ವಿಶ್ವ ಹವಾಮಾನ ಸಂಸ್ಥೆಯು ಇತ್ತೀಚೆಗೆ ಬಿಡುಗಡೆಗೊಳಿಸಿರುವ ವರದಿಯಲ್ಲಿ ೨೦೨೫- ೨೦೨೯ರ ಮಧ್ಯೆ ಜಾಗತಿಕವಾಗಿ ಕೈಗಾರಿಕಾ ಪೂರ್ವ ದಿನಗಳಲ್ಲಿದ್ದ ತಾಪಮಾನಕ್ಕಿಂತ ಸುಮಾರು ೨ ಡಿಗ್ರಿ ಹೆಚ್ಚಾಗಲಿದೆ ಹಾಗೂ ಈ ೫ ವರ್ಷಗಳಲ್ಲಿ ಒಂದೆರಡು ವರ್ಷ ಹೆಚ್ಚಿನ ತೀವ್ರತೆಯಿಂದ ಕೂಡಿರಲಿದ್ದು, ಭೀಕರ ಬರದ ಛಾಯೆ ಕಾಡುವ ಪ್ರಮಾಣ ಶೇ.೮೦ ರಷ್ಟು ಇರಲಿದೆ ಎಂದು ವರದಿ ಮಾಡಿದೆ.
ಮತ್ತೊಂದು ಕಡೆ ವಿಶ್ವ ಆರೋಗ್ಯ ಸಂಸ್ಥೆಯು ದಿನೇ ದಿನೇ ಏರುತ್ತಿರುವ ತಾಪಮಾನದಿಂದ ಹಾಗೂ ಹವಾಮಾನದಲ್ಲಾಗುತ್ತಿರುವ ಬದಲಾವಣೆಯಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ ಹಾಗೂ ಪ್ರಪಂಚದಾದ್ಯಂತ ಸುಮಾರು ೨೦೦ ಕೋಟಿ ಜನರಿಗೆ ಶುದ್ಧವಾದ ಕುಡಿಯುವ ನೀರು ಸಿಗುತ್ತಿಲ್ಲ ಮತ್ತು ಸುಮಾರು ೬೦ ಕೋಟಿ ಜನರು ಆಹಾರದಿಂದ ಹರಡುವ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ತಿಳಿಸುತ್ತದೆ. ಬಹಳ ಮುಖ್ಯವಾಗಿ ೫ ವರ್ಷದೊಳಗಿನ ಮಕ್ಕಳು ಆಹಾರದಿಂದ ಹರಡುವ ಕಾಯಿಲೆಗಳಿಂದ ಸಾವಿಗೀಡಾಗುವ ಪ್ರಮಾಣವು ಶೇ.೩೦ ರಷ್ಟು ಹೆಚ್ಚಾಗಿದೆಎನ್ನುವ ವರದಿಗಳು ಆತಂಕಕ್ಕೆ ಎಡೆಮಾಡಿಕೊಡುತ್ತಿವೆ.
ಇದನ್ನು ಓದಿ;ಮೈಸೂರು ದಸರಾ | ಅಧಿಕೃತ ಜಾಲತಾಣ ಅನಾವರಣ
ಇನ್ನು ನಾವು ಕಂಡಂತೆ ಭೀಕರವಾದ ಬರ, ಶಾಖದ ಅಲೆಗಳು, ಕಾಡ್ಗಿಚ್ಚುಗಳು, ಬಿರುಗಾಳಿ, ಪ್ರವಾಹದಂತಹ ಹವಾಮಾನ ವೈಪರೀತ್ಯಗಳು ಹೆಚ್ಚಾಗುತ್ತಿವೆ. ಇದರಿಂದ ಬಡ ಜನರು ತಮ್ಮ ಆರೋಗ್ಯ, ಭದ್ರತೆ ಮತ್ತು ಆದಾಯವನ್ನು ಕಳೆದುಕೊಳ್ಳುತ್ತಿದ್ದಾರೆ. ಕೃಷಿಯೂ ಇದರಿಂದ ಹೊರತಾಗಿಲ್ಲ. ೨೦೨೪ರಲ್ಲಿ ಕರ್ನಾಟಕದ ಅರ್ಧದಷ್ಟು ಪ್ರದೇಶದಲ್ಲಿ ಮಳೆ ಆಗದೆ ಬೆಳೆ ನಷ್ಟ ಆಗಿದ್ದರೆ, ಇನ್ನುಳಿದ ಅರ್ಧದಷ್ಟು ಪ್ರದೇಶದಲ್ಲಿ ಅತಿಯಾದ ಮಳೆಯಿಂದ ಬೆಳೆ ನಷ್ಟ ಆಗಿರುವ ದುರ್ಘಟನೆ ಮರೆಯಾಗುವ ಮುಂಚೆಯೇ ಇದೇ ೨೦೨೫ರಲ್ಲಿ ಕರ್ನಾಟಕದ ಅರ್ಧದಷ್ಟು ಪ್ರದೇಶವು ಪ್ರವಾಹಗಳಲ್ಲಿ ಮುಳುಗಿದೆ.
