಿಜಯೇಂದ್ರ ಅವರ ಲೆಕ್ಕಾಚಾರ. ಗಮನಿಸಬೇಕಾದ ಸಂಗತಿ ಎಂದರೆ ಕಳೆದ ವಾರ ವಾಜಪೇಯಿ ಸ್ಮರಣೆ ಕಾರ್ಯಕ್ರಮ ನಡೆಸಿದ ಬಿಜೆಪಿಯ ಕೆಲ ನಾಯಕರು ಈ ಕಾರ್ಯಕ್ರಮಕ್ಕೆ ಎಚ್.ಡಿ.ಕುಮಾರಸ್ವಾಮಿ ಮತ್ತು ಬೊಮ್ಮಾಯಿ ಅವರನ್ನು ಆಹ್ವಾನಿಸಿದರೇ ಹೊರತು ತಮ್ಮನ್ನಲ್ಲ ಎಂಬುದು ವಿಜಯೇಂದ್ರ ಅವರಿಗೆ ಎಚ್ಚರಿಕೆಯ ಘಂಟೆಯಂತೆ ಕೇಳಿಸಿದೆ.
ಇಂತಹ ಎಲ್ಲ ಕಾರಣಗಳಿಗಾಗಿ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೇ ಸ್ವಯಂ ಬಲದ ಮೇಲೆ ೧೧೪ ಕ್ಷೇತ್ರಗಳಲ್ಲಿ ಗೆಲುವು ಗಳಿಸುವಂತಾಗಬೇಕು ಎಂದು ಲೆಕ್ಕ ಹಾಕುತ್ತಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಬಿಜೆಪಿ ನೂರು ಸೀಟುಗಳನ್ನು ಗೆದ್ದು, ಜಾ.ದಳ ಮೂವತ್ತೆ ದೋ, ನಲವತ್ತು ಕ್ಷೇತ್ರಗಳಲ್ಲಿ ಗೆದ್ದರೂ ಮುಖ್ಯಮಂತ್ರಿ ಸ್ಥಾನ ತನಗೆ ಬೇಕು ಎನ್ನುತ್ತದೆ. ಈ ವಿಷಯ ಬಂದಾಗ ಬಿಜೆಪಿ ವರಿಷ್ಠರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಲೆಕ್ಕಾಚಾರ ಜಾ.ದಳಕ್ಕೆ ಪೂರಕವಾಗಿರುತ್ತದೆ. ಅರ್ಥಾತ್, ಭವಿಷ್ಯದಲ್ಲಿ ಒಕ್ಕಲಿಗ ಮತ ಬ್ಯಾಂಕ್ ಬಿಜೆಪಿಯ ಜತೆ ಸಾಲಿಡ್ಡಾಗಿ ನಿಲ್ಲಬೇಕು ಎಂದರೆ ಅದಕ್ಕೆ ಅಪ್ಯಾಯಮಾನವಾಗಿರುವ ಜಾ.ದಳ ಪಕ್ಷಕ್ಕೆ ತುರ್ತು ಆದ್ಯತೆ ನೀಡಬೇಕು ಎಂಬುದು ಅವರ ಯೋಚನೆ.
ಹೀಗಾಗಿ ಚುನಾವಣೆಯಲ್ಲಿ ಜಾ.ದಳ ಕಡಿಮೆ ಸೀಟು ಗೆದ್ದು, ಬಿಜೆಪಿ ಹೆಚ್ಚು ಸೀಟು ಗೆದ್ದರೂ ಜಾ.ದಳ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ತಯಾರಾಗುತ್ತಾರೆ. ಆದರೆ ಅದು ಸಾಧ್ಯವಾಗಬಾರದು ಎಂದರೆ ಬಿಜೆಪಿಯೇ ೧೧೪ರ ಮ್ಯಾಜಿಕ್ ನಂಬರ್ ಅನ್ನು ತಲುಪುವಂತಾಗಬೇಕು. ಹಾಗಾದಾಗ ಸಹಜವಾಗಿಯೇ ಬಿಜೆಪಿ ವರಿಷ್ಠರು ವಿವಶರಾಗುತ್ತಾರೆ. ನಾವೇ ಏಕಾಂಗಿಯಾಗಿ ಬಹುಮತ ಗಳಿಸಿದ್ದೇವೆ ಎಂದರೆ ನಮ್ಮ ಪಕ್ಷದವರೇ ಮುಖ್ಯಮಂತ್ರಿಯಾಗಲಿ ಎಂಬ ತೀರ್ಮಾನಕ್ಕೆ ಬರುತ್ತಾರೆ. ಅದೇ ರೀತಿ ಜಾ.ದಳ ಕೂಡ ಮುಖ್ಯಮಂತ್ರಿ ಪಟ್ಟ ನಮಗೆ ಬೇಕು ಎಂದು ಅಧಿಕಾರಯುತವಾಗಿ ಹೇಳುವುದು ಕಷ್ಟವಾಗುತ್ತದೆ ಎಂಬುದು ವಿಜಯೇಂದ್ರ ಅವರ ಯೋಚನೆ.