ಇದರ ಮಧ್ಯೆ ಐಪಿಸಿಸಿ ಪ್ಯಾನಲ್ರವರು ೨೦೨೪ರನ್ನು ಅತಿ ಹೆಚ್ಚು ಬೇಸಿಗೆ ಕಂಡ ವರ್ಷ ಎಂದು ಹೇಳಿದ್ದಾರೆ. ಒಂದು ಕಡೆ ಅತಿ ಬಿಸಿಲು. ಮತ್ತೊಂದು ಕಡೆ ಅತಿ ಮಳೆ. ಈ ಹವಾಮಾನ ವೈಪರೀತ್ಯಕ್ಕೆ ಕಾರಣವಾದರೂ ಏನು? ಶಾಖ ವರ್ಧಕ ಅನಿಲಗಳು. ಹೌದು ಈ ಶಾಖವರ್ಧಕ ಅನಿಲಗಳು (ಕಾರ್ಬನ್ ಡೈ ಆಕ್ಸೈಡ್, ಮಿಥೈನ್, ನೈಟ್ರಸ್ ಆಕ್ಸೈಡ್ ಮುಂತಾದವು) ಅತಿಯಾದ ಬಿಸಿಲು ಮತ್ತು ಮಳೆಯನ್ನು ಸುರಿಸಲು ಪ್ರಮುಖ ಕಾರಣವಾಗಿವೆ.
ಭಾರತ ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರತಿ ವರ್ಷ ಸುಮಾರು ೨.೫ ಟನ್ಗಳಷ್ಟು ಶಾಖವರ್ಧಕ ಅನಿಲಗಳ ಉತ್ಪಾದನೆಯನ್ನು ಮಾಡುತ್ತಿದ್ದಾನೆ. ಭಾರತ ದೇಶವು ಪ್ರತಿ ವರ್ಷವೂ ಸುಮಾರು ೩ಗಿಗಾ ಟನ್ಗಳಷ್ಟು ಶಾಖವರ್ಧಕ ಅನಿಲಗಳನ್ನು ಉತ್ಪಾದಿಸುತ್ತಿದೆ. ಪ್ರಪಂಚದಾದ್ಯಂತ ಸುಮಾರು ೫೩ ಗಿಗಾ ಟನ್ಗಳಷ್ಟು ಶಾಖವರ್ಧಕ ಅನಿಲಗಳು ಪ್ರತಿ ವರ್ಷವೂ ಉತ್ಪಾದನೆ ಆಗುತ್ತಿವೆ. ಕಳೆದ ಮೂರ್ನಾಲ್ಕು ದಶಕಗಳಿಂದ ಭಾಗಶಃ ಎಲ್ಲಾ ದೇಶಗಳ ನಾಯಕರು ಕೈಗಾರಿಕಾ ಪೂರ್ವ ದಲ್ಲಿದ್ದ ತಾಪಮಾನಕ್ಕಿಂತ ೧.೫ ಡಿಗ್ರಿ ಹೆಚ್ಚಾಗಲೇ ಬಾರದು ಎಂದು ಪ್ರತಿ ವರ್ಷವೂ ದೊಡ್ಡ ದೊಡ್ಡ ಸಮಾವೇಶಗಳನ್ನು ನಡೆಸುತ್ತಾ ಬಂದಿದ್ದಾರೆ. ಆದರೆ ಈ ಸಮಾವೇಶಗಳು, ಚರ್ಚೆಗಳು ಭಾಷಣಕ್ಕೆ ಮಾತ್ರ ಸೀಮಿತವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಹವಾಮಾನ ಸಂಸ್ಥೆ, ಐಪಿಸಿಸಿ ಪ್ಯಾನಲ್ನಂತಹ ಸಂಸ್ಥೆಗಳ ವರದಿಗಳಿಂದ ಸಾಬೀತಾಗಿದೆ. ಹೀಗಾದರೆ ನಮಗೆ ಉಳಿಗಾಲವೆಲ್ಲಿ?
೨೦೨೪ರಲ್ಲಿ ಎಂ.ಕೆ.ರಂಜಿತ್ ಸಿನ್ಹ ಅಂಡ್ ಅದರ್ಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಅಂಡ್ ಅದರ್ಸ್ ಪ್ರಕರಣದಲ್ಲಿ,ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯಿಂದ ಪರಿಸರದ ಮೇಲೆ ಅನೇಕ ರೀತಿಯ ದುಷ್ಪರಿಣಾಮಗಳು ಬೀರುತ್ತಿದ್ದು ಪರಿ ಶುದ್ಧ ಗಾಳಿ, ನೀರು, ಆಹಾರದಂತಹ ಅಗತ್ಯ ಸಂಪನ್ಮೂಲಗಳ ಮೇಲೆ ಪ್ರತಿಕೂಲ ಪರಿಣಾಮ ಗಳಾಗುತ್ತಿವೆ. ಇದು ನಮ್ಮ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವಂತೆ ಮಾಡುತ್ತಿದೆ. ಹಾಗಾಗಿ ಪರಿಸರ ನಾಶದ ವಿರುದ್ಧ ಹೋರಾಡುವ ಹಕ್ಕನ್ನು ಮೂಲಭೂತ ಹಕ್ಕು ಎಂಬುದಾಗಿ ಭಾವಿಸುತ್ತೇವೆ ಎಂದು ಭಾರತೀಯ ಸಂವಿಧಾನದ ೨೧ನೇ ಮತ್ತು ೧೪ನೇ ವಿಧಿಗಳನ್ನು ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್ ತಿಳಿಸಿದೆ.
ಇದನ್ನು ಓದಿ;ಮೈಸೂರು | ವಸಂತ ಗಿಳಿಯಾರ್ ವಿರುದ್ಧ ದೂರು ದಾಖಲಿಸಿದ ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ
ಇದು ಬಡವರು, ಕೃಷಿಕರು, ಸ್ಥಳೀಯ ಸಮುದಾಯಗಳು ಕಲುಷಿತಗೊಂಡ ಮಾಲಿನ್ಯದಿಂದ ಆರೋಗ್ಯ ಮತ್ತು ಜೀವನೋಪಾಯಕ್ಕೆ ಹಾನಿಯಾದಾಗ ಅಥವಾ ಅತಿವೃಷ್ಟಿ, ಅನಾವೃಷ್ಟಿ, ಬರದಂತಹ ಪ್ರಕೃತಿ ವಿಕೋಪಗಳಿಂದಾಗುವ ಅನಾಹುತಗಳ ವಿರುದ್ದ ಕಾನೂನುಬದ್ದವಾಗಿ ಪರಿಹಾರ ಪಡೆಯಲು ಅಥವಾ ಹೋರಾಟ ನಡೆಸಲು ಅನೂಕೂಲವಾಗುವ ತೀರ್ಪು ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನಾದರೂ ಪರಿಸರ-ಪ್ರಕೃತಿಯ ಮೇಲಾಗುತ್ತಿರುವ ಹಾನಿಯನ್ನು ತಡೆಗಟ್ಟಲೇಬೇಕಾಗಿದೆ.ಇದಕ್ಕಾಗಿ ನಮ್ಮ ಸರ್ಕಾರಗಳು ಕಟ್ಟುನಿಟ್ಟಾದ ಶಾಸನವನ್ನು ರೂಪಿಸಬೇಕು. ಬೊಲಿವಿಯಾ ಸರ್ಕಾರವು ೨೦೧೦ರಲ್ಲಿ ಜಾರಿಗೆ ತಂದ ಭೂತಾಯಿಯ ಹಕ್ಕುಗಳ ಕಾಯ್ದೆಯಲ್ಲಿ ಎಲ್ಲಜೀವಿಗಳಿಗೂ ನಮ್ಮೊಂದಿಗೆ ನೆಲೆಸುವ ಹಕ್ಕುಗಳಿವೆ ಎಂದು ತಿಳಿಸುತ್ತದೆ.
ಈಕ್ವೆಡೋರ್ನ ಸಂವಿಧಾನದಲ್ಲಿ ಪ್ರಕೃತಿಗೂ ಮನುಷ್ಯರಿಗಿರುವ ಎಲ್ಲಾ ಹಕ್ಕುಗಳಿವೆ ಎನ್ನುವುದನ್ನು ಸೇರಿಸಲಾಗಿದೆ. ಕ್ಯೂಬಾ ದೇಶವು ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟವನ್ನು ತನ್ನ ಸಂವಿಧಾನದಲ್ಲಿ ಸೇರಿಸಿದೆ. ಹೀಗೆ ನಮ್ಮ ದೇಶದಲ್ಲಿಯೂ ಪರಿಸರ-ಪ್ರಕೃತಿಯ ಸಂರಕ್ಷಣೆಗಾಗಿ ಈ ಭೂಮಿಯ ಮೇಲೆ ಜೀವಿಸುತ್ತಿರುವ ಪ್ರತಿಯೊಂದು ಜೀವಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ ಎನ್ನುವುದನ್ನು ಸಾಂವಿಧಾನಿಕವಾಗಿ ತಿಳಿಸುತ್ತಾ ಅದನ್ನು ಕಾರ್ಯರೂಪಕ್ಕೆ ತರುವಂತಹ ಕಾನೂನನ್ನು ಜಾರಿಗೊಳಿಸಬೇಕಾಗಿದೆ.
” ಭಾರತ ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರತಿ ವರ್ಷ ಸುಮಾರು ೨.೫ ಟನ್ಗಳಷ್ಟು ಶಾಖವರ್ಧಕ ಅನಿಲಗಳ ಉತ್ಪಾದನೆಯನ್ನು ಮಾಡುತ್ತಿದ್ದಾನೆ. ಭಾರತ ದೇಶವು ಪ್ರತಿ ವರ್ಷವೂ ಸುಮಾರು ೩ ಗಿಗಾ ಟನ್ಗಳಷ್ಟು ಶಾಖವರ್ಧಕ ಅನಿಲಗಳನ್ನು ಉತ್ಪಾದಿಸುತ್ತಿದೆ.”
-ಅವಿನಾಶ್ ಟಿ.ಜಿ.ಎಸ್.