ಹೀಗಾಗಿಯೇ ಅವರು ಇತ್ತೀಚೆಗೆ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಸ್ವಪಕ್ಷೀಯರನ್ನು ಅಭಿನಂದಿಸುವಾಗ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಗಳಿಸಬೇಕು ಅಂತ ಹೇಳಿದ್ದು. ಯಾವಾಗ ಅವರು ಈ ಮಾತು ಹೇಳಿದರೋ ಆಗ ಜಾ.ದಳ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಕ್ಷಣ ಎಚ್ಚೆತ್ತು ಕೊಂಡರು. ಅಂದರೆ ವಿಜಯೇಂದ್ರ ಅವರ ಮಾತುಗಳ ಹಿಂದಿದ್ದ ಧ್ವನಿ ಅವರಿಗೆ ಅರ್ಥವಾಯಿತು. ಹೀಗಾಗಿಯೇ ಅವರು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ- ಜಾ.ದಳ ನಡುವೆ ಮೈತ್ರಿ ಇಲ್ಲ ಅಂತ ಹೇಳಿದ್ದು. ಅವರ ಈ ಹೇಳಿಕೆಯ ಹಿಂದೆ ಒಂದು ಎಚ್ಚರಿಕೆ ಇರುವುದೂ ನಿಜ. ಅದೆಂದರೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮೈತ್ರಿ ಸಾಧಿಸಿದರೆ ಪಕ್ಷದ ನೆಲೆ ದುರ್ಬಲವಾಗುತ್ತದೆ. ಹೀಗೆ ನೆಲೆ ದುರ್ಬಲವಾದರೆ ವಿಧಾನಸಭೆ ಚುನಾವಣೆಯ ಹೊತ್ತಿಗೆ ಪಕ್ಷದ ಸಾಧನೆ ಕುಸಿಯುತ್ತದೆ.
ಹೀಗೆ ಪಕ್ಷದ ಸಾಧನೆ ಕುಸಿದು, ಬಿಜೆಪಿ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಗಳಿಸಿದರೆ, ಅದರಲ್ಲೂ ಸ್ವಯಂಬಲದ ಮೇಲೆ ೧೧೪ ಕ್ಷೇತ್ರಗಳಲ್ಲಿ ಗೆಲುವು ಗಳಿಸಿದರೆ ಭವಿಷ್ಯದಲ್ಲಿ ಬಿಜೆಪಿಯ ಸ್ವಾಮಿತ್ವವನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂಬುದು ದೇವೇಗೌಡರ ಯೋಚನೆ. ಪರಿಣಾಮ ಜಾ.ದಳ-ಬಿಜೆಪಿ ಮೈತ್ರಿ ವಿಧಾನಸಭೆ,ಲೋಕಸಭಾ ಚುನಾವಣೆಗಳಿಗೆ ಸೀಮಿತ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಲ್ಲ ಎಂದವರು ಸ್ಪಷ್ಟವಾಗಿ ಹೇಳಿದರು. ಪರಿಣಾಮ ಬಿಜೆಪಿ ಮತ್ತು ಜಾ.ದಳ ಪಾಳೆಯಗಳಲ್ಲಿ ಸಂಚಲನ ಶುರುವಾಗಿದೆ. ಮುಂದೇನು ಅಂತ ಕಾದು ನೋಡಬೇಕು.
” ಅಧಿಕಾರ ರಾಜಕಾರಣ ಇವತ್ತು ಕಾಂಗ್ರೆಸ್ ಪಕ್ಷವನ್ನು ಗದ್ದುಗೆಯ ಮೇಲೆ ಕೂರಿಸಿರಬಹುದು.ಆದರೆ ಮುಂದಿನ ವಿಧಾನಸಭೆ ಚುನಾವಣೆಯ ಹೊತ್ತಿಗೆ ಈ ಚಿತ್ರ ಬದಲಾಗಿರುತ್ತದೆ. ಅರ್ಥಾತ್, ಕಾಂಗ್ರೆಸ್ ಪಕ್ಷದ ಜಾಗದಲ್ಲಿ ಬಿಜೆಪಿ ಬಂದು ನಿಲ್ಲುತ್ತದೆ ಎಂಬುದು ವಿಜಯೇಂದ್ರ ಅವರ ವಿಶ್ವಾಸ”
-ಬೆಂಗಳೂರು ಡೈರಿ
ಆರ್.ಟಿ.ವಿಠ್ಠಲಮೂರ್ತಿ





